ತರಕಾರಿಗೆ ದರಪಟ್ಟಿ ನಿಗದಿ; ಗ್ರಾಹಕರಿಗೆ ದಾವಣಗೆರೆ ಪಾಲಿಕೆ ಸಾಥ್
ದಾವಣಗೆರೆ, ಏಪ್ರಿಲ್ 10: ಜನರಿಗೆ ಹೊರೆಯಾಗುವಂತಹ ಕೆಲಸವನ್ನು ಯಾರೂ ಮಾಡಬಾರದು ಎಂದು ಇಂದು ಮೇಯರ್ ಬಿ.ಜೆ ಅಜಯ್ ಕುಮಾರ್ ಮನವಿ ಮಾಡಿದ್ದಾರೆ.
"ಲಾಕ್ ಡೌನ್ ಸಮಯದಲ್ಲಿ ಜನಜೀವನ ಕಷ್ಟಕರವಾಗಿದೆ. ಆದ್ದರಿಂದ ಜನರಿಗೆ ಹೊರೆ ತಗ್ಗಿಸುವ ಸಲುವಾಗಿ ಎಪಿಎಂಸಿ ವರ್ತಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ಮಾಡಿ ಯಾರಿಗೂ ಹೊರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ರೈತರೊಂದಿಗೆ ಮಾತನಾಡಿ ತರಕಾರಿ ಮಾರಾಟ ಮಾಡಲು ಒಂದು ದರ ನಿಗದಿ ಮಾಡಲಾಗಿದೆ. ದುಪ್ಪಟ್ಟು ಬೆಲೆಗೆ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಇದನ್ನು ತಡೆಗಟ್ಟಲು ತರಕಾರಿ ಮಾರಾಟ ಮಾಡುವ ತಳ್ಳುವ ಗಾಡಿಯಿಂದ ಹಿಡಿದು ಅಂಗಡಿಗಳಲ್ಲಿ ತರಕಾರಿ ಮಾರುವವರಿಗೂ ಪ್ರತಿಯೊಬ್ಬರಿಗೂ ಎಪಿಎಂಸಿಯಿಂದ ಒಂದು ದರಪಟ್ಟಿಯನ್ನು ಅಧಿಕಾರಿಗಳು ನೀಡುತ್ತಾರೆ. ಅದರಂತೆ ಮಾರಾಟ ಮಾಡಬೇಕು. ಕೆ.ಆರ್. ಮಾರುಕಟ್ಟೆಗೆ ಬರುವ ಪ್ರತಿಯೊಂದು ತರಕಾರಿಯ ದರವನ್ನು ಮುದ್ರಣ ಮಾಡಿ ಪ್ರತಿ ಗಾಡಿಗೂ ಹಾಗೂ ಅಂಗಡಿಗಳಿಗೂ ನೀಡಲಾಗುವುದು" ಎಂದು ಮಾಹಿತಿ ನೀಡಿದರು.
ಸಚಿವರೇ ಇಲ್ನೋಡಿ: ಕೊರೊನಾ ನೆಪದಲ್ಲಿ ರೈತರಿಗೆ ಆಗುತ್ತಿದೆ ಮಹಾ ಮೋಸ.!
ಅತೀ ಹೆಚ್ಚು ದರಕ್ಕೆ ಅಥವಾ ನಾವು ನೀಡಿರುವ ದರಕ್ಕಿಂತ ಒಂದು ರೂ ಹೆಚ್ಚಿಗೆ ಮಾರಿದರೆ ಅಂತಹ ಅಂಗಡಿಗಳನ್ನು ಸೀಜ್ ಮಾಡಲಾಗುವುದು ಹಾಗೂ ಗಾಡಿಗಳನ್ನು ವಶ ಪಡಿಸಿಕೊಳ್ಳಲಾಗುವುದು. ಮನೆಮನೆಗೂ ತೆರಳಿ ತಳ್ಳುವ ಗಾಡಿಗಳಲ್ಲಿ ವ್ಯಾಪಾರ ಮಾಡುತ್ತೇವೆ ಎಂದು ಹೆಚ್ಚು ದರಕ್ಕೆ ಮಾರಾಟ ಮಾಡುವಂತಿಲ್ಲ. ಎಲ್ಲರಿಗೂ ಒಂದೇ ದರ ನಿಗದಿ ಮಾಡಲಾಗಿದೆ. ನಾಗರೀಕರಿಗೆ ಯಾವುದೇ ತೊಂದರೆಯಾಗಬಾರದು ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ದರಪಟ್ಟಿ ಇಲ್ಲದವರಿಂದ ಜನರೂ ತರಕಾರಿ ಖರೀದಿಸಬಾರದು ಎಂದು ಮನವಿ ಮಾಡಿದರು.
ಪ್ರತಿದಿನ ಸಂಜೆ ನಾಳೆ ಮಾರಬೇಕಾದ ತರಕಾರಿಗಳ ದರಪಟ್ಟಿಯನ್ನು ನಿಗದಿ ಮಾಡಲಾಗುತ್ತದೆ. ಆ ಪಟ್ಟಿಯನ್ನು ವ್ಯಾಪಾರಸ್ಥರಿಗೆ ಅಧಿಕಾರಿಗಳು ನೀಡುತ್ತಾರೆ. ಮಹಾನಗರ ಪಾಲಿಕೆಯಿಂದ ಮಾಂಸ ಮಾರಾಟಗಾರರಿಗೂ ದರ ನಿಗದಿ ಮಾಡಲಾಗಿದೆ. 500 ರೂ ಗಿಂತ ಹೆಚ್ಚು ಯಾರೂ ಮಾಂಸ ಮಾರಾಟ ಮಾಡಬಾರದು. ಒಂದು ವೇಳೆ ಅಧಿಕ ದರಕ್ಕೆ ಮಾರಾಟ ಮಾಡಿದರೆ ಅವರ ಟ್ರೇಡ್ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಿರಾಣಿ ವ್ಯಾಪಾರಸ್ಥರೂ ಹೆಚ್ಚು ದರಕ್ಕೆ ಮಾರಾಟ ಮಾಡಬಾರದು. ದಾವಣಗೆರೆ ನಗರದಲ್ಲಿ 25 ಸಾವಿರಕ್ಕೂ ಹೆಚ್ಚು ಕಿರಾಣಿ ವ್ಯಾಪಾರಸ್ಥರಿದ್ದಾರೆ. ಪರಿಸ್ಥಿತಿ ಹೀಗಿರುವುದರಿಂದ ಎಲ್ಲಾ ವ್ಯಾಪಾರಸ್ಥರು ಹೆಚ್ಚು ಲಾಭಕ್ಕೆ ಮಾರಾಟ ಮಾಡಬಾರದು. ಕಷ್ಟಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ಪಾಲಿಕೆ ಸದಸ್ಯ ಎಸ್.ಟಿ ವಿರೇಶ್ ಸೇರಿದಂತೆ ಹಲವರಿದ್ದರು.