ಸ್ವಾಮೀಜಿ ಮಧ್ಯಸ್ಥಿಕೆಯಿಂದ ಕೊನೆಗೂ ಅಂತ್ಯವಾಯಿತು ಕೋಣದ ಗಲಾಟೆ
ದಾವಣಗೆರೆ, ಅಕ್ಟೋಬರ್ 19: ನಾಲ್ಕು ದಿನಗಳಿಂದ ಭಾರೀ ಸುದ್ದಿಯಾಗಿದ್ದ ದೇವರ ಕೋಣದ ಪ್ರಕರಣ ಕೊನೆಗೂ ಇತ್ಯರ್ಥವಾಗಿದೆ. ಹೊನ್ನಾಳಿಯ ಹಿರೇಕಲ್ ಮಠದ ಡಾ.ಚನ್ನಮಲ್ಲಿಕಾರ್ಜುನ ಸ್ವಾಮೀಜಿಗಳು ನಡೆಸಿದ ಶಾಂತಿ ಸಭೆಯಲ್ಲಿ ಒಂದು ಕೋಣಕ್ಕಾಗಿ ಎರಡು ಗ್ರಾಮಗಳ ನಡುವೆ ನಡೆದಿದ್ದ ಜಗಳ ಅಂತ್ಯಗೊಂಡಿದೆ.
ಇದೇ 14ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ದೇವಿಯ ಕೋಣವೊಂದನ್ನು ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿ ಗ್ರಾಮಸ್ಥರು ತೆಗೆದುಕೊಂಡು ಹೋಗಿದ್ದರು. ಎರಡು ಗ್ರಾಮದವರು ಇದು ನಮ್ಮ ಕೋಣ ಎಂದು ಜಗಳ ಆರಂಭಿಸಿದ್ದರು. ಜಗಳದ ಕುರಿತು ವಿಷಯ ತಿಳಿದ ಪೊಲೀಸರು ಕೋಣವನ್ನು ತಾತ್ಕಾಲಿಕವಾಗಿ ಶಿವಮೊಗ್ಗ ಗೋ ಶಾಲೆಗೆ ಸ್ಥಳಾಂತರಿಸಿದ್ದರು. ಜತೆಗೆ ಕೋಣದ ಡಿಎನ್ ಎ ಪರೀಕ್ಷೆ ಮಾಡಿಸಲು ನಿರ್ಧರಿಸಿದ್ದರು.
ಜಗಳ ಬಿಡಿಸಲು ದೇವರ ಕೋಣಕ್ಕೆ ಡಿಎನ್ಎ ಪರೀಕ್ಷೆ ಮಾಡಿಸಿದ ಪೊಲೀಸರು
ನಿನ್ನೆ ಪೊಲೀಸರು ಎರಡು ಗ್ರಾಮಗಳ ಗ್ರಾಮಸ್ಥರನ್ನು ಹೊನ್ನಾಳಿ ಹಿರೇಕಲ್ ಮಠಕ್ಕೆ ಕರೆಸಿದ್ದಾರೆ. ಈ ವೇಳೆ ಉಭಯ ಗ್ರಾಮಸ್ಥರ ಸಭೆ ನಡೆಸಿ ಮಠದ ಗದ್ದುಗೆ ಮುಟ್ಟಿ ಪ್ರಮಾಣ ಮಾಡುವಂತೆ ಹಿರೇಕಲ್ ಮಠದ ಡಾ. ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹಾರನಹಳ್ಳಿ ಹಾಗೂ ಬೇಲಿಮಲ್ಲೂರು ಗ್ರಾಮಸ್ಥರಿಗೆ ಆದೇಶ ಮಾಡಿದರು.
ಎರಡು ಗ್ರಾಮದವರು ಪ್ರಮಾಣ ಮಾಡುತ್ತಿದ್ದಂತೆ ಸ್ವಾಮೀಜಿಗಳು ಕೋಣವನ್ನು ಬೇಲಿ ಮಲ್ಲೂರಿನವರು ತೆಗೆದುಕೊಂಡು ಹೋಗಲಿ ಎಂದು ಆದೇಶ ನೀಡಿದರು. ನಮ್ಮೂರ ದೇವಿಯ ಕೋಣಕ್ಕಾಗಿ ನಾವು ಹೋರಾಟ ಮಾಡಿದ್ದೆವು. ತಾಲೂಕು ಆಡಳಿತ ಕೂಡ ಮುತುವರ್ಜಿ ವಹಿಸಿ ಮಠದ ಅಂಗಳದಲ್ಲಿ ಎರಡು ಗ್ರಾಮಗಳ ಗ್ರಾಮಸ್ಥರ ಜೊತೆ ಮಾತಾಡಿ ನಮ್ಮ ಕೋಣ ನಮಗೆ ಒಪ್ಪಿಸಿದ್ದಾರೆ ಎಂದು ಬೇಲಿಮಲ್ಲೂರಿನವರು ಸಂತಸಪಟ್ಟರು. ಆದರೆ ಹಾರನಹಳ್ಳಿಯವರು ಸ್ವಲ್ಪ ಬೇಸರಗೊಂಡಿದ್ದರೂ ಒಪ್ಪಿಗೆ ಇರುವುದಾಗಿ ಹೇಳಿದರು.
ದೇವರ ಕೋಣಕ್ಕೆ ಶುರುವಾಯ್ತು ಎರಡು ಊರುಗಳ ನಡುವೆ ಗಲಾಟೆ!
ಕೊನೆಗೂ ಕಳೆದ ನಾಲ್ಕು ದಿನಗಳಿಂದ ಭಾರೀ ಸುದ್ದಿ ಮಾಡಿದ್ದ ಕೋಣದ ವಿಚಾರ ಅಂತ್ಯ ಕಂಡಿದೆ.