ಪಠ್ಯ ಪುಸ್ತಕ ವಿವಾದ; ಬರಗೂರು ವಿರುದ್ಧ ಬಿ. ಸಿ. ನಾಗೇಶ್ ವಾಗ್ದಾಳಿ
ದಾವಣಗೆರೆ, ಜೂ14: "ಜೆಎನ್ಯು ಹಾಗೂ ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದ ತಂಡ ಭಾರತವನ್ನು ತುಕ್ಡಾ ತುಕ್ಡಾ ಮಾಡುವ ಗ್ಯಾಂಗ್. ಇದರಲ್ಲಿ ವಿಫಲರಾಗುವುದು ಖಚಿತ. ಕರ್ನಾಟಕ ಪಠ್ಯಪುಸ್ತಕಕ್ಕೆ ಸಂಬಂಧಿಸಿದಂತೆ ಜೆಎನ್ಯು ಪ್ರೊಫೆಸರ್ ಯಾಕೆ ಪತ್ರ ಬರೆಯಬೇಕು. ಅವರು ಏನು ಓದಿದ್ದಾರೆ?" ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಪ್ರಶ್ನಿಸಿದರು.
ದಾವಣಗೆರೆಯಲ್ಲಿ ಮಾತನಾಡಿದ ಸಚಿವರು, "ಭಾರತದ ಜನರು ಒಂದಾಗಬೇಕು. ಈ ದೇಶ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಮಕ್ಕಳಿಗೆ ಇದನ್ನು ತಲುಪಿಸಬೇಕು. ಜೆಎನ್ಯು ಪ್ರೊಫೆಸರ್ ಕರ್ನಾಟಕದ ಪಠ್ಯಪುಸ್ತಕದ ಬಗ್ಗೆ ಪತ್ರ ಏಕೆ ಬರೆಯುತ್ತಾರೆ. ಪಾಕಿಸ್ತಾನದ ಧ್ವಜ ಹಾರಿಸುವ ಒಂದಷ್ಟು ಜನರು ಈ ತಂಡದಲ್ಲಿದ್ದಾರೆ" ಎಂದು ಅಭಿಪ್ರಾಯಪಟ್ಟರು.
ದಾವಣಗೆರೆಯಲ್ಲಿ ಹಿಂದಿನ ನೆನಪು ಬಿಚ್ಚಿಟ್ಟ ರವಿಚಂದ್ರನ್ ಪುತ್ರ
ನಮ್ಮಲ್ಲೇನು ಪಾಕಿಸ್ತಾನದ ಬಾವುಟ ಹಾರಬೇಕಿತ್ತಾ?
"ಬಸವಣ್ಣನವರ ಬಗ್ಗೆ ಏನು ಅವಹೇಳನವಾಗಿದೆ ಎಂದು ಹೇಳಬಹುದಾ?. ಬರಗೂರು ರಾಮಚಂದ್ರಪ್ಪರಿದ್ದಾಗ ಇದ್ದ ಪಠ್ಯಕ್ರಮದಲ್ಲೇನಿತ್ತೋ ಅದೆೇ ಇದೆ. ಬುಕ್ನಲ್ಲಿ ಇದ್ದ ಒಂದೇ ಒಂದು ವಾಕ್ಯ ಬದಲಾಯಿಸಿಲ್ಲ. ಜನಿವಾರದ ಬಗ್ಗೆ ಸ್ವಾಮೀಜಿಗಳು ಮಾತನಾಡಿಲ್ಲ. ಜನಿವಾರ ತೆಗೆದದ್ದು, ಇದ್ದದ್ದರ ಬಗ್ಗೆ ಪ್ರಶ್ನೆಯೇ ಇಲ್ಲ. ಉಪನಯನದ ಬಗ್ಗೆ ಉಲ್ಲೇಖಿಸಲಾಗಿದೆ. ಜನಿವಾರ ಕಿತ್ತಾಕಿ ಹೋದರೂ ಅಂತಾ ಇತ್ತು. ಉಪನಯನ ಮಾಡಿ ಕೊಂಡು ಹೋದರೂ ಎಂದಿದೆ. ಇದರಲ್ಲಿ ಅವಮಾನ ಮಾಡುವ ಪ್ರಶ್ನೆ ಎಲ್ಲಿ?. ಸ್ವಾಮೀಜಿಯವರ ಸಲಹೆ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ. ನಮಗೆ ಸ್ವಾಮೀಜಿಯವರ ಬಗ್ಗೆ ಅಪಾರ ಗೌರವ ಇದೆ. ಸಲಹೆ ಸ್ವೀಕರಿಸಿ ಮುಂದುವರಿಯುತ್ತೇವೆ" ಎಂದು ಸಚಿವ ಬಿ. ಸಿ. ನಾಗೇಶ್ ಹೇಳಿದರು.
"ಏರುತಿಹುದು, ಹಾರುತಿಹುದು ಪದ್ಯವನ್ನು ಬರಗೂರು ಅವರು ಪಠ್ಯದಿಂದ ತೆಗೆದಿದ್ದರು. ಯಾಕೆ ಬಾವುಟ ಹಾರಿದರೆ ಇವರಿಗೆ ತೊಂದರೆಯಾ?. ನಮ್ಮಲ್ಲೇನು ಪಾಕಿಸ್ತಾನದ ಬಾವುಟ ಹಾರಬೇಕಿತ್ತಾ?" ಎಂದು ಬರಗೂರು ರಾಮಚಂದ್ರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಯಾವುದೇ ಪಠ್ಯವನ್ನು ಪುಸ್ತಕದಿಂದ ತೆಗೆದಿಲ್ಲ
"ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಕಪೋಲಕಲ್ಪಿತ ಆರೋಪಗಳನ್ನು ಬರಗೂರು ರಾಮಚಂದ್ರಪ್ಪ ಮಾಡಿದ್ದಾರೆ" ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ವಾಗ್ದಾಳಿ ನಡೆಸಿದರು.
"ಪಠ್ಯಪುಸ್ತಕ ಬರಗೂರು ರಾಮಚಂದ್ರಪ್ಪ ಸೇರಿ ಇತರರ ಆರೋಪ ಮಾಡಿರುವಂತೆ ಯಾವುದೇ ಪಠ್ಯವನ್ನು ಪುಸ್ತಕದಿಂದ ತೆಗೆದಿಲ್ಲ. ಪ್ರಮುಖವಾಗಿ ನಾರಾಯಣ ಗುರು, ಟಿಪ್ಪು, ಭಗತ್ ಸಿಂಗ್ ಸೇರಿದಂತೆ ಯಾರದ್ದೇ ಪಾಠವನ್ನು ತೆಗೆದಿಲ್ಲ. ಆದರೆ ಕೆಲವು ತಪ್ಪುಗಳನ್ನು ಪರಿಷ್ಕರಣೆ ಮಾಡಲಾಗಿದೆ" ಎಂದರು.
ಬರಗೂರು ರಾಮಚಂದ್ರಪ್ಪ ಅವರ ವಿರುದ್ಧ ಕಿಡಿಕಾರಿದ ಸಚಿವರು, "ಇವರುಗಳು ಸುಳ್ಳನ್ನೇ ಸಾವಿರ ಸಾರಿ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಇವರು ವಿರೋಧ ವ್ಯಕ್ತಪಡಿಸಿದ ನಂತರ ನಾವು ಯಾವುದೇ ಬದಲಾವಣೆ ಮಾಡಿಲ್ಲ. ಪಠ್ಯಪುಸ್ತಕ ಮುದ್ರಣಕ್ಕೆ ಹೋಗಿ ಎಷ್ಟೋ ದಿನಗಳಾಗಿದೆ. ಇವರಂತೆ ನಾವು ಸೇಡಿನ ರಾಜಕಾರಣ ಮಾಡುವುದಿಲ್ಲ" ಎಂದು ಟೀಕಿಸಿದರು.
ಯಶಸ್ಸಿನತ್ತ ಮಕ್ಕಳ ಲಸಿಕಾಕರಣ ಅಭಿಯಾನ
"12 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಕೊರೊನಾ ಲಸಿಕೆ ನೀಡಿಕೆ ಮುಗಿದಿದೆ. 6-12ರವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯ ಮಾಡಬೇಕಿದೆ. ಆರೋಗ್ಯ ಇಲಾಖೆಯ ಸೂಚನೆ ಬಂದ ಕೂಡಲೇ ಲಸಿಕೆ ನೀಡಲಾಗುತ್ತದೆ. ಇನ್ನು ಮೂರು ತಿಂಗಳೊಳಗೆ ಸಮವಸ್ತ್ರ ಪೂರೈಕೆ ಮಾಡಲಾಗುವುದು. ಜೊತೆಗೆ ಎಲ್ಲಾ ಕೋವಿಡ್ ಮಾರ್ಗಸೂಚಿ ಪಾಲಿಸಿಯೇ ಶಾಲೆಗಳನ್ನು ಆರಂಭಿಸಲಾಗಿದೆ. ಟಾಸ್ಕ್ ಫೋರ್ಸ್ ಸಲಹೆ ಮೇರೆಗೆ ಶಾಲೆಗಳು ನಡೆಯುತ್ತಿವೆ" ಎಂದು ಬಿ. ಸಿ. ನಾಗೇಶ್ ತಿಳಿಸಿದರು.
"ಕೋವಿಡ್ -19 ವಿರುದ್ಧ ಪ್ರಮುಖ ಅಸ್ತ್ರವಾಗಿರುವ ಲಸಿಕೆಯನ್ನು ಉಚಿತವಾಗಿ ನೀಡುವ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವದ ನಿರ್ಧಾರದಿಂದಾಗಿ ಈವರೆಗೆ ದೇಶದಲ್ಲಿ 182 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ. 130 ಕೋಟಿಗೂ ಅಧಿಕ ಜನಸಂಖ್ಯೆಯ ಭಾರತದಲ್ಲಿ ಬೃಹತ್ ಪ್ರಮಾಣದಲ್ಲಿ ಉಚಿತ ಲಸಿಕೆ ಅಭಿಯಾನ ಯಶಸ್ಸು ಸಾಧಿಸಿದೆ. ಮಕ್ಕಳ ಲಸಿಕಾಕರಣ ಕೂಡ ಅದೇ ರೀತಿ ಯಶಸ್ಸು ಸಾಧಿಸುತ್ತದೆ. ಕೋವಿಡ್-19 ವಿರುದ್ಧ ಹೋರಾಟ ಮುಂದುವರೆದಿದ್ದು, ಪ್ರತಿಯೊಬ್ಬರು ಕೈ ಜೋಡಿಸಬೇಕು" ಎಂದರು.
ಎನ್ಎಸ್ಯುಐ ಕಾರ್ಯಕರ್ತರ ಮುತ್ತಿಗೆ
ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಕುವೆಂಪುಗೆ ಅವಮಾನ ಮಾಡಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಮನೆಗೆ ಎನ್ಎಸ್ಯುಐ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ರಾಷ್ಟ್ರಕವಿ ಕುವೆಂಪು ಬಗ್ಗೆ ಅವಹೇಳನಕಾರಿ ಹೇಳಿಕೆ ಮತ್ತು ಅವರು ರಚಿಸಿರುವ ನಾಡಗೀತೆಯನ್ನು ತಿರುಚಲಾಗಿದೆ ಎಂದು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯವನ್ನು ವಜಾಗೊಳಿಸಬೇಕು ಮತ್ತು ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, "ಯಾರದ್ದೋ ಮನೆಗೆ ನುಗ್ಗಲು ಯಾರಿಗೂ ಅನುಮತಿ ಇಲ್ಲ. ಸಚಿವನಾದರೂ ಮನೆಯವರ ಅನುಮತಿ ಪಡೆಯದೇ ಮನೆಯೊಳಗೆ ನುಗ್ಗಲು ಆಗುತ್ತದೆಯಾ?. ಕಾನೂನಿನಲ್ಲಿ ಮನೆಗೆ ನುಗ್ಗಿ ಬೆಂಕಿ ಹಚ್ಚಲು ಅವಕಾಶ ಇಲ್ಲ. ನಾನು ಈ ಘಟನೆ ನಡೆದಾಗ ಮನೆಯಲ್ಲಿರಲಿಲ್ಲ, ಗುಜರಾತ್ನಲ್ಲಿದ್ದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಹಳೆ ಬಸ್ ಪಾಸ್ ತೋರಿಸಿ ಪ್ರಯಾಣಿಸಬಹುದು. ಕೆಎಸ್ಆರ್ಟಿಸಿ ಅವರಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಹೊಸ ಬಸ್ ಪಾಸ್ ಸಹ ಕೊಡಲಾಗುತ್ತಿದೆ. ಅದನ್ನು ಪ್ರತಿ ಶಾಲಾವಾರು ಆದಷ್ಟು ಬೇಗ ನೀಡುತ್ತೇವೆ" ಎಂದು ಸಚಿವರು ಹೇಳಿದರು.