ದಾವಣಗೆರೆ To ಧಾರವಾಡ: ರಸ್ತೆ ಅಪಘಾತ ತಡೆಯಲು ಹೊರಟ ಜಾಗೃತಿ ಜಾಥಾ
ದಾವಣಗೆರೆ, ಫೆಬ್ರವರಿ 6: ಇತ್ತೀಚಿಗೆ ಧಾರವಾಡದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮತ್ತು ಗಾಯಗೊಂಡ ಮಹಿಳೆಯರ ಕುಟುಂಬಗಳ ಸದಸ್ಯರು ದಾವಣಗೆರೆ ನಗರದಿಂದ ಅಪಘಾತ ಸ್ಥಳಕ್ಕೆ ವಾಹನಗಳ ಮೂಲಕ ಶನಿವಾರ ಜಾಥಾ ಹೊರಟರು.
ಬೆಳಿಗ್ಗೆ 7 ಗಂಟೆಗೆ ದಾವಣಗೆರೆಯ ಎಂಸಿಸಿ ಬಿ ಬ್ಲಾಕ್ನಲ್ಲಿರುವ ಭಾರತೀಯ ವೈದ್ಯಕೀಯ ಸಂಸ್ಥೆ ಆವರಣದಿಂದ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಹುಬ್ಬಳ್ಳಿ-ಧಾರವಾಡ ಬೈಪಾಸ್ ಬಳಿಯ ಇಟಿಗಟ್ಟಿವರೆಗೆ 20ಕ್ಕೂ ಹೆಚ್ಚು ವಾಹನಗಳಲ್ಲಿ ತೆರಳಿದರು. ಈ ಜಾಗದಲ್ಲಿ ನಡೆಯುವ ಅಪಘಾತ ತಡೆಯಬೇಕೆಂದು ಸರಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಒತ್ತಾಯಿಸಿದ್ದಾರೆ.
ದಾವಣಗೆರೆಯಿಂದ ಧಾರವಾಡದ ಇಟಿಗಟ್ಟಿವರೆಗೆ ರಸ್ತೆ ಅಪಘಾತ ತಡೆಯಲು ಜಾಗೃತಿ ಜಾಥಾ
ಧಾರವಾಡದ ಬಳಿಯ ಇಟಿಗಟ್ಟಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಜಿಲ್ಲೆಯಲ್ಲಿ 10 ಜನ ಮಹಿಳೆಯರ ಸಾವಾಗಿದೆ. ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮೃತ ಕುಟುಂಬಕ್ಕೆ ಸಾಂತ್ವನ ಹೇಳಲಿಲ್ಲ. ಇನ್ನು ಸಚಿವ ಜಗದೀಶ್ ಶೆಟ್ಟರ್ ಕ್ಷೇತ್ರದಲ್ಲಿ ಅಪಘಾತವಾದರೂ ಯಾರ ಮನೆಗೂ ಭೇಟಿ ನೀಡಿಲಿಲ್ಲ. ಈ ಸಚಿವರಿಗೆ ಸ್ವಲ್ಪವಾದರೂ ಮಾನವೀಯತೆ ಇರಬೇಕಿತ್ತೇಂದು ಮೃತರ ಕುಟುಂಬ ವರ್ಗ ಆಕ್ರೋಶ ವ್ಯಕ್ತಪಡಿಸಿದೆ.
ಅಶೋಕ್ ಖೇಣಿ, ಸರಕಾರದ ಸಚಿವರ ನಡುವೆ ಜಟಾಪಟಿ ಕಾರಣ ಇಟಿಗಟ್ಟಿ ಬಳಿ ಸುಮಾರು 198 ಜನ ಮೃತರಾಗಿದ್ದಾರೆ. ಈ ರಸ್ತೆ ಬಹಳ ಕಿರಿದಾಗಿದ್ದು, ಅಪಘಾತಗಳು ನಡೆಯುತ್ತಲೇ ಇವೆ. ಆದ್ದರಿಂದ ಇನ್ನುಳಿದವರ ಪ್ರಾಣ ಉಳಿಸಲು ಹುಬ್ಬಳ್ಳಿ-ಧಾರವಾಡ ರಾಷ್ಟ್ರೀಯ ಹೆದ್ದಾರಿಯನ್ನು ಆರು ಪಥದ ರಸ್ತೆಯನ್ನಾಗಿ ಅಭಿವದ್ಧಿ ಪಡಿಸಬೇಕೆಂದು ಒತ್ತಾಯಿಸಿ ಹೋರಾಟ ಮಾಡುವ ಬದಲು ಜಾಗೃತಿ ಮೂಡಿಸಲು ಮುಂದಾಗಿದ್ದೇವೆ.
ಧಾರವಾಡ ಅಪಘಾತದ ಸ್ಥಳಕ್ಕೆ ತೆರಳಿ ನಮ್ಮ ಮನೆತನದ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಿ, ಶಾಂತಿ ಸಭೆ ಮಾಡುತ್ತೇವೆ. ನಮಗಾದ ನೋವು ಇನ್ನೊಬ್ಬರಿಗೆ ಆಗಬಾರದೆಂಬುದಷ್ಟೇ ನಮ್ಮ ಗುರಿ ಎಂದು ತಿಳಿಸಿದ್ದಾರೆ.