ದಾವಣಗೆರೆ ಸ್ಲಂಗಳಿಗೆ 13 ಸಾವಿರ ಲೀ ಉಚಿತ ಹಾಲು ವಿತರಣೆ
ದಾವಣಗೆರೆ, ಏಪ್ರಿಲ್ 03: ಸ್ಲಂ ನಿವಾಸಿಗಳಿಗೆ ಇಂದಿನಿಂದ ಏ.14 ರವರೆಗೆ ದಾವಣಗೆರೆ ಮಹಾನಗರ ಪಾಲಿಕೆಯಿಂದ ಒಂದು ಲೀಟರ್ ಉಚಿತ ಹಾಲು ವಿತರಣೆಗೆ ಚಾಲನೆ ನೀಡಲಾಗಿದೆ.
ದಾವಣಗೆರೆ ನಗರದಲ್ಲಿ ಒಟ್ಟಾರೆ 50 ಸ್ಲಂಗಳಿದ್ದು, 12,951 ಮನೆಗಳಿವೆ. ಇಂದಿನಿಂದ ಏ.14 ರವರೆಗೆ ನಿರಂತರವಾಗಿ ಪ್ರತಿ ಮನೆಗೂ 1 ಲೀ. ಹಾಲಿನಂತೆ 13 ಸಾವಿರ ಲೀ ಪೂರೈಕೆ ಮಾಡಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ಹೇಳಿದರು.
ಇಂದು ಬೆಳಿಗ್ಗೆ ದಾವಣಗೆರೆಯ ನಿಟುವಳ್ಳಿ, ಕುಂದವಾಡ, ಶಾಮನೂರು, ಲೆನಿನ್ ನಗರ, ಆವರಗೆರೆ ಗೋಮಾಳ, ನೀಲಮ್ಮನ ತೋಟ, ಶ್ರೀರಾಮ ನಗರ, ಅಂಬೇಡ್ಕರ್ ನಗರ ಸೇರಿದಂತೆ ಸುಮಾರು 11 ಸ್ಲಂ ನಿವಾಸಿಗಳಿಗೆ 2495 ಲೀ.ಹಾಲು ಪೂರೈಕೆ ಮಾಡಲಾಗಿದೆ.
ಇಂದಿನಿಂದ ಹಾಲು ವಿತರಣೆ ಕಾರ್ಯ ಪ್ರಾರಂಭಗೊಂಡಿರುವುದರಿಂದ ಒಂದೇ ವೇಳೆ ಸಮರ್ಪಕವಾಗಿ ಎಲ್ಲಾ ಸ್ಲಂ ನಿವಾಸಿಗಳಿಗೆ ಪೂರೈಕೆ ಸಾಧ್ಯವಾಗಿಲ್ಲ. ಆದ್ದರಿಂದ ಮಧ್ಯಾಹ್ನ ಕೆಲ ಭಾಗಗಳಿಗೆ ತೆರಳಿ ವಿತರಣೆ ಮಾಡಲಾಗುವುದು. ನಾಳೆಯಿಂದ ಮಹಾನಗರ ಪಾಲಿಕೆ ವತಿಯಿಂದ ತಂಡ ರಚನೆ ಮಾಡಿ ಬೆಳಗ್ಗೆ 6 ರಿಂದ 10 ಗಂಟೆಯೊಳಗಾಗಿ ಎಲ್ಲಾ ಸ್ಲಂಗಳಲ್ಲೂ ಸಮರ್ಪಕವಾಗಿ 1 ಲೀ ಹಾಲು ವಿತರಿಸಲಿದ್ದೇವೆ ಎಂದು ಅಯುಕ್ತ ಮಾಹಿತಿ ನೀಡಿದರು.
ಮಹಾನಗರ ಪಾಲಿಕೆಯಿಂದ ಈ ಕಾರ್ಯ ನಿರಂತರವಾಗಿ ಏ.14 ರವರೆಗೆ ಮುಂದುವರೆಯಲಿದೆ ಎಂದು ತಿಳಿಸಿದರು. ಈ ವೇಳೆ ಮೇಯರ್ ಬಿ.ಜಿ ಅಜಯ್ ಕುಮಾರ್, ಪಾಲಿಕೆ ಆರೋಗ್ಯ ಅಧಿಕಾರಿಗಳು ಹಾಲು ವಿತರಣೆ ಕಾರ್ಯದಲ್ಲಿದ್ದರು.