24 ಗಂಟೆ ಕೆಎಸ್ಆರ್ಟಿಸಿ ಬಸ್ ಸೇವೆಗೆ ಸಾರಿಗೆ ಸಚಿವರ ಸೂಚನೆ
ದಾವಣಗೆರೆ, ಮೇ 28: ಕೊರೊನಾ ವೈರಸ್ ಹಿನ್ನೆಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳಿಗೆ ಆಗಿರುವ ಹಾನಿ ತಗ್ಗಿಸಲು ಆಡಳಿತಾತ್ಮಕ ವೆಚ್ಚಗಳನ್ನು ಕಡಿತಗೊಳಿಸಲು ಅಗತ್ಯ ಕ್ರಮಗಳ ಕೈಗೊಳ್ಳಲಾಗುವುದು ಹಾಗೂ ರಾಜ್ಯದಲ್ಲಿ ಎಸಿ ಬಸ್ ಸೇರಿದಂತೆ ಕೆಎಸ್ಆರ್ಟಿಸಿ ಬಸ್ ಗಳನ್ನು 24 ತಾಸು ಕಾರ್ಯಾಚರಣೆ ನಡೆಸುವುದಾಗಿ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
Recommended Video
ದಾವಣೆಗೆರೆ ನಗರದ ಕೆಎಸ್ಆರ್ಟಿಸಿ ವಿಭಾಗ ಕಚೇರಿಯಲ್ಲಿ ನಡೆದ ಕೆಎಸ್ಆರ್ಟಿಸಿ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊರೊನಾ ವೈರಸ್ ನಿಯಂತ್ರಣ ಹಿನ್ನೆಲೆ ಘೋಷಿಸಲಾಗಿದ್ದ ಲಾಕ್ ಡೌನ್ ನಿಂದ ನಾಲ್ಕು ಸಾರಿಗೆ ನಿಗಮಗಳಿಗೆ ಈ ತಿಂಗಳವರೆಗೆ 1,800 ಕೋಟಿ ರೂ. ನಷ್ಟವಾಗಿದೆ ಎಂದರು.
"ದಾವಣಗೆರೆ ಗ್ಲಾಸ್ ಹೌಸ್ ನಲ್ಲಿ 5 ಕೋಟಿ ವೆಚ್ಚದ ಫೌಂಟೇನ್ ನಿರ್ಮಾಣ"
ಈ ರೀತಿ ಇನ್ಮುಂದೆ ಆಗದಿರುವ ಬಗ್ಗೆ ಕ್ರಮ ಕೈಗೊಳ್ಳಲು ಚಿಂತಿಸಬೇಕಿದೆ. ಅಧಿಕಾರಿ, ನೌಕರರ ಸಂಬಳಕ್ಕೇ 326 ಕೋಟಿ ರೂ. ಅವಶ್ಯವಿದೆ. ಆದ್ದರಿಂದ ನಿಗಮಗಳ ಆಡಳಿತಾತ್ಮಕ ವೆಚ್ಚವನ್ನು ಹೇಗೆ ಕಡಿತಗೊಳಿಸಬೇಕೆಂಬ ಬಗ್ಗೆ ಕ್ರಮ ಕೈಗೊಳ್ಳಬೇಕೆಂದರು.
ಸಾರಿಗೆ ನಿಗಮಗಳಿಗೆ ಆದಾಯ ಕುಂಠಿತವಾಗಿದೆ
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇದಕ್ಕಾಗಿ ಬಸ್ಸಿನಲ್ಲಿ ಶೇ.52 ಸೀಟಿಂಗ್ ಮಾತ್ರ ಹಾಕಿಕೊಳ್ಳಬೇಕು. ಇದರಿಂದ 54 ಜನರು ಕೂರುವ ಬಸ್ಸಿನಲ್ಲಿ 30 ಜನರಿಗೆ ಮಾತ್ರ ಅವಕಾಶ ನೀಡಬೇಕಿದೆ. ಈ ಕಾರಣದಿಂದ ಆದಾಯ ಕುಂಠಿತವಾಗಿದೆ. ಎಸಿ ಬಸ್ ಗಳಿಗೆ ಅವಕಾಶ ಇಲ್ಲ, ಅಂತರ ರಾಜ್ಯ ಓಡಾಟ ಇಲ್ಲ. ಜೊತೆಗೆ ಬೆಳಗಿನ ವೇಳೆಗೆ ಮಾತ್ರ ಸೀಮಿತಗೊಂಡಿರುವುದು ಕೂಡ ಆದಾಯ ಕುಂಠಿತಕ್ಕೆ ಕಾರಣಗಳಾಗಿವೆ ಎಂದು ತಿಳಿಸಿದರು.
ಲಾಕ್ ಡೌನ್ ಇನ್ನಷ್ಟು ಸಡಿಲಗೊಂಡರೆ ನಿರ್ವಹಣೆ ಅಸಾಧ್ಯ
ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ. ಪ್ರಭಾಕರ ರೆಡ್ಡಿ ಮಾತನಾಡಿ, ""ಪ್ರತಿ ಕಿ.ಮೀ ಗೆ 34 ರೂ. ಖರ್ಚಾಗುತ್ತಿದ್ದರೆ, 24 ರೂ. ಆದಾಯವಿದೆ. 12 ರೂ. ನಷ್ಟ ಸಂಭವಿಸುತ್ತಿದೆ. ಇದೀಗ ಸಾಮಾಜಿಕ ಅಂತರ ಹಾಗೂ ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ ಬಸ್ ಓಡಿಸುತ್ತಿರುವುದರಿಂದ ಶೇ. 15 ರಿಂದ 20 ಅಂದರೆ 1 ಕೋಟಿ ಆದಾಯ ಮಾತ್ರ ಬರುತ್ತಿದೆ. ಇನ್ನು ಶಾಲಾ ಕಾಲೇಜು ಆರಂಭವಾದರೆ ಸಾಮಾಜಿಕ ಅಂತರವೂ ಕಷ್ಟವಾಗುತ್ತದೆ. ಹೆಚ್ಚು ಬಸ್ ಗಳನ್ನು ಬಿಡಬೇಕಾಗುತ್ತದೆ. ಆದರೆ ಸಾಮಾಜಿಕ ಅಂತರದ ನಿಯಮ ಅನುಸರಿಸಿ ಹೆಚ್ಚು ಬಸ್ ಬಿಟ್ಟಷ್ಟು ನಷ್ಟ ಹೆಚ್ಚು ಆಗುತ್ತದೆ. ಜೊತೆಗೆ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿ, ಲಾಕ್ ಡೌನ್ ಇನ್ನಷ್ಟು ಸಡಿಲಗೊಂಡಲ್ಲಿ ಬಸ್ ಬಳಸುವವರ ಸಂಖ್ಯೆ ಹೆಚ್ಚಾದರೆ ನಿರ್ವಹಿಸುವುದು ಕಷ್ಟ'' ಎಂದರು.
ದಾವಣಗೆರೆಯಲ್ಲಿ ಈವರೆಗೂ ದಾಖಲಾದ ಕೊರೊನಾ ವೈರಸ್ ಪ್ರಕರಣಗಳೆಷ್ಟು?
ಹೊರ ಗುತ್ತಿಗೆ ನೌಕರರನ್ನು ಬೇರೆ ಇಲಾಖೆಗೆ ನಿಯೋಜಿಸಬೇಕು
ಕೆಎಸ್ಆರ್ಟಿಸಿ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್, ದಾವಣಗೆರೆ ವಿಭಾಗದ ಕುರಿತು ಪ್ರಗತಿ ಮಾಹಿತಿ ನೀಡಿ, ""ಅಂತರ ರಾಜ್ಯ ಮತ್ತು ಬೆಂಗಳೂರಿಗೆ ತೆರಳುವ ಬಸ್ಸುಗಳಿಂದ ಲಾಭ ಇದೆ. ಈ ಕಾರ್ಯಾಚರಣೆ ಆರಂಭವಾದ ಮೇಲೆ ಸ್ವಲ್ಪ ಸುಧಾರಣೆ ಕಾಣಬಹುದು. ನಿಗಮದಲ್ಲಿ ಸಾಕಷ್ಟು ಜನರು ಹೊರ ಗುತ್ತಿಗೆ ಆಧಾರದಲ್ಲಿ ನೌಕರರು ಇದ್ದು, ಅಗತ್ಯವಿರುವ ಇಲಾಖೆಗಳಿಗೆ ಇವರನ್ನು ನಿಯೋಜಿಸುವ ಮೂಲಕ ಆಡಳಿತಾತ್ಮಕ ವೆಚ್ಚ ತಗ್ಗಿಸಬಹುದು ಎಂದರು.
ಹರಿಹರ ಬಸ್ ನಿಲ್ದಾಣ ಉನ್ನತೀಕರಿಸಬೇಕು
ಜಗಳೂರು ಮತ್ತು ಚನ್ನಗಿರಿಯಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚನ್ನಗಿರಿಯಲ್ಲಿ ಜಾಗ ಸಿಕ್ಕಿಲ್ಲದ ಕಾರಣ ಪ್ರಸ್ತಾವನೆ ಹಾಗೆಯೇ ಇದೆ ಎಂದು ಸ್ಮಾರ್ಟ್ ಸಿಟಿ ಅಧಿಕಾರಿ ತಿಳಿಸಿದರು.
ಸಂಸದ ಜಿ.ಎಂ. ಸಿದ್ದೇಶ್ವರ್ ಮಾತನಾಡಿ, ಚನ್ನಗಿರಿಯಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ನಿರ್ಮಿಸಲು ಜಾಗ ಹುಡುಕಬೇಕು. ಮಾಯಕೊಂಡದಲ್ಲಿ ಜಾಗ ಇದ್ದು, ಇಲ್ಲಿ ಒಂದು ಕೆಎಸ್ಆರ್ಟಿಸಿ ಡಿಪೋ ಆಗಬೇಕು. ಹಾಗೂ ಸಂತೇಬೆನ್ನೂರು ಮತ್ತು ತ್ಯಾವಣಗಿಯಲ್ಲಿ ನಿಲ್ದಾಣ ನಿರ್ಮಾಣ ಆಗಬೇಕಿದೆ. ಹಾಗೂ 14 ಕೋಟಿ ರೂ. ವೆಚ್ಚದಲ್ಲಿ ಹರಿಹರ ಬಸ್ ನಿಲ್ದಾಣ ಉನ್ನತೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನೇಕ ಹಳ್ಳಿಗಳಿಗೆ ಬಸ್ ಬಿಡಬೇಕೆಂಬ ಬೇಡಿಕೆ ಇದೆ. ಅಲ್ಲಿಗೆ ಬಸ್ ಗಳನ್ನು ಬಿಡಬೇಕು ಎಂದರು.
ಸ್ಮಾರ್ಟ್ ಸಿಟಿ ಯೋಜನೆಯ ಬಸ್ ನಿಲ್ದಾಣಗಳ ಕಾಮಗಾರಿ ಶೀಘ್ರ
ಇದಕ್ಕೆ ಸಚಿವರು ಪ್ರತಿಕ್ರಿಯಿಸಿ, ದಾವಣಗೆರೆ ವಿಭಾಗಕ್ಕೆ 63 ಹೊಸ ಬಸ್ ಗಳನ್ನು ನೀಡಲಾಗಿದೆ. ಇನ್ನು ಮುಂದೆ ಅವು ಕಾರ್ಯಾರಂಭ ಮಾಡಲಿವೆ. ಸ್ಮಾರ್ಟ್ ಸಿಟಿ ಯೋಜನೆಯಡಿಯ ಬಸ್ ನಿಲ್ದಾಣಗಳ ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ಕೈಗೊಳ್ಳಲು ಕ್ರಮ ಕೈಗೊಳ್ಳಬೇಕು ಎಂದರು. ಸಭೆಯಲ್ಲಿ ನಗರಾಭಿವೃದ್ದಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ, ಪಾಲಿಕೆ ಮೇಯರ್ ಬಿ.ಜಿ.ಅಜಯಕುಮಾರ್, ಎಸ್ಪಿ ಹನುಮಂತರಾಯ, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಶಿವಕುಮಾರಯ್ಯ, ಪರಿಸರ ಮತ್ತು ಸಿಬ್ಬಂದಿ ನಿರ್ದೇಶಕಿ ಕವಿತಾ ಎಸ್. ಮನ್ನಿಕೇರಿ ಮತ್ತಿತರರು ಇದ್ದರು.