ದಾವಣಗೆರೆ ಜೈನ ಸಮುದಾಯದಿಂದ ಅಗತ್ಯ ಸಾಮಾಗ್ರಿ ವಿತರಣೆ
ದಾವಣಗೆರೆ, ಮಾರ್ಚ್ 29: ಕೊರೊನಾ ವೈರಸ್ ದೇಶದಲ್ಲಿ ಹೆಚ್ಚಳವಾಗುತ್ತಿದ್ದ ಹಿನ್ನೆಲೆ ಕೇಂದ್ರ ಸರ್ಕಾರ ಭಾರತವನ್ನು ಲಾಕ್ ಡೌನ್ ಮಾಡಿದ್ದು, ಸಂಪೂರ್ಣ ವ್ಯಾಪಾರ ವಹಿವಾಟುಗಳು ಬಂದ್ ಆಗಿವೆ.
ಕೇವಲ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದವುಗಳನ್ನು ಬಂದ್ ಮಾಡುವುದರ ಜೊತೆಗೆ ಜನರು ಕೂಡ ಮನೆಯಿಂದ ಹೊರ ಬರಬಾರದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದು, ಜನರು ಕೂಡ ಉತ್ತಮವಾದ ಸ್ಪಂದನೆ ನೀಡುತ್ತಿದ್ದಾರೆ. ಆದರೆ ಅಲೆಮಾರಿಗಳಿಗೆ ಮಾತ್ರ ಸಾಕಷ್ಟು ತೊಂದರೆಯಾಗಿದ್ದು, ಊಟಕ್ಕೂ ಕೂಡ ಪರದಾಡುವಂತಾಗಿದೆ.
ದಾವಣಗೆರೆಯಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ
ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಹೋಬಳಿಯ ಹುಚ್ಚವ್ವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್. ಬಸವಾಪುರ ಗ್ರಾಮದಲ್ಲಿ ಸುಮಾರು 8 ಅಲೆಮಾರಿ ಕುಟುಂಬಗಳು ಅಗತ್ಯ ವಸ್ತುಗಳಿಗಾಗಿ ಆಗ್ರಹಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಜೈನ ಸಮುದಾಯ ದಾವಣಗೆರೆ ತಹಶೀಲ್ದಾರ್ ಮೂಲಕ ಅಲೆಮಾರಿ ಸಮುದಾಯಕ್ಕೆ ಅಗತ್ಯ ಸಾಮಾಗ್ರಿಗಳನ್ನು ವಿತರಿಸಿದ್ದಾರೆ.
ಮಕ್ಕಳು, ವೃದ್ಧರೂ ಸೇರಿದಂತೆ ಸುಮಾರು 35 ಕ್ಕೂ ಅಧಿಕ ಅಲೆಮಾರಿಗಳು ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೂಜಿದಾರ, ಛತ್ರಿ ರಿಪೇರಿ, ಕೂದಲು ವ್ಯಾಪಾರ ಮಾಡುವ ಇವರು, ದಿನನಿತ್ಯ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದರು. ಆದರೆ ಕಳೆದ 10 ದಿನಗಳಿಂದ ಕೊರೊನಾ ಭೀತಿಯಿಂದ ಯಾವ ಊರಿನಲ್ಲಿಯೂ ವ್ಯಾಪಾರ ಮಾಡಲು ಬಿಡುತ್ತಿಲ್ಲ. ಹೀಗಾಗಿ ಜೀವನೋಪಾಯಕ್ಕಾಗಿ ಆಹಾರ ಸಾಮಾಗ್ರಿಗಳು ಇಲ್ಲದೆ ಪರದಾಡುವಂತಾಗಿತ್ತು.
ಇದರಿಂದ ದಾವಣಗೆರೆ ತಾಲ್ಲೂಕು ಅಡಳಿತ ಹಾಗೂ ಜೈನ ಸಮಾಜದಿಂದ ಅಡುಗೆ ಎಣ್ಣೆ, ಬೇಳೆ, ಖಾರಾದ ಪುಡಿ, ಉಪ್ಪು, ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.