ಸಂತ್ರಸ್ತರ ಕಷ್ಟಕ್ಕೆ ಮಿಡಿದು ಹಗಲು ರಾತ್ರಿ ರೊಟ್ಟಿ ತಟ್ಟಿದ ಕಾಕನೂರು ಜನ
ದಾವಣಗೆರೆ, ಆಗಸ್ಟ್ 9: ಉತ್ತರ ಕರ್ನಾಟದಲ್ಲಿ ಪ್ರವಾಹಕ್ಕೆ ಜನ ನಲುಗುತ್ತಿದ್ದಾರೆ. ಅವರ ನೆರವಿಗೆ ಸರ್ಕಾರ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದೆ. ಜೊತೆಗೆ ಹಲವು ಕಡೆಗಳಿಂದ ನೆರವೂ ಒದಗಿಬರುತ್ತಿದೆ.
ದಾವಣಗೆರೆಯ ಜನತೆಯೂ ತಮ್ಮದೇ ರೀತಿ ಪ್ರವಾಹದಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚಲು ಮುಂದಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಾಕನೂರು ಗ್ರಾಮಸ್ಥರು ಪ್ರವಾಹ ಸಂತ್ರಸ್ತರಿಗಾಗಿ ಜೋಳದ ರೊಟ್ಟಿಗಳನ್ನು ತಯಾರಿಸುತ್ತಿದ್ದಾರೆ.
ಪ್ರವಾಹ ಸಂತ್ರಸ್ತರಿಗೆ ಮಾನವೀಯತೆ ತೋರಿದ ಕುಮಾರಸ್ವಾಮಿ
ಈ ಗ್ರಾಮದ ಮಹಿಳೆಯರು ಸೇರಿ ಸಂತ್ರಸ್ತರಿಗೆ ಜೋಳದ ರೊಟ್ಟಿಗಳನ್ನು ತಯಾರಿಸುತ್ತಿದ್ದಾರೆ. ಎರಡು ಕ್ವಿಂಟಲ್ ಜೋಳದಿಂದ 5 ಸಾವಿರಕ್ಕೂ ಹೆಚ್ಚು ರೊಟ್ಟಿಗಳನ್ನು ತಯಾರಿಸುತ್ತಿದ್ದಾರೆ. ರೊಟ್ಟಿ ಜೊತೆಗೆ ಶೇಂಗಾ ಪುಡಿ, ಕುರಸಾನೇ ಪುಡಿಯನ್ನೂ ಕಳುಹಿಸಿಕೊಡಲು ತಯಾರಿ ಮಾಡುತ್ತಿದ್ದಾರೆ.
ನೆರೆ ಪೀಡಿತ ರಾಯಚೂರು, ಬಾಗಲಕೋಟೆ ತಲುಪಿದ ಇನ್ಫಿ ನೆರವು
ಉತ್ತರ ಕರ್ನಾಟಕ ಮಂದಿಯ ಸ್ಥಿತಿಗತಿ ಕಂಡು ಮರುಗಿರುವ ಗ್ರಾಮಸ್ಥರು, ರಾತ್ರಿ ಹಗಲೆನ್ನದೇ ರೊಟ್ಟಿ ಮತ್ತಿತರ ಪದಾರ್ಥಗಳನ್ನು ತಯಾರಿಸುತ್ತಿದ್ದಾರೆ. ಇದಕ್ಕೆಂದೇ ಗ್ರಾಮದ ಮುಂಭಾಗ ಪಾತ್ರೆಗಳನ್ನು ಇಡಲಾಗಿದೆ. ಜನರು ತಮ್ಮ ಕೈಲಾದಷ್ಟು ಧಾನ್ಯ, ಮತ್ತಿತರ ಸಾಮಗ್ರಿಗಳನ್ನು ಅದರಲ್ಲಿ ಹಾಕುತ್ತಿದ್ದಾರೆ. ನಂತರ ಅವುಗಳನ್ನು ಆಹಾರ ಪದಾರ್ಥಗಳನ್ನಾಗಿ ತಯಾರಿಸಿ ಉತ್ತರ ಕರ್ನಾಟಕಕ್ಕೆ ಕಳುಹಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ನಾಳೆ ಗ್ರಾಮದ ಕೆಲ ಯುವಕರು ಹಾಗೂ ಮುಖಂಡರು ಆಟೋ ಮೂಲಕ ಬೆಳಗಾವಿಗೆ ಹೋಗಿ ಸಂತ್ರಸ್ತರಿಗೆ ಈ ರೊಟ್ಟಿಗಳನ್ನು ವಿತರಣೆ ಮಾಡಲಿದ್ದಾರೆ. ಕಷ್ಟದಲ್ಲಿದ್ದವರನ್ನು ನೋಡಿ ಮಿಡಿದ ಈ ಗ್ರಾಮಸ್ತರ ಕೆಲಸ ಎಲ್ಲರಿಗೂ ಮಾದರಿಯಾಗುವಂತಿದೆ.