"ಕಾಂಗ್ರೆಸ್ ನಲ್ಲಿರುವ ಉತ್ತಮ ನಾಯಕ, ಮಹಾನ್ ರಾಜಕಾರಣಿ ಡಿಕೆಶಿ"
ದಾವಣಗೆರೆ, ಸೆಪ್ಟೆಂಬರ್ 9: ಡಿ. ಕೆ. ಶಿವಕುಮಾರ್ ರನ್ನು ಮಾರಿ ಮುಂದೆ ಕೋಣ ಕಡಿಯುವ ರೀತಿಯಲ್ಲಿ ಕಡಿಯುತ್ತಾರೆ. ಅವರನ್ನು ಬಲಿಪಶು ಮಾಡುತ್ತಾರೆ ಎಂದು ಈ ಹಿಂದೆ ಕುಂದಗೋಳ ಚುನಾವಣೆ ಸಂದರ್ಭದಲ್ಲೇ ಹೇಳಿದ್ದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ- ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ. ಪಿ. ರೇಣುಕಾಚಾರ್ಯ ಸೋಮವಾರ ಹೇಳಿದ್ದಾರೆ.
ಡಿ. ಕೆ. ಶಿವಕುಮಾರ್ ಮಹಾನ್ ರಾಜಕಾರಣಿ. ಕಾಂಗ್ರೆಸ್ ನಲ್ಲಿ ಇರುವ ಉತ್ತಮ ನಾಯಕನೆಂದರೆ ಶಿವಕುಮಾರ್. ಪಕ್ಷದಲ್ಲಿ ಬೆಳೆಯುತ್ತಾರೆ ಎಂದು ಅವರನ್ನು ತುಳಿಯುವ ಕೆಲಸ ನಡೆದಿದೆ. ಡಿ. ಕೆ. ಶಿವಕುಮಾರ್ ಜೈಲಿಗೆ ಹೋಗಲು ಕಾಂಗ್ರೆಸ್ ನವರೇ ಕಾರಣ ಹೊರತು ಬಿಜೆಪಿಯವರಲ್ಲ ಎಂದು ಹೇಳಿದ್ದಾರೆ.
20-30 ಕೋಟಿ ನೀಡಿದ್ದರೆ ಮೈತ್ರಿ ಸರಕಾರ ಉಳಿಸಬಹುದಿತ್ತು: ಎಚ್ ಡಿ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಹತಾಶರಾಗಿ, ಬಿಜೆಪಿ ಸರಕಾರ ನಾಲ್ಕು ತಿಂಗಳಲ್ಲಿ ಬೀಳುತ್ತದೆ ಎಂದು ಹೇಳುತ್ತಿದ್ದಾರೆ. ಯಡಿಯೂರಪ್ಪನವರ ನೇತೃತ್ವದಲ್ಲಿ ಪೂರ್ಣಾವಧಿ ಮುಗಿಸಿ, 2023ಕ್ಕೆ ಮತ್ತೆ ಅಧಿಕಾರ ಹಿಡಿಯುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅನ್ನಭಾಗ್ಯ, ಕೃಷಿ ಭಾಗ್ಯ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಅದೇ ಕಾರಣಕ್ಕೆ ತನಿಖೆಗೆ ಯಡಿಯೂರಪ್ಪ ಆದೇಶಿಸಿದ್ದಾರೆ. ಭ್ರಷ್ಟಾಚಾರ ಮಾಡಿದರು ಕೈ ಕಟ್ಟಿ ಕುಳಿತುಕೊಳ್ಳಬೇಕಾ ಎಂದು ಪ್ರಶ್ನೆ ಮಾಡಿದ ರೇಣುಕಾಚಾರ್ಯ, ಅನಂತಕುಮಾರ್ ಹೆಗಡೆ ಅವರು ಸಸಿಕಾಂತ್ ಸೆಂಥಿಲ್ ಬಗ್ಗೆ ಏನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.