ಧಾರವಾಡದ ಅಪಘಾತದಲ್ಲಿ ಮೃತಪಟ್ಟವರ ಉಂಗುರ, ವಾಚ್ ನೋಡಿ ಭಾವುಕರಾದ ಕುಟುಂಬಸ್ಥರು
ದಾವಣಗೆರೆ, ಜನವರಿ 21: ಧಾರವಾಡದ ಬಳಿ ಕೆಲ ದಿನಗಳ ಹಿಂದೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಆತ್ಮಶಾಂತಿಗಾಗಿ ದಾವಣಗೆರೆ ನಗರದ ಸೇಂಟ್ ಪೌಲ್ಸ್ ಕಾನ್ವೆಂಟ್ ಆವರಣದಲ್ಲಿ ಮೇಣದಬತ್ತಿ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶಾಲಾವರಣದಲ್ಲಿ ಶೋಕತಪ್ತ ಗಾಯನದ ಮೂಲಕ ಮಕ್ಕಳು, ಸಂಬಂಧಿಕರು ಡಾ.ವೀಣಾ ಪ್ರಕಾಶ, ಪ್ರೀತಿ ರವಿಕುಮಾರ್, ಪರಂಜ್ಯೋತಿ ಶಶಿಧರ್, ವರ್ಷಿತಾ ವೀರೇಶ್, ಮಂಜುಳಾ ನಟೇಶ್, ರಾಜೇಶ್ವರಿ ಶಿವಕುಮಾರ್, ಮಾನಸಿ, ಕುಮಾರಿಯರಾದ ಯಶ್ಮಿತಾ ಮತ್ತು ಕ್ಷರಾ ಹಾಗೂ ವಾಹನ ಚಾಲಕ, ಕ್ಲೀನರ್ ಆತ್ಮಕ್ಕೆ ಶಾಂತಿ ಕೋರಿದರು.
ಧಾರವಾಡ ಅಪಘಾತ; ಮೃತಪಟ್ಟವರ ಕುಟುಂಬದ ಆಕ್ರೋಶಕ್ಕೆ ಕಾರಣವೇನು?
ದೀಪ ಬೆಳಗಿಸಿದವರ ಕಣ್ಣಾಲಿಗಳು ಒದ್ದೆಯಾಗಿದ್ದವು. ಶಾಲಾ ಆಡಳಿತ ಮಂಡಳಿ, ಉಪನ್ಯಾಸಕರು, ಮೃತರ ಸ್ನೇಹಿತರು, ಸಂಬಂಧಿಕರು ಭಾಗಿಯಾಗಿದ್ದರು. ಗಾಯನಗಳ ಮೂಲಕ ಅಗಲಿದವರಿಗೆ ವಿವಿಧ ಧರ್ಮಗಳ ಶಾಂತಿ ಸಂದೇಶ ವಾಚನ ಮಾಡಲಾಯಿತು. ಅಪಘಾತದಲ್ಲಿ ಅದೃಷ್ಟವಷಾತ್ ಬದುಕುಳಿದ ಆಶಾ, ಉಷಾ, ರಜನಿ ಹಾಗೂ ಅನ್ಯಾ ಅವರು ಶೀಘ್ರ ಗುಣಮುಖವಾಗಲು ಪ್ರಾರ್ಥನೆ ಸಲ್ಲಿಸಲಾಯಿತು.
ಮೃತಪಟ್ಟವರ ಉಂಗುರ, ವಾಚ್ ನೋಡಿ ಭಾವುಕ
ಧಾರವಾಡದಲ್ಲಿ ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾವಣಗೆರೆಯ ಮಹಿಳೆಯರ ಒಡವೆ ಸೇರಿ ಹಲವು ಮಹಿಳೆಯರ ವಸ್ತುಗಳನ್ನು ಅವರ ಕುಟುಂಬದ ಸದಸ್ಯರಿಗೆ ದಾನಮ್ಮ ದೇವಿ ದೇವಸ್ಥಾನದ ಬಳಿ ಒಪ್ಪಿಸಲಾಯಿತು.
ಅಪಘಾತದಲ್ಲಿ ಗಾಯಗೊಂಡಿದ್ದ ಆಶಾ ಜಗದೀಶ್ ಬೇತೂರ್ ಅವರ ಸಂಬಂಧಿಕರಾದ ವಿಜಯ್ಕುಮಾರ್ ದೇವರಮನಿ ಅವರು ವ್ಯಾನಿಟಿ ಬ್ಯಾಗ್ಗಳು ಹಾಗೂ ಆಭರಣಗಳನ್ನು ಹಾಗೂ ಹುಬ್ಬಳ್ಳಿಯ ಬಿಳಿಚೋಡು ಉಮೇಶ್ ಅವರು ಕಾರಿನಲ್ಲಿ ಬಟ್ಟೆ ಹಾಗೂ ಬ್ಯಾಗ್ಗಳನ್ನು ತೆಗೆದುಕೊಂಡು ಬಂದರು.
ಬಂಗಾರದ ಚೈನುಗಳು ಅರ್ಧಕ್ಕೆ ಕಟ್ ಆಗಿದ್ದವು
ದಾವಣಗೆರೆಯ ದೊಡ್ಡಪೇಟೆಯ ಬಸವೇಶ್ವರ ಮತ್ತು ದಾನಮ್ಮ ದೇವಾಲಯದಲ್ಲಿ ಪೊಲೀಸರು ಹಾಗೂ ದೇವಾಲಯದ ಟ್ರಸ್ಟಿಗಳ ಸಮ್ಮುಖದಲ್ಲಿ ಮೃತರ ಮಕ್ಕಳು, ಪತಿಯಂದಿರು ಹಾಗೂ ಸಂಬಂಧಿಕರು ಅಪಘಾತದಲ್ಲಿ ಮೃತಪಟ್ಟವರ ವಾಚ್ಗಳು, ಬಂಗಾರದ ಆಭರಣಗಳು, ಉಂಗುರ, ವ್ಯಾನಿಟಿ ಬ್ಯಾಗ್ಗಳು, ಮೊಬೈಲ್ಗಳನ್ನು ನೋಡಿ ಭಾವುಕರಾದರು. ಕೆಲ ಬಂಗಾರದ ಚೈನುಗಳು ಅರ್ಧಕ್ಕೆ ಕಟ್ ಆಗಿದ್ದವು. ಕಿವಿಯೋಲೆಗಳು ಒಂದು ಇದ್ದರೆ ಮತ್ತೊಂದು ಇಲ್ಲದಂತೆ ಆಗಿದ್ದವು. ಬ್ಯಾಗ್ನೊಳಗೆ ಇಟ್ಟಿದ ಕೆಲ ಮೊಬೈಲ್ಗಳು ಸುರಕ್ಷಿತವಾಗಿದ್ದವು. ಕೆಲವು ಜಜ್ಜಿ ಹೋಗಿದ್ದವು.
ದಾವಣಗೆರೆ; 13 ಕುಟುಂಬಗಳಿಗೆ ಆಘಾತ ತಂದ ಧಾರವಾಡದ ಅಪಘಾತ
ಉಪಾಹಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು
ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಯ ಎಸ್ಐ ವೀರೇಶ್ ಹಾಗೂ ಸಿಬ್ಬಂದಿ ಸಮ್ಮುಖದಲ್ಲಿ ಫೋಟೋ ಜೊತೆಗೆ ತೆಗೆದುಕೊಂಡ ಹೋದ ವಸ್ತುಗಳನ್ನು ದಾಖಲಿಸಿಕೊಂಡರು.
‘ಧಾರವಾಡದಲ್ಲೇ ನೆಲೆಸಿರುವ ವಿಜಯ್ಕುಮಾರ್ ಅವರ ಮನೆಯಲ್ಲೇ ಉಪಾಹಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅದಕ್ಕೂ ಮೊದಲೇ ಅಪಘಾತವಾಗಿತ್ತು. ಅಪಘಾತದಲ್ಲಿ ಗಾಯಗೊಂಡಿರುವ ಆಶಾ ಜಗದೀಶ್ ಅವರು ವಿಜಯ್ಕುಮಾರ್ ದೇವರಮನಿ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು' ಎಂದು ಆಶಾ ಅವರ ಮೈದುನ ಬೇತೂರು ರಾಜೇಶ್ ಅವರು ಮಾಹಿತಿ ನೀಡಿದರು.
ಗಾಯಗೊಂಡವರನ್ನು ಮೊದಲು ಆಸ್ಪತ್ರೆಗೆ ಸೇರಿಸಿದ್ದರು
ವಿಜಯ್ಕುಮಾರ್ ಅವರು ಸ್ನೇಹಿತರೊಂದಿಗೆ ಸ್ಥಳಕ್ಕೆ ಹೋದರು. ಅಪಘಾತ ನೋಡಿ ಆಘಾತಗೊಂಡಿದ್ದರು. ಧಾರವಾಡ ಎಸ್ಪಿ ಅವರು ಸ್ಥಳದಲ್ಲಿದ್ದು, ಗಾಯಗೊಂಡವರನ್ನು ಮೊದಲು ಆಸ್ಪತ್ರೆಗೆ ಸೇರಿಸಿ ಎಂದು ಹೇಳಿದ ಮೇಲೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
‘ಅಪಘಾತದಲ್ಲಿ ಮೃತಪಟ್ಟವರ ಸಂಬಂಧಿಕರು ಇಲ್ಲಿಗೆ ಬರುವುದು ಕಷ್ಟ ಎಂದು ತಿಳಿದು ನಾನೇ ದಾವಣಗೆರೆಗೆ ತೆಗೆದುಕೊಂಡು ಬಂದೆ. ಅಲ್ಲಿ ಇದ್ದ ವಸ್ತುಗಳಲ್ಲಿ ರಾಜೇಶ್ವರಿ ಬಂದಮ್ಮನವರ್ ಅವರ ಮಾಂಗಲ್ಯ ಸರವನ್ನು ಅಪಘಾತವಾದ ದಿನವೇ ಕೊಟ್ಟು ಕಳುಹಿಸಲಾಗಿತ್ತು. ಆದರೆ ವಾಪಸ್ ತರಿಸಿ ಪೊಲೀಸರ ಸಮ್ಮುಖದಲ್ಲಿ ನೀಡಲಾಯಿತು' ಎಂದು ವಿಜಯ್ಕುಮಾರ್ ಹೇಳಿದರು.
Recommended Video
‘10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿರುತ್ತೇವೆ ಎಂದಿದ್ದರು’
‘ಅಪಘಾತ ಸಂಭವಿಸುವ ಮೊದಲು 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿರುತ್ತೇವೆ ಎಂದು ಹೇಳಿದ್ದರು. ಇದಾದ ನಾಲ್ಕೇ ನಿಮಿಷಕ್ಕೆ ಅಪಘಾತವಾಗಿದೆ ಎಂಬ ಸುದ್ದಿ ಬಂತು. ನಾನು ಹೋಗುವುದರೊಳಗೆ ಶವಗಳನ್ನು ಹೊರತೆಗೆದಿದ್ದರು. ಗಾಯಗೊಂಡವರನ್ನು ಆಸ್ಪತ್ರೆಗೆ ಕಳುಹಿಸಲು ವ್ಯವಸ್ಥೆ ಮಾಡಿದೆ. ನಮಗೆ ಧಾರವಾಡದ ಮಾಜಿ ಕಾರ್ಪೊರೇಟರ್ ಶಂಕರ ಶೇಳ್ಕೆ, ಮುಖಂಡರಾದ ರಾಘು ಮುತಾಲಿಕ್ ಸೇರಿ ಹಲವರು ಸಹಾಯ ಮಾಡಿದರು. ಮೃತರ ಸಂಬಂಧಿಕರು ಎಂದು ಅವರು ಹೇಳಿದ ಬಳಿಕವಷ್ಟೇ ನಮಗೆ ಆಭರಣಗಳನ್ನು ನೀಡಿದರು' ಎಂದು ವಿಜಯ್ಕುಮಾರ್ ದೇವರಮನಿ ಮಾಹಿತಿ ನೀಡಿದರು.