ಅಂದು ಆಡಿದ ಮಾತಿಗೆ ಇಂದು ಕಣ್ಣೀರು ಹಾಕಿದ್ರಾ ಮಾಧುಸ್ವಾಮಿ?
ದಾವಣಗೆರೆ, ನವೆಂಬರ್.21: ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಅಂತಾರೆ. ಹೀಗೆ ನಾಲಗೆ ಮೇಲಿನ ಕಂಟ್ರೋಲ್ ಕಳೆದುಕೊಂಡು ಆಡಿದ ಮಾತು ಇಂದು ಸಚಿವರನ್ನು ಕಣ್ಣೀರು ಹಾಕುವಂತೆ ಮಾಡಿತಾ ಎಂಬ ಅನುಮಾನ ವ್ಯಕ್ತವಾಗಿದೆ.
ಕನಕದಾಸರ ಬಗ್ಗೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎನ್ನಲಾಗಿತ್ತು. ಅದಕ್ಕಾಗಿ ಸಚಿವರ ವಿರುದ್ಧ ಭಕ್ತರು ಕೆರಳಿ ಕೆಂಡವಾಗಿದ್ದರು. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಹುಳಿಯಾರ್ ಪಟ್ಟಣದ ವೃತ್ತಕ್ಕೆ ಕನಕದಾಸರ ಹೆಸರು ಇರಿಸುವ ಬಗ್ಗೆ ಚರ್ಚೆ ಆಗುತ್ತಿತ್ತು. ಈ ವೇಳೆ ಜೆ.ಸಿ.ಮಾಧುಸ್ವಾಮಿ, ಕುರುಬ ಸಮುದಾಯದ ಈಶ್ವರಾನಂದ ಸ್ವಾಮೀಜಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು ಎನ್ನಲಾಗಿತ್ತು.
ಸ್ವಾಮೀಜಿಗೆ ಏಕವಚನ ಬಳಕೆ; ಮಾಧುಸ್ವಾಮಿ ರಾಜೀನಾಮೆಗೆ ಆಗ್ರಹ
ಅಂದು ನೀಡಿದ್ದ ಹೇಳಿಕೆಗೆ ಪಶ್ಚಾತಾಪವಾಗಿ ಇಂದು ಸ್ವತಃ ಕಾನೂನು ಸಚಿನ ಜೆ.ಸಿ.ಮಾಧುಸ್ವಾಮಿ ಅವರೇ ಶ್ರೀಗಳ ಎದುರು ಕಣ್ಣೀರು ಹಾಕಿದರು ಎನ್ನಲಾಗಿದೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಬೆಳ್ಳೂಡಿಯ ಮಠಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಮಾಧುಸ್ವಾಮಿ ಭೇಟಿ ನೀಡಿದರು. ಈ ವೇಳೆ ಶ್ರೀಗುರು ಕನಕಪೀಠದ ನಿರಂಜನಾನಂದಪುರಿ ಶ್ರೀಗಳ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ.
ಆತುರದಲ್ಲಿ ಆಡಿದ ಮಾತಿನಿಂದ ಕಸಿವಿಸಿ
ಕನಕ ಸರ್ಕಲ್ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ಸಚಿವ ಮಾಧುಸ್ವಾಮಿ ವಿರುದ್ಧ ಪ್ರತಿಭಟನೆಗಳು ಜೋರಾದವು. ಸಚಿವರು ಕೂಡಲೇ ಹಾಲುಮತ ಸ್ವಾಮೀಜಿಗಳ ಕ್ಷಮೆ ಕೇಳುವಂತೆ ರಾಜ್ಯದ ನಾನಾ ಕಡೆಗಳಲ್ಲಿ ಕುರುಬ ಸಮುದಾಯದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಾಧುಸ್ವಾಮಿ ವಿರುದ್ಧ ಧಿಕ್ಕಾರ ಕೂಗಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕುರುಬ ಸಂಘಗಳು ಬಿಗಿಪಟ್ಟು ಹಿಡಿದಿವೆ. ಹೋರಾಟ ತೀವ್ರ ಸ್ವರೂಪಕ್ಕೆ ತಿರುಗುತ್ತಿದ್ದಂತೆ ಎಚ್ಚೆತ್ತ ಕಾನೂನು ಸಚಿವ ಮಾಧುಸ್ವಾಮಿ ಸಂಧಾನಕ್ಕೆ ಮುಂದಾದರು.
ಗೃಹ ಸಚಿವರ ನೇತೃತ್ವದಲ್ಲಿ ಸಂಧಾನ ಸಕ್ಸಸ್
ಹುಳಿಯಾರ್ ನಲ್ಲಿಯಾವುದೇ ಗೊಂದಲವಿಲ್ಲದೆ ಕನಕದಾಸರ ವೃತ್ತ ನಿರ್ಮಿಸಲಾಗುತ್ತದೆ ಎಂದು ಸಚಿವರೇ ಒಪ್ಪಿಕೊಂಡಿದ್ದಾರೆ. ಮಾಧುಸ್ವಾಮಿ ನೇತೃತ್ವದಲ್ಲಿ ವೃತ್ತವನ್ನು ನಿರ್ಮಿಸಲು ಮುಂದಾಗಿದ್ದು, ಎಲ್ಲಾ ಗೊಂದಲಗಳು ಸುಖಾಂತ್ಯ ಕಂಡಿವೆ. ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಸಕ್ಸಸ್ ಆಗಿದೆ. ಹುಲಿಯಾರ್ ಬಂದ್ ಹಿಂಪಡೆಯುಲು ಶ್ರೀಮಠವು ನಿರ್ಧರಿಸಿದೆ.
ನಿರಂಜನಾನಂದಪುರಿ ಶ್ರೀಗಳ ಎದುರು ಸಚಿವರ ಕಣ್ಣೀರು!
ಅಂದು ಕೋಪದಲ್ಲಿ ಆಡಿದ ಮಾತಿಗೆ ಇಂದು ಸ್ವತಃ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರೇ ಶ್ರೀಗಳ ಎದುರು ಕಣ್ಣೀರು ಹಾಕಿದರಂತೆ. ಸಂಧಾನ ಸಭೆ ಬಳಿಕ ಸಚಿವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ನಾನು ಆ ವೃತ್ತಕ್ಕೆ ಕನಕದಾಸರ ಹೆಸರಿಡಲು ವಿರೋಧಿಸಿಲ್ಲ. ನಾನು ಸ್ವಾಮೀಜಿಗಳ ವಿರುದ್ಧ ಒಂದೇ ಒಂದು ಕೆಟ್ಟ ಪದವನ್ನೂ ಬಳಸಿಲ್ಲ. ಸಭೆಯಲ್ಲಿ ಗೊಂದಲಗಳಿದ್ದಾಗ ಏರುಧ್ವನಿಯಲ್ಲಿ ಮಾತನಾಡಿದ್ದೇನೆ ಅಷ್ಟೇ ಎಂದು ಸಚಿವ ಮಾಧುಸ್ವಾಮಿ ಸ್ಪಷ್ಟನೆ ನೀಡಿದರು.
ಸಚಿವರ ಕಣ್ಣೀರಿಗೆ ಕರಗಿದ ನಿರಂಜನಾನಂದಪುರಿ ಶ್ರೀಗಳು!
ಸಚಿವರು ನೀಡಿದ ಹೇಳಿಕೆ ಬಗ್ಗೆ ನಮಗೂ ಸಾಕಷ್ಟು ಕೋಪವಿತ್ತು. ಆದರೆ, ಇಂದು ಅವರ ಕಣ್ಣಂಚಿನಲ್ಲಿ ನೀರು ನೋಡಿದ್ದೇವೆ. ಮಾತುಕತೆ ವೇಳೆ ಪೊಲೀಸರು ಕೂಡಾ ಹೇಳಿದ್ದಾರೆ. ನಾಮಫಲಕಕ್ಕೆ ಯಾವುದೇ ಅಡ್ಡಿ ಮಾಡಬೇಡಿ ಎಂದು ತಿಳಿಸಿದ್ದಾರೆ. ಇಂದಿನ ಸಚಿವರು ಹಾಗೂ ಶ್ರೀಗಳ ನಡುವಿನ ಜಗಳ ಸುಖಾಂತ್ಯ ಕಂಡಿದೆ ಎಂದು ನಿರಂಜನಾನಂದಪುರಿ ಸ್ವಾಮೀಜಿ ತಿಳಿಸಿದರು.