ಇದು ಶಾಸಕರ ಈಜುಕೊಳ; ದಾವಣಗೆರೆಯಲ್ಲಿ ವಿನೂತನ ಪ್ರತಿಭಟನೆ
ದಾವಣಗೆರೆ, ಸೆಪ್ಟೆಂಬರ್ 29: ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿಗಾಗಿ ಆಗ್ರಹಿಸಿ ಗ್ರಾಮಸ್ಥರಿಂದ ವಿನೂತನ ಪ್ರತಿಭಟನೆ ನಡೆದಿದೆ. ದಾವಣಗೆರೆಗೆ ಹೊಂದಿಕೊಂಡಿರುವ ಹಳೇ ಕುಂದುವಾಡ ಗ್ರಾಮದ ಗ್ರಾಮಸ್ಥರು ವಿನೂತನ ಪ್ರತಿಭಟನೆಗೆ ಇಳಿದಿದ್ದಾರೆ.
ಚೈನಾ ಹೂಗಳ ವಿರುದ್ಧ ಬೆಂಗಳೂರಲ್ಲಿ ವಿನೂತನ ಪ್ರತಿಭಟನೆ
ಗ್ರಾಮಸ್ಥರು ಕೆಸರು ಗುಂಡಿಯಾದ ರಸ್ತೆಯಲ್ಲಿ ಭತ್ತದ ನಾಟಿ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಅಲ್ಲದೇ ದೊಡ್ಡ ದೊಡ್ಡ ಗುಂಡಿಗಳು ಬಿದ್ದ ಜಾಗದಲ್ಲಿ ಇದು ಶಾಸಕರ ಈಜು ಕೊಳ, ಇದು ಸಂಸದರ ಈಜು ಕೊಳ ಎಂದು ಬೋರ್ಡ್ ಹಾಕುವುದರ ಮೂಲಕ ವ್ಯಂಗ್ಯ ಮಾಡಿದ್ದಾರೆ.
ಪಾಲಿಕೆ ವ್ಯಾಪ್ತಿಗೆ ಬರುವ ಈ ಗ್ರಾಮಕ್ಕೆ ಹಲವು ವರ್ಷಗಳಿಂದ ಸರಿಯಾದ ರಸ್ತೆಯೇ ಇಲ್ಲ. ಮಳೆ ಬಂದರೆ ಸಾಕು ಇಲ್ಲಿನ ರಸ್ತೆಗಳು ಕೆಸರುಮಯವಾಗುತ್ತವೆ. ಸಾಕಷ್ಟು ಬಾರಿ ಜನ ಪ್ರತಿನಿಧಿಗಳಿಗೆ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಹಾಗೂ ಸ್ಥಳೀಯ ಸಂಘಟನೆಗಳು ವಿನೂತನ ಪ್ರತಿಭಟನೆ ಮಾಡುವುದರ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಇನ್ನು ಮುಂದಾದರೂ ರಸ್ತೆ ಕಾಮಗಾರಿ ಅಭಿವೃದ್ಧಿ ಮಾಡಲಿ, ಇಲ್ಲವಾದರೆ ಜನ ಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಮನೆ ಮುಂದೆ ಕೆಸರು ಮಾಡಿ ಅಲ್ಲಿ ಭತ್ತದ ನಾಟಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.