ಕಲರ್ ಝೆರಾಕ್ಸ್ ಮೂಲಕ ಖೋಟಾ ನೋಟು ಮುದ್ರಣ, ಇಬ್ಬರ ಬಂಧನ
ದಾವಣಗೆರೆ, ಆಗಸ್ಟ್, 11: ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಡಿಸಿಐಬಿ ಪೊಲೀಸ್ ಘಟಕವು ಇಬ್ಬರು ಆರೋಪಿಗಳನ್ನು ಬಲೆಗೆ ಕೆಡವಿದೆ.
ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದ ಹಾಲೇಶ್, ಯಲ್ಲಮ್ಮ ನಗರದ ಎಸ್. ಅಶೋಕ್ ಬಂಧಿತ ಆರೋಪಿಗಳು. ಬಂಧಿತರಿಂದ 1.20 ಲಕ್ಷ ರೂಪಾಯಿ ಮೌಲ್ಯದ ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ತಿಳಿಸಿದರು.
ಕಲರ್ ಝೆರಾಕ್ಸ್ ಮೆಷಿನ್ ಮೂಲಕ ಖೋಟಾ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದರು. ಆಗಸ್ಟ್ 10ರಂದು ಯಲ್ಲಮ್ಮ ನಗರದ ತೆಲಗಿ ಶೇಖರಪ್ಪ ಎಂಬುವವರ ನಿವಾಸದ ಸಮೀಪ ಖೋಟಾ ನೋಟುಗಳ ಚಲಾವಣೆ ಆಗುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಡಿಸಿಐಬಿ ಘಟಕದ ಡಿವೈಎಸ್ಪಿ ಎಸ್. ಬಸವರಾಜಪ್ಪ ಮತ್ತು ಸಿಬ್ಬಂದಿ ತಂಡ ಜಾಲ ಪತ್ತೆ ಹಚ್ಚಿ ಆರೋಪಿಗಳನ್ನು ಸೆರೆ ಹಿಡಿದಿದೆ. ಖೋಟಾ ನೋಟು ಮುದ್ರಣಕ್ಕೆ ಬಳಸುತ್ತಿದ್ದ ಕಲರ್ ಝೆರಾಕ್ಸ್ ಯಂತ್ರ, 100, 200, 500 ಮುಖಬೆಲೆಯ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಮರಳು ವ್ಯವಹಾರ; ಮರಳು ವ್ಯಾಪಾರದಲ್ಲಿ ತೊಡಗಿರುವ ಆರೋಪಿಗಳು ಯಲ್ಲಮ್ಮನಗರದ ತೆಲಗಿ ಶೇಖರಪ್ಪ ಅವರ ಮನೆಯ ಸಮೀಪ ಕಲರ್ ಝೆರಾಕ್ಸ್ ಮಷಿನ್ನಿಂದ ಖೋಟಾ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿರುವ ವೇಳೆ ಸಿಕ್ಕಿ ಬಿದ್ದಿದ್ದಾರೆ.
100 ರೂಪಾಯಿ ಮುಖಬೆಲೆಯ 26, 200 ರೂಪಾಯಿ ಮುಖಬೆಲೆಯ 133 ಹಾಗೂ 500 ರೂಪಾಯಿ ಮುಖಬೆಲೆಯ 183 ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. 2019ರಲ್ಲಿಯೂ ಹಾಲೇಶ್ ಎಂಬಾತನ ವಿರುದ್ಧ ಖೋಟಾನೋಟು ಚಲಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿತ್ತು. ಈ ಕುರಿತು ತನಿಖೆ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ತಿಳಿಸಿದರು.
ಬಂದ್ ಮಾಡಬೇಕು; ನಗರ ವ್ಯಾಪ್ತಿಯಲ್ಲಿನ ಎಲ್ಲಾ ಹೋಟೆಲ್ಗಳನ್ನು ರಾತ್ರಿ 10:30ರೊಳಗೆ ಕಡ್ಡಾಯವಾಗಿ ಬಂದ್ ಮಾಡಬೇಕು. ಇಲ್ಲದಿದ್ದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಮಿಟ್ಟಕಟ್ಟೆಯ ಡಾಬಾವೊಂದರಲ್ಲಿ ಮಧ್ಯರಾತ್ರಿಯವರೆಗೆ ಯುವಕ - ಯುವತಿಯರು ಡಿಜೆ ಸಾಂಗ್ಸ್ ಹಾಕಿಕೊಂಡು ನೃತ್ಯ ಮಾಡುತ್ತಾ ಮೋಜು ಮಸ್ತಿ ಮಾಡಿದ ಪ್ರಕರಣ ದಾಖಲಾಗಿದೆ. ಡಾಬಾದಲ್ಲಿ ಮದ್ಯ ಮಾರಾಟಕ್ಕೆ ಯಾವುದೇ ಅನುಮತಿ ಪಡೆದಿಲ್ಲ. ಅಲ್ಲಿ ಮದ್ಯ ಪಾರ್ಟಿ ನಡೆದಿರುವ ಕುರಿತಂತೆ ಅಬಕಾರಿ ಇಲಾಖೆಗೆ ಪ್ರಕರಣ ವರ್ಗಾಯಿಸಲಾಗಿದೆ.
ಖೋಟಾನೋಟು ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದು, ಇದರ ಜೊತೆಗೆ ಹೋಟೆಲ್ ಮಾಲೀಕರಿಗೂ ಕೆಲವು ಎಚ್ಚರಿಕೆಗಳನ್ನು ನೀಡಿದ್ದಾರೆ. ರಾತ್ರಿ ಹೆಚ್ಚು ಹೊತ್ತು ಹೋಟೆಲ್ಗಳನ್ನು ತೆರೆಯದಂತೆ ಖಡಕ್ ಎಚ್ಚರಿಕೆ ನೀಡಿದರು. ಹಾಗೆಯೇ ಇತ್ತೀಚೆಗಷ್ಟೇ ದಾವಣಗೆರೆ ನಗರದ ಹೊರವಲಯದಲ್ಲಿ ಯುವಕ, ಯುವತಿಯರು ಡಾಬಾವೊಂದರಲ್ಲಿ ಡಿಜೆ ಹಾಕಿಕೊಂಡು ಕುಣಿದು ಕಪ್ಪಳಿಸಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದರು.
Recommended Video