ನ.26, 27 ರಂದು ದೆಹಲಿಯಲ್ಲಿ ರೈತರ ಬೃಹತ್ ಪ್ರತಿಭಟನೆ
ದಾವಣಗೆರೆ, ನವೆಂಬರ್ 20: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ನ.26 ಹಾಗೂ 27 ರಂದು ರೈತರ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
'ಎಪಿಎಂಸಿ ತಿದ್ದುಪಡಿ, ಅಗತ್ಯ ವಸ್ತುಗಳ ಕಾಯ್ದೆ, ಕೃಷಿ ಬೆಲೆ ನೀತಿ, ಭೂ ಸುಧಾರಣಾ ಕಾಯ್ದೆಗಳ ತಿದ್ದುಪಡಿ ಮೂಲಕ ಸರ್ಕಾರಗಳು ಗ್ರಾಮೀಣ ಜನರನ್ನು ಒಕ್ಕಲೆಬ್ಬಿಸುತ್ತಿವೆ. ಈ ಮೂಲಕ ಕಾರ್ಪೊರೇಟ್, ಎಂಎನ್ಸಿ ಕಂಪೆನಿಗಳಿಗೆ ಅನುಕೂಲ ಮಾಡಿಕೊಡಲು ಮುಂದಾಗಿವೆ. ಈಗಾಗಲೇ ಬಿತ್ತನೆ ಬೀಜದ ಸೌರ್ವಭೌಮತ್ವ ರೈತರ ಕೈತಪ್ಪಿ ಹೋಗಿದೆ. ಈರುಳ್ಳಿ, ಆಲೂಗಡ್ಡೆ, ಮೆಕ್ಕೆಜೋಳ, ಬೇಳೆಕಾಳು, ಎಣ್ಣೆಕಾಳು, ಸಿರಿಧಾನ್ಯಗಳನ್ನು ಅಗತ್ಯ ವಸ್ತುಗಳ ಕಾಯ್ದೆಯಿಂದ ಹೊರಗಿಡಲಾಗಿದೆ. ಇದರಿಂದ ಕನಿಷ್ಠ ಬೆಂಬಲ ಬೆಲೆ ಸಿಗುವುದಿಲ್ಲ' ಎಂದು ಶುಕ್ರವಾರ ದಾವಣಗೆರೆಯಲ್ಲಿ ನಡದ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಯಾವುದೇ ಕಾರಣಕ್ಕೂ ಜಮೀನು ಮಾರಾಟ ಮಾಡಬೇಡಿ
ಅಗತ್ಯ ವಸ್ತುಗಳ ಕಾಯ್ದೆಯಿಂದ ಬೆಳೆಗಳನ್ನು ಹೊರಗಿಟ್ಟರೆ ಕನಿಷ್ಠ ಬೆಂಬಲ ಬೆಲೆ ನಿರ್ಧರಿಸುವುದು ಸರ್ಕಾರದ ಹಿಡಿತದಲ್ಲಿ ಇರುವುದಿಲ್ಲ. ಬೆಲೆ ನಿರ್ಧಾರ ಸ್ಟಾಕ್ ಮಾರುಕಟ್ಟೆಯ ಹಿಡಿತದಲ್ಲಿ ಇರುತ್ತದೆ. ಕಾರ್ಪೊರೇಟ್ ಕಂಪೆನಿಗಳ ಪರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ರೈತ ಮುಖಂಡ ಆಪಾದಿಸಿದರು. 'ತುಂಡು ಭೂಮಿ ಇರುವ ರೈತರು ಯಾವುದೇ ಕಾರಣಕ್ಕೂ ಜಮೀನು ಮಾರಾಟ ಮಾಡಬೇಡಿ. ಕೊರೊನಾ ಸಂಕಷ್ಟದಲ್ಲಿ ಊರಿಗೆ ಮರಳಿದ ಸಾವಿರಾರು ಯುವಕರಿಗೆ ನೆರವಾಗಿದ್ದು, ಇದೇ ತುಂಡು ಭೂಮಿ. ಹಾಗಾಗಿ ಯಾವುದನ್ನೂ ಮಾರಾಟ ಮಾಡಬೇಡಿ' ಎಂದು ಮನವಿ ಮಾಡಿದರು.
ಬಾಗಲಕೋಟೆಯಿಂದ ಬಾಂಗ್ಲಾಗೆ ಮೆಕ್ಕೆಜೋಳ ರಫ್ತು
ಕನಿಷ್ಠ ಬೆಂಬಲ ಬೆಲೆ ನೀಡಲು ಹೇಗೆ ಸಾಧ್ಯ
ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್ ಬಸವರಾಜಪ್ಪ ಮಾತನಾಡಿ, 'ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ಕನಿಷ್ಠ ಬೆಂಬಲ ಬೆಲೆಗೆ ಯಾವುದೇ ತೊಂದರೆ ಇಲ್ಲ ಎನ್ನುತ್ತದೆ. ಮೆಕ್ಕೆಜೋಳ, ಭತ್ತ, ತೊಗರಿ ಖರೀದಿ ಕೇಂದ್ರವನ್ನೂ ಆರಂಭಿಸುತ್ತಿಲ್ಲ. ಖರೀದಿ ಕೇಂದ್ರ ತೆರೆಯದೆ ಕನಿಷ್ಠ ಬೆಂಬಲ ಬೆಲೆ ನೀಡಲು ಹೇಗೆ ಸಾಧ್ಯ. ಈ ಬಗ್ಗೆ ಸ್ಪಷ್ಟಪಡಿಸಲಿ' ಎಂದು ಒತ್ತಾಯಿಸಿದರು.
ಕಪ್ಪು ಹಣವನ್ನು ಬಿಳಿ ಮಾಡಲು ಅನುಕೂಲ
'ಬಗರ್ಹುಕುಂ ಸಾಗುವಳಿದಾರರ ಪರ ಹೋರಾಟ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಈಗ ಅಧಿಕಾರದಲ್ಲಿದ್ದರೂ ರೈತರಿಗೆ ಸಾಗುವಳಿ ಪತ್ರ ಏಕೆ ನೀಡಿಲ್ಲ' ಎಂದು ಪ್ರಶ್ನಿಸಿದ ಅವರು, ಭೂ ಸುಧಾರಣಾ ಕಾಯ್ದೆ ಮೂಲಕ ಕಪ್ಪು ಹಣವನ್ನು ಬಿಳಿ ಮಾಡಲು ಅನುಕೂಲ ಮಾಡಿಕೊಡುತ್ತಿದ್ದಾರೆ' ಎಂದು ಆರೋಪಿಸಿದರು.
Recommended Video
23 ರಂದು ರೈತರ ಪ್ರತಿಭಟನೆ
ಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಪಹಣಿ ನೀಡಲು ಒತ್ತಾಯಿಸಿ ನ.23 ರಂದು ಚನ್ನಗಿರಿ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು. ಸಂಘದ ಕಾರ್ಯಾಧ್ಯಕ್ಷ ಮಂಜುನಾಥಗೌಡ, ಈಚಘಟ್ಟ ಸಿದ್ಧವೀರಪ್ಪ, ಹೊನ್ನೂರು ಮುನಿಯಪ್ಪ, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಇದ್ದರು.