ದಾವಣಗೆರೆಯಲ್ಲಿ ಕೊರೊನಾ ವೈರಸ್ ಜೊತೆ ಹಕ್ಕಿ ಜ್ವರದ ಭೀತಿ
ದಾವಣಗೆರೆ, ಮಾರ್ಚ್ 17: ಚೀನಾದಲ್ಲಿ ಹುಟ್ಟಿ ಇಂದು ಇಡೀ ಜಗತ್ತಿಗೆ ಹಬ್ಬುತ್ತಿರುವ ಕೊರೊನಾ ವೈರಸ್ ಈಗ ನಮ್ಮ ಭಾರತಕ್ಕೂ ಬಂದು ಜನರನ್ನು ಭಯಭೀತರನ್ನಾಗಿ ಮಾಡಿದೆ. ಕೊರೊನಾ ಭಯದಲ್ಲಿ ಇರುವಾಗಲೇ ಈಗ ಹಕ್ಕಿಜ್ವರದ ಭೀತಿ ಆರಂಭಿಸಿದೆ. ಇದರಿಂದ ಕುಕ್ಕುಟೋದ್ಯಮಕ್ಕೆ ಬಾರಿ ಪೆಟ್ಟು ಬಿದ್ದಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದ ಅಭಿಷೇಕ್ ಎನ್ನುವರ ಕೋಳಿ ಫಾರಂ ನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರೊದು ಈಗ ದೃಢಪಟ್ಟಿದೆ. ಬೆಣ್ಣೆನಗರಿ ಜನರು ಕೊರೊನಾ ವೈರಸ್ ಭೀತಿಯಲ್ಲೇ ದಿನ ದೂಡುತ್ತಿದ್ದಾರೆ. ಆದರೆ ಇದೀಗ ಹಕ್ಕಿಜ್ವರ ಕಾಣಿಸಿಕೊಂಡಿರುವುದು ಜನರಲ್ಲಿನ ಆತಂಕ ಹಿಮ್ಮಡಿಗೊಳಿಸಿದೆ.
ಬನ್ನಿಕೋಡು ಗ್ರಾಮದ ಅಭಿಷೇಕ್ ಎಂಬುವವರು ಕೋಳಿ ಫಾರಂ ಕಳೆದ ಕೆಲ ದಿನಗಳ ಹಿಂದೆ ಕೋಳಿಗಳು ಸಾಯಲು ಆರಂಭವಾಗಿದ್ದವು. ಇದರಿಂದ ಆತಂಕಗೊಂಡ ಅಭಿಷೇಕ್ ಒಂಬತ್ತು ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ಗುಂಡಿ ತೆಗೆದು ಹೂತು ಹಾಕಿದ್ದರು.
ಇದರಿಂದ ಅನುಮಾನಗೊಂಡ ಪಶು ವೈದ್ಯಾಧಿಕಾರಿಗಳು ಕೋಳಿಗಳನ್ನು ಸ್ಯಾಂಪಲ್ ಅನ್ನು ಬೋಪಾಲ್ ಗೆ ಕಳುಹಿಸಿದ್ದು, ಇದೀಗ ಹಕ್ಕಿಜ್ವರದಿಂದ ಮೃತ ಪಟ್ಟಿರೋದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಬನ್ನಿಕೋಡು ಗ್ರಾಮದ ಕೋಳಿ ಫಾರಂ ವ್ಯಾಪ್ತಿಯ ಒಂದು ಕಿಲೋ ಮೀಟರ್ ವ್ಯಾಪ್ತಿಯನ್ನು ಸೋಂಕು ಪೀಡಿತ ವಲಯ ಮತ್ತು ಹತ್ತು ಕಿಲೋಮೀಟರ್ ವರೆಗೆ ಸರ್ವೇಕ್ಷಣಾ ವಲಯ ಎಂದು ಜಿಲ್ಲಾಧಿಕಾರಿಗಳು ಘೋಷಣೆ ಮಾಡಿದ್ದಾರೆ. ಇದೀಗ ಹಕ್ಕಿಜ್ವರ ಎಂದು ದೃಢಪಟ್ಟಿರುವುದರಿಂದ ಕೋಳಿ ಫಾರಂ ಮಾಲೀಕ ಅಭಿಷೇಕ್ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.
ಹಕ್ಕಿಜ್ವರ ಎಂದು ದೃಢ ಪಡುತ್ತಿದ್ದಂತೆ ಅಧಿಕಾರಿಗಳ ತಂಡವೇ ಬನ್ನಿಕೋಡು ಗ್ರಾಮಕ್ಕೆ ಭೇಟಿ ನೀಡಿತ್ತು. ಕೋಳಿ ಫಾರಂ ವೀಕ್ಷಣೆ ಮಾಡಿದ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಊರು ತುಂಬ ಡಂಗೂರ ಸಾರಿಸುವ ಮೂಲಕ ಬದುಕಿದ, ಸತ್ತ ಕೋಳಿಗಳನ್ನು ಗ್ರಾಮದ ಹೊರಗಿನ ಗುಂಡಿಯಲ್ಲಿ ತಂದು ಹಾಕುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು.
ಅಲ್ಲದೆ ಆಶಾ ಕಾರ್ಯಕರ್ತರು, ವೈದ್ಯರು ಗ್ರಾಮದ ಪ್ರತಿಯೊಂದು ಮನೆಗೆ ಭೇಟಿ ನೀಡಿದ ಗ್ರಾಮಸ್ಥರ ಆರೋಗ್ಯ ಪರಿಶೀಲನೆ ನಡೆಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿನ ಕೋಳಿ, ಪಕ್ಷಿಗಳನ್ನು ಗುಂಡಿಯಲ್ಲಿ ಹೂತು ಹಾಕಲು ಸಿದ್ದತೆ ಮಾಡಿಕೊಂಡಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಅಲ್ಲದೇ ಹಕ್ಕಿ ಜ್ವರ ಹೆಚ್ಚಾಗದಂತೆ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಂಡಿದ್ದಾರೆ. ಅದರೆ ಕೋಳಿ ಸಾಕಣಿಕೆದಾರರ ಸಂಘದವರು ಮಾತ್ರ ಇಡೀ ಜಿಲ್ಲೆಯಲ್ಲಿರುವ ಕೋಳಿಗಳಿಗೆ ಹಕ್ಕಿ ಜ್ವರ ಬಂದಿದ್ದು, ಕೂಡಲೇ ಜಿಲ್ಲೆಯಲ್ಲಿರುವ ಎಲ್ಲಾ ಕೋಳಿ ಫಾರಂ ನಲ್ಲಿರುವ ಕೋಳಿಗಳನ್ನು ಕಲ್ಲಿಂಗ್ ಮಾಡಬೇಕು ಹಾಗೂ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.