ಬಸ್ ನಲ್ಲಿ ಬೆಂಕಿ: ಡ್ರೈವರ್ ಹುಷಾರು, ಪ್ರಯಾಣಿಕರು ಪಾರು
ದಾವಣಗೆರೆ, ಆಗಸ್ಟ್ 22: ಹರಿಹರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು. ಚಾಲಕನ ಸಮಯ ಸ್ಫೂರ್ತಿಯಿಂದ ದೊಡ್ಡ ಅನಾಹುತವೊಂದು ತಪ್ಪಿ, ಹತ್ತಾರು ಜನರ ಪ್ರಾಣ ಉಳಿಯಿತು.
ಚಾಮರಾಜನಗರ ಡಿಪೋಗೆ ಸೇರಿದ ಬಸ್ಸು ಮೈಸೂರಿನಿಂದ ದಾವಣಗೆರೆಗೆ ಹೊರಟಿತ್ತು. ಹರಿಹರವನ್ನು ಪ್ರವೇಶಿಸಿದ ಕೆಲ ಸಮಯದಲ್ಲೇ ಶಾರ್ಟ್ ಸರ್ಕೀಟ್ ನಿಂದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಇದು ಕೂಡಲೇ ಚಾಲಕನ ಗಮನಕ್ಕೆ ಬಂದಿದೆ. ಜಾಗೃತನಾದ ಆತ, ರಸ್ತೆ ಬದಿಯಲ್ಲೇ ಬಸ್ ನಿಲ್ಲಿಸಿ, ಪ್ರಯಾಣಿಕರನ್ನು ಕೆಳಗಿಳಿಸಿದ್ದಾನೆ. ಸ್ಥಳಕ್ಕೆ ಧಾವಿಸಿ ಬಂದ ಸ್ಥಳೀಯರು ಬೆಂಕಿ ನಂದಿಸಲು ಸಹಕಾರ ನೀಡಿದ್ದಾರೆ. ಬಳಿಕ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಪೂರ್ಣವಾಗಿ ನಂದಿಸಿದ್ದಾರೆ.[ಹುಬ್ಬಳ್ಳಿ ಬಸ್ ದುರಂತದಲ್ಲಿ ಕುಂದಾಪುರದ ಸುರೇಶ್ ಸಾವು]
ಬಸ್ ನಲ್ಲಿ ಐವತ್ತಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಬೆಂಕಿ ಅವಘಡದಲ್ಲಿ ಬಸ್ ನ ಕೆಲ ಭಾಗಗಳಿಗೆ ಹಾನಿಯಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಕೆಎಸ್ ಆರ್ ಟಿಸಿ ಡಿಪೋ ವ್ಯವಸ್ಥಾಪಕ, ಪಿಎಸ್ ಐಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.