ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವಂತೆ ಒತ್ತಾಯ
ದಾವಣಗೆರೆ, ಜುಲೈ 16: ರಾಜ್ಯದಲ್ಲಿ ಈಗಾಗಲೇ ಕೊಡಗು ಮತ್ತು ಬೀದರ್ನಲ್ಲಿ ಕುರುಬರು ಎಸ್.ಟಿ.ಯಲ್ಲಿ ಇದ್ದಾರೆ. ಉಳಿದ ಜಿಲ್ಲೆಗಳು ಮೀಸಲಾತಿಯಿಂದ ವಂಚಿತವಾಗಿದ್ದು ಎಲ್ಲಾ ಭಾಗದ ಕುರುಬರನ್ನು ಎಸ್. ಟಿಗೆ ಸೇರಿಸಲು ಅಧಿಕೃತ ಹೋರಾಟ ಆರಂಭ ಮಾಡಲಾಗಿದೆ ಎಂದು ಹರಿಹರ ತಾಲ್ಲೂಕು ಬೆಳ್ಳೂಡಿ ಕನಕಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಜಿ ಹೇಳಿದರು.
ಬೆಳ್ಳೂಡಿ ಕನಕ ಮಠದಲ್ಲಿ ಹಾಲುಮತ ಮಹಾಸಭಾ ಏರ್ಪಡಿಸಿದ್ದ ರಾಜ್ಯ ಮಟ್ಟದ ಎಸ್.ಟಿ ಮೀಸಲಾತಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ನಾಯಕರ ಜಗಳದಲ್ಲಿ ಬಡವಾಗುತ್ತಿರುವ ಕುರುಬ ಸಮುದಾಯ
ಹಾಲುಮತ ಮಹಾಸಭಾ ಸಮಾಜದ ಸಂಘಟನೆಯಲ್ಲಿ ನಿರತವಾಗಿದ್ದು ರಾಜ್ಯದ 30 ಜಿಲ್ಲೆಗಳಿಂದ ಆಗಮಿಸಿದ್ದ 800 ಜನ ಪ್ರತಿನಿಧಿಗಳಿಗೆ ಕಾಗಿನೆಲೆ ಕನಕಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿಗಳು ಹೋರಾಟದ ರೂಪುರೇಷೆ ಸಿದ್ದ ಪಡಿಸಿಕೊಳ್ಳಿ ಎಂದರು.
ಕಳೆದ ಸರ್ಕಾರ ವೇಳೆ ಅನೇಕ ಸಭೆಗಳು, ಬೃಹತ್ ಸಮಾವೇಶ, ಧರಣಿಗಳ ಮೂಲಕ ಹಲವಾರು ಬಾರಿ ಎಸ್.ಟಿ. ಮೀಸಲಾತಿಯ ಬೇಡಿಕೆಯನ್ನು ಸಲ್ಲಿಸಲಾಗಿತ್ತು, ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಲುಮತ ಮಹಾಸಭಾದ ರಾಜ್ಯಪ್ರತಿನಿಧಿಗಳ ಜೊತೆ ಅಧಿಕೃತ ಸಭೆ ನಡೆಸಿ, ಮೀಸಲಾತಿ ಪ್ರಮಾಣ ಏರಿಸಿ ಎಸ್.ಟಿ.ಗೆ ಶಿಫಾರಸ್ಸು ಮಾಡುವ ಭರವಸೆಯನ್ನು ನೀಡಿದ್ದರು ಎಂದರು.
ಸಮಾಜವು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದ್ದು, ಅಟ್ರಾಸಿಟಿ ಕೇಸುಗಳಿಂದ ಅಮಾಯಕ ಕುರುಬರ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ಮುಕ್ತಿ ಸಿಗಬೇಕಾದರೆ ಕುರುಬರು ನೆಮ್ಮದಿಯಿಂದ ಜೀವಿಸಬೇಕಾದರೆ ಎಸ್.ಟಿ. ಮೀಸಲಾತಿ ಅನಿವಾರ್ಯತೆ ಇದೆ ಎಂದರು.
ಸಿದ್ದರಾಮಯ್ಯ ಮಾತ್ರ ಕುರುಬರೇ ನಾನು ಕುರುಬನಲ್ಲವೇ?: ವಿಶ್ವನಾಥ್
ಎಸ್.ಟಿ. ಮಾನ್ಯತೆ ಸಿಗಬೇಕಾದ ಎಲ್ಲಾ ಗುಣ ಲಕ್ಷಣಗಳು ಕುರುಬ ಸಮಾಜಕ್ಕೆ ಇದ್ದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತು ಕರ್ನಾಟಕ ಕೊಡಗು, ಬೀದರ್ನಲ್ಲೂ ಎಸ್.ಟಿ. ಇದೆ ಇಷ್ಟೆಲ್ಲಾ ಇದ್ದರೂ ಕುರುಬರು ಹಕ್ಕುಗಳಿಂದ ವಂಚಿತರಾಗಿದ್ದಾರೆ ಎಂದು ಅವರು ಹೇಳಿದರು.
ಹಾಲುಮತ ಸಮಾಜದ ಹಿತರಕ್ಷಣೆಗಾಗಿ ನಾನು ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆಯಿಂದ ನಿವೃತ್ತ ಪೋಲೀಸ್ ಅಧಿಕಾರಿಗಳು, ನ್ಯಾಯಮೂರ್ತಿಗಳು, ಸಂಶೋಧಕರು, ಮಹಿಳೆಯರು, ಯುವಕರು ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಾಸ್ತಾನ, ಗುಜರಾತ್, ಉತ್ತರಪ್ರದೇಶ, ಬಿಹಾರ ಸೇರಿದಂತೆ ಇತರೆ ರಾಜ್ಯಗಳ ಪ್ರತಿನಿಧಿಗಳ ಎಸ್.ಟಿ. ಮೀಸಲಾತಿ ಹೋರಾಟ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ ಎಂದರು.
ಶೀಘ್ರದಲ್ಲಿ ಕಾಗಿನೆಲೆಯಲ್ಲಿ ಸಭೆ ನಡೆಸಲಾಗುವುದುಎಂದು ಇದೇ ಶ್ರೀಗಳು ಹೇಳಿದರು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷರಾದ ರುದ್ರಣ್ಣ ಗುಳಗುಳಿ, ಮಹಾಸಭಾ ರಾಜ್ಯ ಸಮಿತಿ, ಎಲ್ಲಾ ಜಿಲ್ಲಾ ಸಮಿತಿ ಸದಸ್ಯರುಗಳು ಮತ್ತು ಕುರುಬ ಸಮಾಜದಬಂಧುಗಳು ಈ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.