ದಾವಣಗೆರೆ; ಕಂಟೈನ್ಮೆಂಟ್ ಝೋನ್ ನಿವಾಸಿಗಳಿಗೆ ಆಹಾರ ಸಾಮಗ್ರಿ ಒದಗಿಸಲು ಒತ್ತಾಯ
ದಾವಣಗೆರೆ, ಜೂನ್ 9; ಇಲ್ಲಿನ ಜಾಲಿ ನಗರದಲ್ಲಿರುವ ಕಂಟೈನ್ ಮೆಂಟ್ ಝೋನ್ ಗಳಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಅವರಿಗೆ ತರಕಾರಿ, ಹಾಲು, ರೇಶನ್ ಕಿಟ್ ಒದಗಿಸುವಲ್ಲಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವಿಫಲವಾಗಿದೆ ಎಂದು ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್ ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಒಂದು ವಾರ್ಡ್ ನಲ್ಲಿ ಸುಮಾರು ಏಳೆಂಟು ಕಂಟೈನ್ ಮೆಂಟ್ ಝೋನ್ ಗಳನ್ನು ಮಾಡಲಾಗಿದೆ. ಜಾಲಿನಗರದಲ್ಲಿ 8 ಕಡೆ ಕಂಟೈನ್ ಮೆಂಟ್ ಝೋನ್ ಗಳಿವೆ. ಒಂದು ಕಂಟೈನ್ ಮೆಂಟ್ ವ್ಯಾಪ್ತಿಯಲ್ಲಿ 50 ರಿಂದ 60 ಮನೆಗಳಿವೆ. ಈ ಭಾಗ ಕಳೆದ 2 ತಿಂಗಳಿನಿಂದಲೂ ಸೀಲ್ ಡೌನ್ ಆಗಿದೆ. ಇಲ್ಲಿರುವವರು ದಿನಗೂಲಿ ಮಾಡುವವರು, ಕೂಲಿ ಕಾರ್ಮಿಕರು. ನಿತ್ಯ ದುಡಿದರಷ್ಟೇ ಅವರ ಬಳಿ ಹಣವಿರುತ್ತದೆ. ಆದರೆ ಸೀಲ್ ಡೌನ್ ಆಗಿರುವುದರಿಂದ ಕೆಲಸವೂ ಇಲ್ಲದೇ ಹಣವೂ ಇಲ್ಲದೇ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಪಾಲಿಕೆ, ಶಾಸಕರು ಹಾಗೂ ಪಾಲಿಕೆ ಸದಸ್ಯರು ರೇಶನ್ ಕಿಟ್ ಗಳನ್ನು ನೀಡಿದ್ದಾರೆ. ಅವುಗಳನ್ನು ಒಂದು ವಾರ ಮಾತ್ರ ಬಳಸಬಹುದು. ಬೇರೆ ಯಾವುದೇ ಸೌಲಭ್ಯ ಆ ಭಾಗದಲ್ಲಿ ಸರ್ಕಾರದಿಂದ ದೊರೆತಿಲ್ಲ ಎಂದು ದೂರಿದರು.
ರೈತರ ಕಷ್ಟಕ್ಕೆ ಸಿಗದ ಕೇಂದ್ರ, ರಾಜ್ಯ ಸರ್ಕಾರದ ಪ್ಯಾಕೇಜ್: ರೈತ ಸಂಘ
ದಿನಸಿ ಹಾಗೂ ತರಕಾರಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಹೇಳಿದೆ. ಆದರೆ ಅದನ್ನು ಕೊಳ್ಳಲೂ ಆ ಜನರ ಬಳಿ ಹಣವಿಲ್ಲದ ಪರಿಸ್ಥಿತಿಯಿದೆ ಅದಕ್ಕಾಗಿ ಕನಿಷ್ಠ ಸೌಲಭ್ಯಗಳಾದ ಹಾಲು ತರಕಾರಿ, ದಿನಸಿ ನೀಡಿದರೆ ಆ ಭಾಗದ ಜನ ಬದುಕಬಹುದು. ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಕಂಟೈನ್ ಮೆಂಟ್ ಝೋನ್ ಗಳ ನಿವಾಸಿಗಳಿಗೆ ಕನಿಷ್ಠ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿದರು.
ಪಾಲಿಕೆ ಸದಸ್ಯ ಕೆ ಚಮನ್ ಸಾಬ್ ಮಾತನಾಡಿ, ಕ್ವಾರಂಟೈನ್ ನಲ್ಲಿ ಸಮರ್ಪಕವಾಗಿ ಆಹಾರ ಸಿಗುತ್ತಿಲ್ಲ. ಬಿಪಿ, ಶುಗರ್ ರೋಗಿಗಳಿಗೆ ಮಾತ್ರೆಗಳೂ ಸಿಗುತ್ತಿಲ್ಲ. ಇದರಿಂದಾಗಿ ಸಾವನ್ನಪ್ಪಿದ ಪ್ರಸಂಗವೂ ಜಿಲ್ಲೆಯಲ್ಲಿದೆ. ಅದಕ್ಕಾಗಿಯೇ ಇಂದು ಕ್ವಾರಂಟೈನ್ ಗಳಿಗೆ ಹೋಗಲು ಜನರು ಹೆದರುತ್ತಿದ್ದಾರೆ. ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ್, ವಿನಾಯಕ್ ಪೈಲ್ವಾನ್, ಮಂಜುನಾಥ್, ಸೈಯದ್ ಚಾರ್ಲಿ ಇದ್ದರು.