ನೀರಾವರಿ ಸಭೆಗೆ ಅಪ್ಪನ ಜೊತೆ ಮಗನೂ ಹಾಜರ್; ಅಧಿಕಾರ ದುರುಪಯೋಗದ ಆರೋಪ
ದಾವಣಗೆರೆ, ಡಿಸೆಂಬರ್ 21: ದಾವಣಗೆರೆಯ ಚನ್ನಗಿರಿ ತಾಲೂಕಿನ ಬಹುವರ್ಷಗಳ ಯೋಜನೆಯಾದ ಸಾಸ್ವೆಹಳ್ಳಿ ನೀರಾವರಿ ಯೋಜನೆ ಬಗ್ಗೆ ಇಂದು ಅಧಿಕಾರಿಗಳ ಜೊತೆ ಶಾಸಕರು ಹಾಗೂ ಸಂಸದರ ಚರ್ಚೆಗೆ ಸಭೆ ಕರೆಯಲಾಗಿತ್ತು. ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಚೇರಿಯಲ್ಲಿ ಅಧಿಕಾರಿಗಳೊಂದಿಗಿನ ಸಭೆಗೆ ದಾವಣಗೆರೆಯ ಶಾಸಕರ ಜೊತೆ ಅವರ ಮಗನೂ ಬಂದಿದ್ದು ಚರ್ಚೆಗೆ ಎಡೆಮಾಡಿಕೊಟ್ಟಿದೆ.
ತಮ್ಮನ್ನು ಹೊಗಳಲಿಲ್ಲ ಎಂದು ನಿಂದಿಸಿದ ಶಾಸಕರ ಮಗ; ಆತ್ಮಹತ್ಯೆಗೆ ಯತ್ನಿಸಿದ ಶಿಕ್ಷಕ
ದಾವಣಗೆರೆಯ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರೊಂದಿಗೆ ಅವರ ಮಗ ಮಾಡಾಳ್ ಮಲ್ಲಿಕಾರ್ಜುನ್ ಕೂಡ ಸಭೆಯಲ್ಲಿ ಹಾಜರಿದ್ದರು. ಹೀಗಾಗಿ ಅಪ್ಪನ ಅಧಿಕಾರವನ್ನು ಮಗ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ.
ಶಾಸಕರು ನಡೆಸಬೇಕಿದ್ದ ಸಭೆಯನ್ನು ಶಾಸಕರ ಮಗ ನಡೆಸಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ, ಶಾಸಕ ಮಾಡಾಳ್ ವಿರೂಪಾಕ್ಷಪ್ಪರವರ ಉತ್ತರಾಧಿಕಾರಿಯಾಗಿ ಅವರ ಸುಪುತ್ರ ಮಾಡಾಳ್ ಮಲ್ಲಿಕಾರ್ಜುನರನ್ನು ನೇಮಿಸುವುದಕ್ಕೆ ಈಗಲೇ ತರಬೇತಿ ನೀಡುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಕೆಲ ದಿನಗಳ ಹಿಂದೆ ಶಿಕ್ಷಕರನ್ನು ನಿಂದಿಸಿ ವಿವಾದಕ್ಕೆ ಸಿಲುಕಿದ್ದ ಶಾಸಕರ ಪುತ್ರ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.