ಹೊನ್ನಾಳಿ "ಹೋರಿ' ರೇಣುಕಾಚಾರ್ಯ ಮೇಲೆ ಎಫ್ಐಆರ್ ದಾಖಲು
ದಾವಣಗೆರೆ, ಜನವರಿ 31: ಕೋಮು ಭಾವನೆ ಕೆರಳಿಸಿದ ಹಿನ್ನೆಲೆಯಲ್ಲಿ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಶಾಸಕರಾಗಿರುವ ಎಂ.ಪಿ.ರೇಣುಕಾಚಾರ್ಯ ಇತ್ತೀಚಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಜಾಗೃತಿ ಸಭೆಯಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ.
ಮುಸ್ಲಿಮರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ರೇಣುಕಾಚಾರ್ಯ
ಮಸೀದಿಗಳಲ್ಲಿ ಮದ್ದು, ಗುಂಡು, ಬಂದೂಕು ಸಂಗ್ರಹಿಸಲು ಮೌಲ್ವಿಗಳು ಫತ್ವಾ ಹೊರಡಿಸುತ್ತಾರೆ ಎಂದಿದ್ದರು. ಅದೇ ರೀತಿ ನಮ್ಮ ದೇವಾಲಯಕ್ಕೆ ಬನ್ನಿ ನಿಮಗೆ ತೀರ್ಥ ಪ್ರಸಾದ ನೀಡುತ್ತೇವೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದರು.
ಮುಸ್ಲಿಮರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದ ರೇಣುಕಾಚಾರ್ಯ, 'ಕೆಲ ಮಸೀದಿಗಳಲ್ಲಿ ಸಶಸ್ತ್ರಗಳನ್ನು ಸಂಗ್ರಹ ಮಾಡುತ್ತಿದ್ದು, ಇದಕ್ಕೆ ಮಸೀದಿಗಳು ಬೇಕಾ, ಮಸೀದಿಗಳು ಭಯೋತ್ಪಾದನೆಗೆ ಪ್ರೇರಣೆ ನೀಡುತ್ತಿವೆ, ಇದನ್ನು ನೋಡಿ ಕೊಂಡು ನಾವು ಸುಮ್ಮನಿರಬೇಕಾ?' ಎಂದು ಪ್ರಚೋದನಕಾರಿ ಮಾತುಗಳನ್ನಾಡಿದ್ದರು.
ಹೊನ್ನಾಳಿ, ನ್ಯಾಮತಿ ತಾಲೂಕನ್ನು ಸಂಪೂರ್ಣ ಕೇಸರಿಮಯ ಮಾಡ್ತೀನಿ ಎಂದು ಪಣ ತೊಟ್ಟ ರೇಣುಕಾಯಚಾರ್ಯ, ಮುಸ್ಲಿಂ ಕೇರಿಗಳಿಗೆ ಬಂದಿರುವ ಹಣವನ್ನು ಹಿಂದೂಗಳ ಕೇರಿಗಳ ಅಭಿವೃದ್ಧಿಗೆ ಬಳಸುವ ಮೂಲಕ ಅವರನ್ನು ಎಲ್ಲಿ ಇಡಬೇಕೋ ಅಲ್ಲಿ ಇಡ್ತೇವೆ' ಎಂದಿದ್ದರು.
ಹೊನ್ನಾಳಿ ಮಾತ್ರವಲ್ಲ, ಇಡೀ ಕರ್ನಾಟಕವನ್ನೇ ಕೇಸರೀಕರಣ ಮಾಡುತ್ತೇವೆ: ರೇಣುಕಾಚಾರ್ಯ
ಆ ಮೂಲಕ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುವುದಾಗಿ ಬಹಿರಂಗವಾಗಿಯೇ ಹೇಳಿದರು. ಕ್ಷೇತ್ರದ ಎಲ್ಲ ಜನರನ್ನೂ ತಾವು ಸಮಾನವಾಗಿ ನೋಡುವುದಿಲ್ಲವೆಂಬುದನ್ನೂ ಬಹಿರಂಗವಾಗಿ ಹೇಳಿದ್ದರು.
ಅಭಿಬುಲ್ಲಾ ಎಂಬುವರಿಂದ ದೂರು ದಾಖಲಿಸಲಾಗಿದ್ದು, ಸೆಕ್ಷನ್ 153 ಎ, ಮತ್ತು 295 ಎ ಅನ್ವಯ ಹೊನ್ನಾಳಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.