ದಾವಣಗೆರೆಯಲ್ಲಿ ಜ.10ರಿಂದ ಶರಣ ಸಂಸ್ಕೃತಿ ಉತ್ಸವ
ದಾವಣಗೆರೆ, ಜನವರಿ 03: ಶ್ರೀ ಜಯದೇವ ಮುರುಘಾರಾಜೇಂದ್ರ ಸ್ವಾಮೀಜಿಯವರ 63ನೇ ಸ್ಮರಣೋತ್ಸವ ಪ್ರಯುಕ್ತ ನಗರದ ಶಿವಯೋಗಾಶ್ರಮದಲ್ಲಿ ಜನವರಿ 10 ರಿಂದ 12ರವರೆಗೆ ಶರಣ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರದುರ್ಗ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಮಾಹಿತಿ ನೀಡಿದ್ದಾರೆ.
ನಗರದ ಶಿವಯೋಗಾಶ್ರಮದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಶರಣ ಸಂಸ್ಕೃತಿ ಉತ್ಸವದಲ್ಲಿ ಈ ಬಾರಿ ವಿಧಾನಪರಿಷತ್ ಸದಸ್ಯ ಎಚ್.ಎಂ ರೇವಣ್ಣ ಅವರಿಗೆ ಜಯದೇವಶ್ರೀ ಪ್ರಶಸ್ತಿ, ಬೆಂಗಳೂರಿನ ಉದ್ಯಮಿ ಎಚ್.ಸಿ ಪ್ರಭಾಕರ್ ಗೆ ಶೂನ್ಯಪೀಠ ಅಲ್ಲಮ ಪ್ರಶಸ್ತಿ, ಹೊಳಲ್ಕೆರೆಯ ವೈದ್ಯ ಡಾ.ನಾಗರಾಜ್ ಬಿ ಸಜ್ಜನ್ ಅವರಿಗೆ ಶೂನ್ಯಪೀಠ ಚನ್ನಬಸವ ಪ್ರಶಸ್ತಿ ಹಾಗೂ ಬೀದರ್ ನ ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ತಾಯಿ ಅವರಿಗೆ ಶೂನ್ಯಪೀಠ ಅಕ್ಕನಾಗಮ್ಮ ಪ್ರಶಸ್ತಿ ಪ್ರದಾನ ಮಾಡಲಾಗುವುದು" ಎಂದು ತಿಳಿಸಿದರು.
ಡಿ.28ರಿಂದ ಮೂರು ದಿನಗಳ ಕಾಲ ಶರಣ ಸಂಸ್ಕೃತಿ ಉತ್ಸವ
ಜನವರಿ 10ರಂದು ಪರಿಸರವಾದಿ ಸಾಲುಮರದ ವೀರಾಚಾರಿ ಬಸವತತ್ವ ಧ್ವಜಾರೋಹಣ ಮಾಡಲಿದ್ದಾರೆ. ಸಂಜೆ ಸಾಧಕರ ಸಮಾವೇಶದಲ್ಲಿ ಜಯದೇವಶ್ರೀ ಮತ್ತು ಶೂನ್ಯಪೀಠ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಜ.11ಕ್ಕೆ ಉಚಿತ ನೇತ್ರ ಪರೀಕ್ಷೆ ಮತ್ತು ದಾವಣಗೆರೆಯಲ್ಲಿ ಪ್ರಥಮ ಬಾರಿಗೆ ಜಿಲ್ಲಾ ಯೋಗಾಸನ ಚಾಂಪಿಯನ್ ಶಿಪ್ ನಡೆಯಲಿದೆ. ದೇವದಾಸಿ ಮಹಿಳೆಯರ ಜಾಗೃತಿ ಕಾರ್ಯಕ್ರಮ ಕೂಡ ಜರುಗಲಿದೆ. ಉತ್ಸವದಲ್ಲಿ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದಾರೆ.