ರೈಲ್ವೆ ಬಜೆಟ್; ಬೆಣ್ಣೆ ನಗರಿ ದಾವಣಗೆರೆಯ ನಿರೀಕ್ಷೆಗಳು ಹಲವು...
ದಾವಣಗೆರೆ, ಜನವರಿ 31: ಕೇಂದ್ರೀಯ ಹಣಕಾಸು ಮಂತ್ರಿಗಳಾದ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಹಾಗು ರೈಲ್ವೆ ಬಜೆಟ್ ಅನ್ನು ಫೆಬ್ರುವರಿ 1ರಂದು ಮಂಡಿಸಲಿದ್ದಾರೆ. ಬೇರೆ ಬೇರೆ ಜಿಲ್ಲೆಗಳಂತೆ ಈ ಬಜೆಟ್ ನಲ್ಲಿ ದಾವಣಗೆರೆ ಜಿಲ್ಲೆ ಮಂದಿಯಲ್ಲೂ ಹಲವು ನಿರೀಕ್ಷೆಗಳಿವೆ.
ಮುಖ್ಯವಾಗಿ ತುಮಕೂರು, ಚಿತ್ರದುರ್ಗ, ದಾವಣಗೆರೆ ನೇರ ರೈಲು ಮಾರ್ಗ ಕಾಮಗಾರಿಯನ್ನು ಆದಷ್ಟು ಬೇಗ ಪ್ರಾರಂಭಿಸಲು ಹೆಚ್ಚಿನ ಅನುದಾನ ನೀಡಬೇಕೆಂದು ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘದ ರೋಹಿತ್ ಎಸ್ ಜೈನ್ ಮನವಿ ಮಾಡಿದ್ದಾರೆ.
ರೈಲ್ವೆ ಇಲಾಖೆಯಿಂದ ಪ್ರಮುಖ ನಿರ್ಧಾರ: ವಿವಿಧ ವಿಭಾಗಗಳ ವಿಲೀನ
ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಗೆ ಅಗತ್ಯ ರೈಲು ಮಾರ್ಗ ಕಲ್ಪಿಸುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲಗಳಿವೆ. ಆದ್ದರಿಂದ ಕರ್ನಾಟಕ ಸಂಪರ್ಕ ಕ್ರಾಂತಿ ರೈಲನ್ನು ಪ್ರತಿದಿನ ದಾವಣಗೆರೆ, ಹುಬ್ಬಳಿ, ಪುಣೆ ಮಾರ್ಗವಾಗಿ ಸಂಚಾರಕ್ಕೆ ಅನುವು ಮಾಡಬೇಕು. ಬೆಂಗಳೂರು ಗಾಂಧಿದಾಮ್ ರೈಲು ಗಾಡಿಯನ್ನು ಭುಜ್ ವರೆಗೆ ವಿಸ್ತರಿಸಬೇಕು ಹಾಗೂ ಅದನ್ನು ವಾರಕ್ಕೆ 4 ಸಲ ಓಡಿಸಬೇಕು. ಹುಬ್ಬಳ್ಳಿ ಕೊಚುವೆಲಿ ರೈಲನ್ನು ವಾರಕ್ಕೆ 4 ಬಾರಿ ಸಂಚರಿಸಲು ಅನುಮತಿ ನೀಡಬೇಕು. ವೈಶ್ಣೋದೇವಿಯಿಂದ ಬೆಂಗಳೂರಿಗೆ ಹುಬ್ಬಳ್ಳಿ, ದಾವಣಗೆರೆ ಮಾರ್ಗವಾಗಿ ಒಂದು ಸಾಧಾರಣ ರೈಲು ಗಾಡಿ ಓಡಿಸಬೇಕು ಎಂಬ ನಿರೀಕ್ಷೆಗಳು ವ್ಯಕ್ತವಾಗಿವೆ.
ಯಶವಂತಪುರ - ಚಂಡಿಗಡ ಸಂಪರ್ಕ ಕ್ರಾಂತಿ ರೈಲನ್ನು ಜಮ್ಮುವರೆಗೆ ವಿಸ್ತರಿಸಬೇಕು. ಅವಳಿ ನಗರಗಳಾದ ಹುಬ್ಬಳ್ಳಿ - ಧಾರವಾಡ, ದಾವಣಗೆರೆ - ಹರಿಹರದಲ್ಲಿ ದೇಮು (ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್) ರೈಲುಗಳಿಗೆ ಅನುಮತಿ ನೀಡಬೇಕು. ಹರಿಹರ - ಶಿವಮೊಗ್ಗ ರೈಲು ಮಾರ್ಗ ಭೂ ಸ್ವಾದೀನ ಪ್ರಕ್ರಿಯೆ ಮುಗಿಸಿ ಕೆಲಸ ಆರಂಭಿಸಬೇಕು. ಗದಗ್ - ಹರಪನಹಳ್ಳಿ ಸರ್ವೇ ಕಾರ್ಯ ಶೀಘ್ರದಲ್ಲಿ ಮುಗಿಸಿ ಕೆಲಸ ಆರಂಭಿಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ.
ಬ್ರೀಫ್ಕೇಸ್ ಸಂಸ್ಕೃತಿಗೆ ಅಂತ್ಯ ಹಾಡಿದ ನಿರ್ಮಲಾ ಸೀತಾರಾಮನ್
ಬೆಂಗಳೂರು- ಮಂಗಳೂರು ರೈಲು ದಿನ ನಿತ್ಯ ಓಡಿಸಬೇಕು. ಮಿರಜ್ - ಮಂಗಳೂರು ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ರೈಲನ್ನು ಈ ರೈಲ್ವೆ ಬಜೆಟ್ ನಲ್ಲಿ ಘೋಷಿಸಬೇಕು. ಹರಿಹರ ಅಥವಾ ಎವಿಸಿ ರೈಲು ನಿಲ್ದಾಣದಲ್ಲಿ, ಶಿವಮೊಗ್ಗ ಸಮೀಪ ಕೊತ್ತನೂರಿನಲ್ಲಿ ನಿರ್ಮಾಣವಾಗುತ್ತಿರುವ ಟರ್ಮಿನಲ್ ಸ್ಟೇಷನ್ ಹಾಗು ಕೋಚಿಂಗ್ ಡಿಪೊ ಮಾದರಿಯಲ್ಲಿ ಹರಿಹರ ಅಥವಾ ಎವಿಸಿದಲ್ಲಿ- ಟರ್ಮಿನಲ್ ಸ್ಟೇಷನ್, ಕೋಚಿಂಗ್ ಡಿಪೋ ನಿರ್ಮಿಸಬೇಕು. ಇದರಿಂದ ದಾವಣಗೆರೆ ಭಾಗದಿಂದ ಹಲವು ಕಡೆ ಸಾಕಷ್ಟು ರೈಲುಗಳ ಸಂಚಾರಕ್ಕೆ ಅನುಕೂಲವಾಗಲಿದೆ. ಕೊಟ್ಟೂರು-ಹರಿಹರ ರೈಲನ್ನು ಚಿಕ್ಕಮಗಳೂರಿನವರೆಗೆ ವಿಸ್ತರಿಸಬೇಕು. ದಾವಣಗೆರೆ ರೈಲು ನಿಲ್ದಾಣದ ಅಭಿವೃದ್ಧಿಪಡಿಸಬೇಕೆಂದು ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘ ಮನವಿ ಮಾಡಿದೆ.