ದಾವಣಗೆರೆ ಮಹಾನಗರ ಪಾಲಿಕೆಯ ಅನುದಾನ ಹಂಚಿಕೆಯಲ್ಲಿ ತಾರತಮ್ಯ: ವಿಪಕ್ಷ ಖಂಡನೆ
ದಾವಣಗೆರೆ, ಜುಲೈ 7: ದಾವಣಗೆರೆ ಮಹಾನಗರ ಪಾಲಿಕೆಗೆ ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆಗೆ ಬಿಡುಗಡೆಯಾದ 125 ಕೋಟಿ ರೂ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಆರೋಪಿಸಿದರು.
ಕಾಂಗ್ರೆಸ್ ಸದಸ್ಯರು ಪ್ರತಿನಿಧಿಸುವ ವಾರ್ಡ್ ಗಳಿಗೆ ಅತ್ಯಲ್ಪ ಅನುದಾನ ನೀಡಲಾಗಿದೆ, ಅಲ್ಲದೇ ಕ್ರಿಯಾ ಯೋಜನೆ ರೂಪಿಸುವಲ್ಲಿ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರ ಗಮನಕ್ಕೂ ತಂದಿಲ್ಲ. ಆದ್ದರಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕ್ರಿಯಾ ಯೋಜನೆಗೆ ಅನುಮೋದನೆ ನೀಡಬಾರದೆಂದು ಒತ್ತಾಯಿಸಿ ಪತ್ರ ಮೂಲಕ ಮನವಿ ಮಾಡಿದ್ದೇವೆಂದು ಎ.ನಾಗರಾಜ್ ತಿಳಿಸಿದರು.
ದಾವಣಗೆರೆಯಲ್ಲಿ ರಾತೋರಾತ್ರಿ ಕೊರೊನಾ ಸೋಂಕಿತರ ಅಂತ್ಯಕ್ರಿಯೆ ವಿರೋಧಿಸಿ ಪ್ರತಿಭಟನೆ
ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂದಿನ 4 ವರ್ಷಗಳ ಅವಧಿಗೆ 125 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಆದರೆ ಅನುಮೋದನೆ ಸಲ್ಲಿಕೆಯಾಗಿರುವ ಕ್ರಿಯಾ ಯೋಜನೆಯಲ್ಲಿ ಕೆಲವು ವಾರ್ಡ್ ಗಳಿಗೆ ಅನುದಾನವನ್ನೇ ನೀಡಿಲ್ಲ. ಹಿಂದುಳಿದ ವಾರ್ಡ್ ಗಳಾಗಿರುವ 5, 16, 26, 36 ಕ್ಕೆ ಅನುದಾನ ನೀಡಿಲ್ಲ ಎಂದು ಹೇಳಿದರು.
ಮೇಯರ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು
ದಾವಣಗೆರೆ ಪಾಲಿಕೆಯಲ್ಲಿ 45 ವಾರ್ಡ್ ಗಳಿದ್ದು ಎಲ್ಲಾ ವಾರ್ಡ್ ಗಳಿಗೂ ಸರಿಸಮಾನವಾಗಿ ಅಂದರೆ 1.65 ಕೋಟಿ ರೂ. ಹಂಚಿಕೆ ಮಾಡಬೇಕಿತ್ತು. ಆದರೆ ಬಿಜೆಪಿ ಸದಸ್ಯರಿರುವ ಪ್ರತಿಷ್ಠಿತ ವಾರ್ಡ್ ಗಳಿಗೆ ಹೆಚ್ಚು, ಕಾಂಗ್ರೆಸ್ ಸದಸ್ಯರಿರುವ ವಾರ್ಡ್ ಗಳಿಗೆ ಅತ್ಯಲ್ಪ ಅನುದಾನ ಬಿಡುಗಡೆ ಮಾಡುವ ಮೂಲಕ ತಾರತಮ್ಯ ಮಾಡಲಾಗಿದೆ. 15 ದಿನಗಳೊಳಗಾಗಿ ಎಲ್ಲಾ ವಾರ್ಡ್ ಗಳಿಗೂ ಸಮರ್ಪಕವಾಗಿ ಅನುದಾನ ಹಂಚಿಕೆ ಮಾಡದಿದ್ದರೆ ಮೇಯರ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಾಸಕ ಶಾಮನೂರು ಶಿವಶಂಕರಪ್ಪ ಅವರ ಗಮನಕ್ಕೆ ತಂದಿಲ್ಲ
ಕ್ರಿಯಾ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅಧ್ಯಕ್ಷತೆಯಲ್ಲಿ ನಗರ ಪ್ರತಿನಿಧಿಸುವ ಸದಸ್ಯರಾದ ಸಂಸದರು, ಶಾಸಕರು ಕಳೆದ ಜೂನ್ 6 ರಂದು ಸಭೆ ನಡೆಸಿದ್ದಾರೆ. ಈ ಸಭೆ ನಡೆಸುವ ಬಗ್ಗೆ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರ ಗಮನಕ್ಕೆ ತಂದಿಲ್ಲ, ಸಮಿತಿಯ ನಡವಳಿಕೆಗಳಿಗೆ ಶಾಸಕರ ಸಹಿ ಕೂಡ ಮಾಡಿಸದೇ ಮಂಜೂರಾತಿಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ಲಾಕ್ಡೌನ್ ದಿನವೇ ಬರ್ತ್ ಡೇ ಪಾರ್ಟಿ ಆಯೋಜಿಸಿದ ದಾವಣಗೆರೆ ಮೇಯರ್
ಉಳಿದ ವಾರ್ಡ್ ಗಳಿಗೆ 1 ರಿಂದ 3 ಕೋಟಿ ರೂ.
ಕಾಂಗ್ರೆಸ್ ಸದಸ್ಯರಿರುವ ವಾರ್ಡ್ ಗಳಿಗೆ 30 ರಿಂದ 40 ಲಕ್ಷ ರುಪಾಯಿ ಅನುದಾನ ನೀಡಲಾಗಿದೆ ಉಳಿದ ವಾರ್ಡ್ ಗಳಿಗೆ 1 ರಿಂದ 3 ಕೋಟಿ ರೂ. ವರೆಗೂ ಹಂಚಿಕೆ ಮಾಡಲಾಗಿದೆ. ಕೇವಲ 30 ಲಕ್ಷದ ಅನುದಾನದಿಂದ ಯಾವ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಈ ತಾರತಮ್ಯ ಸರಿಪಡಿಸಬೇಕು ಹಾಗೂ ಎಲ್ಲಾ ವಾರ್ಡ್ ಗಳಿಗೂ ಸಮರ್ಪಕ ಅನುದಾನ ಬಿಡುಗಡೆ ಮಾಡಬೇಕು. ಹಾಗಾಗಿ ಈ ಕ್ರಿಯಾ ಯೋಜನೆಗೆ ಸರ್ಕಾರ ಅನುಮೋದನೆ ನೀಡಬಾರದೆಂದು ಮನವಿ ಮಾಡಿದರು.
ಕಾಂಗ್ರೆಸ್ ಸದಸ್ಯರು ಪ್ರತಿನಿಧಿಸುವ ವಾರ್ಡ್ ಗಳಿಗೆ 20 ಕೋಟಿ ಅನುದಾನ
ದಾವಣಗೆರೆ ಪಾಲಿಕೆಯಲ್ಲಿ 45 ಸದಸ್ಯರಿದ್ದಾರೆ. ಕಾಂಗ್ರೆಸ್ ನ 22 ಸದಸ್ಯರು ಹಾಗೂ ಬಿಜೆಪಿಯ 17 ಜೊತೆಗೆ ಪಕ್ಷೇತರರು 4 ಸದಸ್ಯರಿದ್ದಾರೆ. ನಗರ ವಿಕಾಸ ಯೋಜನೆಯ 125 ಕೋಟಿ ರೂ. ಅನುದಾನದಲ್ಲಿ ಬಿಜೆಪಿ ಸದಸ್ಯರಿರುವ ವಾರ್ಡ್ ಗೆ 51 ಕೋಟಿ 85 ಲಕ್ಷ ಅನುದಾನ ನೀಡಲಾಗಿದೆ. 22 ಕಾಂಗ್ರೆಸ್ ಸದಸ್ಯರು ಪ್ರತಿನಿಧಿಸುವ ವಾರ್ಡ್ ಗಳಿಗೆ 20 ಕೋಟಿ ಅನುದಾನ ನೀಡಲಾಗಿದೆ. ಶಾಸಕರ ಪುತ್ರಿ ಹಾಗೂ ಮೇಯರ್ ವಾರ್ಡ್ ಗಳಿಗೆ ಅತ್ಯಧಿಕ 7 ಕೋಟಿ 90 ಲಕ್ಷ ಅನುದಾನ ನೀಡಲಾಗಿದೆ ಎಂದು ವಿಪಕ್ಷ ನಾಯಕ ಎ.ನಾಗರಾಜ್ ಆರೋಪ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ್, ಸೈಯಿದ್ ಚಾರ್ಲಿ, ಮಂಜುನಾಥ್, ಅಬ್ದುಲ್ ಲತೀಫ್, ಉಮೇಶ್, ಇಟ್ಟಿಗುಡಿ ಮಂಜುನಾಥ್, ನಾಗರಾಜ್ ಪಾಮೇನಹಳ್ಳಿ, ಹರೀಶ್ ಬಸಾಪುರ ಇದ್ದರು.