ಸರ್ಕಾರದ ಭ್ರಷ್ಟಾಚಾರದ ಬಗ್ಗೆ ತನಿಖೆಯಾಗಲಿ; ಕಾಂಗ್ರೆಸ್ ಒತ್ತಾಯ
ದಾವಣಗೆರೆ, ಆಗಸ್ಟ್ 03: ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದ ಮುಖ್ಯಮಂತ್ರಿ ಬಿಎಸ್ ವೈ ಅವರಿಗೇ ಸೋಂಕು ಬಂದಿದೆ. ಇವರು ಸಾಮಾನ್ಯ ಜನರನ್ನು ಹೇಗೆ ಕಾಪಾಡುತ್ತಾರೆ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ವ್ಯಂಗ್ಯವಾಡಿದ್ದಾರೆ.
Recommended Video
ದಾವಣಗೆರೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ನಡೆದ ಸ್ಪೀಕ್ ಆಫ್ ಕರ್ನಾಟಕ ಉದ್ದೇಶಿಸಿ ಮಾತನಾಡಿದ ಅವರು, "ರಾಜ್ಯ ಸರ್ಕಾರದ ಸಚಿವರಿಗೇ ಜಾಗರೂಕತೆಯಿಲ್ಲ, ಜನರನ್ನು ಯಾವ ರೀತಿ ಕಾಪಾಡುತ್ತಾರೆ" ಎಂದು ಪ್ರಶ್ನಿಸಿದರು. "ಇಂಥ ಸಮಯದಲ್ಲಿ ಸರ್ಕಾರ 4 ಸಾವಿರ ಕೋಟಿ ಹಣವನ್ನು ದುರುಪಯೋಗ ಮಾಡಿಕೊಂಡಿದೆ. ಈ ಕುರಿತು ನ್ಯಾಯಾಂಗ ತನಿಖೆ ಮಾಡಬೇಕು. ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ರಾಜ್ಯಾದ್ಯಂತ ಹೋರಾಟ ಮಾಡಲಿದೆ. ಬಿಜೆಪಿ ಸರ್ಕಾರ, ಭ್ರಷ್ಟಾಚಾರ ಪ್ರಶ್ನಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿರುವುದು ನಿಜಕ್ಕೂ ದುರಂತ. ಈ ನೋಟಿಸ್ ಗೆ ನಾವು ಉತ್ತರ ನೀಡಲಿದ್ದೇವೆ" ಎಂದರು.
ಕೊವಿಡ್ ಉಪಕರಣ ಖರೀದಿ ಹಗರಣ: ಕಾಂಗ್ರೆಸ್-ಬಿಜೆಪಿಗೆ ಕುಮಾರಸ್ವಾಮಿ 5 ಸವಾಲು
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, "ರಾಜ್ಯ ಸರ್ಕಾರ ವಿಪತ್ತಿನ ಸಂದರ್ಭದಲ್ಲಿ ಕೂಡ ಭ್ರಷ್ಟಾಚಾರ ಮಾಡಿದೆ. ಇದು ಬಿಜೆಪಿಯ ಸಂಸ್ಕಾರ. 4 ಸಾವಿರ ಕೋಟಿ ವೆಚ್ಚದಲ್ಲಿ ಮಾಸ್ಕ್, ಸ್ಯಾನಿಟೈಸರ್, ವೆಂಟಿಲೇಟರ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ವಿಧಾನ ಮಂಡಲದ ಅಧಿವೇಶನ ಕರೆಯುವುದಕ್ಕೆ ಸರ್ಕಾರ ಸಿದ್ಧವಿಲ್ಲ, ಶ್ವೇತ ಪತ್ರವನ್ನು ಹೊರಡಿಸುತ್ತಿಲ್ಲ. ಸುಗ್ರಿವಾಜ್ಞೆ ಮೂಲಕ ತಮಗೆ ಬೇಕಾದ ಆದೇಶಗಳನ್ನು ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.
ಈ ವೇಳೆ ಶಾಸಕ ಶಾಮನೂರು ಶಿವಶಂಕರಪ್ಪ, ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ ಮಂಜಪ್ಪ, ಶಾಸಕ ಎಸ್ ರಾಮಪ್ಪ, ಶಾಂತನಗೌಡ. ಎ ನಾಗರಾಜ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರಿದ್ದರು.