ದಾವಣಗೆರೆ ವಿವಿ ಉಪಕುಲಪತಿಯಿಂದ ನಿಯಮ ಮೀರಿದ ನೇಮಕಾತಿ?
ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ವಿವಾದದಲ್ಲಿ. ನಿವೃತ್ತಿಯ ಅಂಚಿನಲ್ಲಿ ನೇಮಕಾತಿ ನಡೆಸುತ್ತಿರುವುದರಿಂದ ವಿವಾದ.
ದಾವಣಗೆರೆ, ಆಗಸ್ಟ್ 30: ನಿವೃತ್ತಿಯ ಅಂಚಿನಲ್ಲಿರುವ ದಾವಣಗೆರೆಯ ಉಪಕುಲಪತಿ ಡಾ.ಬಿ.ಬಿ. ಕಲಿವಾಳ ಅವರು ನಿಯಮ ಮೀರಿ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
Recommended Video
ಅಕ್ರಮ ನಡೆದಿದ್ದರೆ ಜೈಲಿಗೆ ಹೋಗಲು ಸಿದ್ಧ: ರಂಗಪ್ಪ
ಕಳೆದ ವರ್ಷ ಜುಲೈ 15ರಂದು ಎಲ್ಲಾ ವಿಶ್ವವಿದ್ಯಾಲಯಗಳಿಗೆ ಸುತ್ತೋಲೆ ಹೊರಡಿಸಿರುವ, ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳೂ ಆಗಿರುವ ರಾಜ್ಯಪಾಲರು, ''ಯಾವುದೇ ವಿಶ್ವವಿದ್ಯಾಲಯದಲ್ಲಿ ನಿವೃತ್ತಿಯ ಅಂಚಿನಲ್ಲಿರುವ ಉಪ ಕುಲಪತಿಗಳು ಅಧಿಕಾರಾವಧಿ ಮುಗಿಯಲು 6 ತಿಂಗಳು ಬಾಕಿ ಇರುವಾಗ ಯಾವುದೇ ನೇಮಕಾತಿ ಮಾಡಬಾರದು'' ಎಂದು ಆದೇಶಿಸಿದ್ದಾರೆ.
ಇದೇ ವರ್ಷ ಡಿಸೆಂಬರ್ 31ರಂದು ಕಲಿವಾಳ ನಿವೃತ್ತಿಯಾಗಲಿರುವುದರಿಂದ ರಾಜ್ಯಪಾಲರ ಆದೇಶ ಅವರಿಗೂ ಅನ್ವಯವಾಗುತ್ತದೆ. ಆದರೆ, ರಾಜ್ಯಪಾಲರ ಈ ಆದೇಶವನ್ನು ಗಾಳಿಗೆ ತೂರಿರುವ ಅವರು, ತಮ್ಮಿಚ್ಛೆಯಂತೆ ನೇಮಕಾತಿಗಳನ್ನು ನಡೆಸುತ್ತಿದ್ದು, 111 ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿಗೆ ಚಾಲನೆ ನೀಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಅಧಿಕಾರಾವಧಿ ಮುಗಿಯುವ ಹಿಂದಿನ ಆರು ತಿಂಗಳಲ್ಲಿ ಯಾವುದೇ ನೇಮಕಾತಿ ಸಲ್ಲದು ಎಂದು ರಾಜ್ಯಪಾಲರು ಆದೇಶಿಸಿದ್ದರೂ, ಕಲಿವಾಳ ಅವರು, ಸಿಬ್ಬಂದಿ ಕೊರೆತೆಯ ಕಾರಣ ನೀಡಿ 18 ಬೋಧಕ, 7 ಬೋಧಕೇತರ ಸಿಬ್ಬಂದಿ ನೇಮಕಾತಿಗೆ ಒಪ್ಪಿಗೆ ಕೇಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಇದನ್ನು ವಿಶೇಷ ಮನವಿ ಎಂದು ಪರಿಗಣಿಸಿದ ರಾಜ್ಯಪಾಲರು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಮನವಿಗೆ ಒಪ್ಪಿಗೆ ನೀಡಿದ್ದರು.
ಇದನ್ನೇ ಉಪಯೋಗಿಸಿಕೊಂಡು, ಈ ಸಿಬ್ಬಂದಿಗಳ ಜತೆಗೆ, 10 ಪ್ರಾಧ್ಯಾಪಕರು, 30 ಸಹ ಪ್ರಾಧ್ಯಾಪಕರು, 71 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.