ದಾವಣಗೆರೆ: ವಿಮೆ ಹಣ ಲಪಟಾಯಿಸಲು ಸಿನಿಮಾ ಮಾದರಿ ಕೊಲೆ
ದಾವಣಗೆರೆ, ಮೇ 04: ವಿಮೆ ಹಣ ಲಪಟಾಯಿಸಲು ಏನೇನೋ ತಂತ್ರಗಳನ್ನು ಹೆಣೆದು, ಕೊಲೆಗಳನ್ನು ಮಾಡುವ ಬಗ್ಗೆ ಸಿನಿಮಾಗಳಲ್ಲಿ ನೋಡುತ್ತಲೇ ಇರುತ್ತೇವೆ, ದಾವಣಗೆರೆಯಲ್ಲಿ ಇದು ನಿಜವಾಗಿಯೂ ನಡೆದಿದೆ, ಆದರೆ ಇಲ್ಲಿ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಈರುಳ್ಳಿ ಮಂಡಿಯ ಮಾಲೀಕನ ಮಕ್ಕಳು ತಮ್ಮದೇ ಪಾಲಿನ ವಿಮೆ ಹಣ ಪಡೆಯಲು ಸಾವಿನ ನಾಟಕ ಆಡಿ, ವಿಮೆ ಸಂಸ್ಥೆಗೆ ಹೆಣ ತೋರಿಸಲೆಂದು ತಮ್ಮ ಮಂಡಿಯ ಆಳನ್ನೇ ಕೊಂದಿರುವ ಘಟನೆ ಬೆಳಕಿದೆ ಬಂದಿದೆ.
ಬಿಹಾರ ಆಶ್ರಯತಾಣದಲ್ಲಿ 11 ಬಾಲಕಿಯರ ಬರ್ಬರ ಹತ್ಯೆ: ಮೂಳೆಗಳನ್ನು ಪತ್ತೆಹಚ್ಚಿದ ಸಿಬಿಐ
ದಾವಣಗೆರೆಯ ಈರುಳ್ಳಿ ಮಂಡಿಯ ಮಾಲೀಕ ಗುರಣ್ಣ ಎಂಬುವರ ಮಗ ಮಲ್ಲಿಕಾರ್ಜುನ ಸಿನಿಮಾ ಮಾದರಿಯಲ್ಲಿ ತಂತ್ರವೊಂದನ್ನು ರಚಿಸಿ ತನ್ನ ಸಾವಾಗಿದೆಯೆಂದು ನಂಬಿಸಿ ಅವನ ವಿಮೆಯ ಹಣವನ್ನು ಅವನೇ ಪಡೆದುಕೊಳ್ಳಲು ಭಾರಿ ತಂತ್ರವನ್ನು ಹೆಣೆದಿದ್ದ.
ಒಂಬತ್ತು ದಿನಗಳ ಹಿಂದೆ (ಏಪ್ರಿಲ್ 25) ಕಾರು ಅಪಘಾತವೊಂದರಲ್ಲಿ ಗುರಣ್ಣ ಅವರ ಮಗ ಮಲ್ಲಿಕಾರ್ಜುನ ಸಾವನ್ನಪ್ಪಿದ್ದಾನೆ ಎಂದು ಹೇಳಲಾಯಿತು, ಕಾರಿನಲ್ಲಿ ಗುರುತು ಸಿಗದ ಸ್ಥಿತಿಯಲ್ಲಿ ಹೆಣವೂ ಒಂದು ಸಿಕ್ಕಿತ್ತು, ಎಲ್ಲರೂ ಮಲ್ಲಿಕಾರ್ಜುನ ಸತ್ತನೆಂದು ಭಾವಿಸಿದ್ದರು.
ಈರುಳ್ಳಿ ಮಂಡಿ ಹಮಾಲಿ ವೀರೇಶ ನಾಪತ್ತೆ
ಅದೇ ದಿನ, ಈರುಳ್ಳಿ ಮಂಡಿಯಲ್ಲಿ ಮೂಟೆ ಹೊರುವ ಕೆಲಸ ಮಾಡುವ ವೀರೇಶ ಕಾಣೆಯಾಗಿದ್ದಾನೆ ಎಂದು ಆತನ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಎರಡೂ ಪ್ರಕರಣವನ್ನು ಅಕ್ಕ-ಪಕ್ಕ ಇಟ್ಟು ನೋಡಿದಾಗ ಹಾಗೂ ಈರುಳ್ಳಿ ಮಂಡಿ ಮಾಲೀಕ ಗುರಣ್ಣನ ಮತ್ತೊಬ್ಬ ಮಗ ಬಸವರಾಜು ನಡವಳಿಕೆಯಲ್ಲಿ ಅನುಮಾನ ಕಂಡು ಬಂದಾಗ ಎಚ್ಚರಗೊಂಡ ಪೊಲೀಸರು ತನಿಖೆ ನಡೆಸಿ ಸತ್ಯವನ್ನು ಬಯಲಿಗೆ ಎಳೆದಿದ್ದಾರೆ.
ಲಕ್ಷಾಂತರ ಸಾಲ ಮಾಡಿದ್ದ ಮಲ್ಲಿಕಾರ್ಜುನ
ಮಲ್ಲಿಕಾರ್ಜುನನಿಗೆ ಲಕ್ಷಾಂತರ ರೂಪಾಯಿ ಸಾಲವಿತ್ತಂತೆ, ಸಾಲದಿಂದ ಪಾರಾಗಲು ವಿಮೆಯ ಹಣ ಲಪಟಾಯಿಸಲು ಸಾವಿನ ನಾಟಕ ಹೆಣೆದಿದ್ದಾನೆ, ಇದಕ್ಕೆ ಆತನ ಸಹೋದರ ಬಸವರಾಜು ಸಹಾಯ ಮಾಡಿದ್ದಾನೆ ಎನ್ನಲಾಗಿದೆ.
ನಾಪತ್ತೆ ಪ್ರಕರಣ ಭೇದಿಸುವಾಗ ಹೊರಬಿದ್ದ ಸರಣಿ ಕೊಲೆಗಳ ಭೀಕರ ಸತ್ಯ
ತನಿಖೆಯಿಂದ ಸತ್ಯ ಬಹಿರಂಗ
ತಮ್ಮದೇ ಮಂಡಿಯಲ್ಲಿ ಕೆಲಸ ಮಾಡುವ ತನ್ನದೇ ಮೈಕಟ್ಟಿನ ವಿರೇಶ್ನನ್ನು ಅಪಹರಿಸಿ ಕೊಲೆ ಮಾಡಿ, ಆತನ ಮುಖ ಗುರುತು ಸಿಗದಂತೆ ಮಾಡಿ, ಕಾರಿನಲ್ಲಿ ಇಟ್ಟು ಅಪಘಾತವಾಗಿರುವಂತೆ ನಂಬಿಸಿದ್ದಾನೆ. ಆದರೆ ಪೊಲೀಸರ ತನಿಖೆಯಿಂದ ಕೊಲೆಯ ರಹಸ್ಯ ಬಯಲಾಗಿದೆ.
ಅಂಗಡಿ ಧ್ವಂಸ ಮಾಡಿದ ಹಮಾಲಿಗಳು
ತಮ್ಮದೇ ಮಾಲೀಕನ ಮಗ ತಮ್ಮ ಸಹೋದ್ಯೋಗಿಯನ್ನು ಹಣದ ಆಸೆಗೆ ಕೊಂದಿದ್ದಾನೆ ಎಂದು ಗೊತ್ತಾದ ಕೂಡಲೇ ಇಂದು ಈರುಳ್ಳಿ ಮಂಡಿಗೆ ದಾಳಿ ಇಟ್ಟ ಹಮಾಲಿ (ಮೂಟೆ ಹೊರುವವರು) ಕಚೇರಿಯನ್ನು ಪುಡಿಗಟ್ಟಿದ್ದಾರೆ. ಪೊಲೀಸರು ಈರುಳ್ಳಿ ಮಂಡಿ ಮಾಲೀಕ ಗುರಣ್ಣ ಅವರ ಇಬ್ಬರು ಮಕ್ಕಳನ್ನು ಬಂಧಿಸಿದ್ದಾರೆ.