ದಾವಣಗೆರೆಗೆ ಬಿಎಸ್ ವೈ ಚೊಂಬು; ಸಾಮಾಜಿಕ ಮಾಧ್ಯಮದಲ್ಲಿ ರಾಂಗು
ದಾವಣಗೆರೆ, ಆಗಸ್ಟ್ 21: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಸರಕಾರದ ಒಟ್ಟು ಸಂಪುಟ ಬಲದಲ್ಲಿ ಅರ್ಧದಷ್ಟು ನೇಮಕ ಆಗಿದೆ. ಈ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಯಡಿಯೂರಪ್ಪ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿಯ ಆರು ಶಾಸಕರಿದ್ದರೂ ಸಚಿವ ಸ್ಥಾನ ಒಬ್ಬರಿಗೂ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು ಯಡಿಯೂರಪ್ಪ ವಿರುದ್ಧ ಕಿಡಿ ಕಾರುತ್ತಿದ್ದಾರೆ. ದಾವಣಗೆರೆಯ 8 ಕ್ಷೇತ್ರದಲ್ಲಿ ಬಿಜೆಪಿ 6 ಸ್ಥಾನ, ಕಾಂಗ್ರೆಸ್ 2 ಸ್ಥಾನ ಪಡೆದಿದೆ. ಆದರೆ ಸಂಪುಟ ವಿಸ್ತರಣೆ ವೇಳೆ ಯಡಿಯೂರಪ್ಪನವರು ದಾವಣಗೆರೆ ಜಿಲ್ಲೆಗೆ ತಾಮ್ರದ ಚೊಂಬು ನೀಡಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.
ಸಂಪುಟ ವಿಸ್ತರಣೆ: ಯಾವ ಜಿಲ್ಲೆಗಳಿಗೆ ಸಚಿವ ಸ್ಥಾನ, ಯಾವುದಕ್ಕೆ ಇಲ್ಲ?
ರಾಜ್ಯ ಸಚಿವ ಸಂಪುಟ ರಚನೆಯಾದ ಹಿನ್ನೆಲೆಯಲ್ಲಿ ಸಾಕಷ್ಟು ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. ಅದರಂತೆ ದಾವಣಗೆರೆಯ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಅವರಿಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಕಾರ್ಯಕರ್ತರು ಕೂಡ ಅಸಮಾಧಾನ ಹೊರ ಹಾಕಿದ್ದು, ಈ ಬಾರಿ ನಮ್ಮ ನಾಯಕನಿಗೆ ಸಚಿವ ಸ್ಥಾನ ನೀಡದಿರುವುದು ನೋವಾಗಿದೆ ಎಂದು ಹೇಳಿದ್ದರು.
ಆದರೆ, ರೇಣುಕಾಚಾರ್ಯ ಅವರು ಸಚಿವ ಸ್ಥಾನಕ್ಕೆ ಆಸೆ ಪಟ್ಟವರಲ್ಲ. ಕೇವಲ ಕಾರ್ಯಕರ್ತರ ಆಸೆಯಾಗಿತ್ತು. "ಯಡಿಯೂರಪ್ಪನವರು ಮುಖ್ಯಮಂತ್ರಿಯಾದರೆ ಸಾಕು, ನಾನು ಸಚಿವನಾದಂತೆ" ಎಂದು ಹೇಳುತ್ತಿದ್ದರು. ಇದೀಗ ಅವರಿಗೂ ಸಚಿವ ಸ್ಥಾನ ಕೈ ತಪ್ಪಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.