ಶಾಂತಿ ಕದಡುವ ಕೆಲಸ ಯಾರೂ ಮಾಡಬೇಡಿ: ದಾವಣಗೆರೆ ಮೇಯರ್
ದಾವಣಗೆರೆ, ಮೇ 17: ಲಾಕ್ ಡೌನ್ ಜಾರಿಯಲ್ಲಿರುವುದರಿಂದ ದಾವಣಗೆರೆಯಲ್ಲಿ ವ್ಯಾಪಾರ ವಹಿವಾಟುಗಳು ನಿಂತು 55 ದಿನಗಳಾಗಿದೆ. ಕೊರೊನಾ ವೈರಸ್ ನಿಯಂತ್ರಣ ಮಾಡುವುದಕ್ಕಾಗಿ ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಗಲಿರುಳು ಕಷ್ಟಪಡುತ್ತಿರುವ ಸಂದರ್ಭದಲ್ಲಿ ಜನರು ಸಹ ಸ್ಪಂದಿಸಬೇಕು ಎಂದು ಮೇಯರ್ ಬಿ.ಜೆ ಅಜಯ್ ಕುಮಾರ್ ಹೇಳಿದ್ದಾರೆ.
ದಾವಣಗೆರೆ ಮಹಾನಗರ ಪಾಲಿಕೆ ಆವರಣದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ""ಕೊರೊನಾ ವೈರಸ್ ಮುಕ್ತ ದಾವಣಗೆರೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಂತಹ ಸಂದರ್ಭದಲ್ಲಿ ಸುಮಾರು 4-5 ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಬಾಂಧವರು ಬಟ್ಟೆ ಖರೀದಿ ಮಾಡುವುದು ಬೇಡ ಎಂದು ಬಂದಿರುವ ವಿಷಯವು ಜನರಲ್ಲಿ ಗೊಂದಲ ಉಂಟು ಮಾಡಿದೆ'' ಎಂದರು.
ಜೂನ್ ಮೊದಲ ವಾರದಲ್ಲಿ ಭಾರೀ ಮಳೆ ಸಾಧ್ಯತೆ; ದಾವಣಗೆರೆಯಲ್ಲಿ ಈಗಲೇ ಸಿದ್ಧತೆ
1991-92 ರಲ್ಲಿ ದಾವಣಗೆರೆಯಲ್ಲಿ ಕೋಮು ಗಲಭೆಯುಂಟಾಗಿ ಕೆಲ ಸಮಯ ದಾವಣಗೆರೆ ಬಂದ್ ಆಗಿತ್ತು, ಅಲ್ಲಿಂದ ಇಲ್ಲಿಯವರೆಗೂ ಹಿಂದೂಗಳು, ಮುಸಲ್ಮಾನರು ಅಣ್ಣ-ತಮ್ಮಂದಿರಂತೆ ಜೀವನ ಸಾಗಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಶಾಂತಿ ಸೌಹಾರ್ದತೆಯನ್ನು ಕದಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಕೊರೊನಾ ವೈರಸ್ ನಿಂದಾಗಿ 55 ದಿನಗಳಿಂದ ಅತ್ಯಂತ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಎಲ್ಲರೂ ಸೇರಿ ಕೊರೊನಾ ಮುಕ್ತ ದಾವಣಗೆರೆ ಮಾಡಬೇಕಿದೆ. ಆದ್ದರಿಂದ ಈ ರೀತಿಯ ಅಪಪ್ರಚಾರ ಮಾಡಿ ಜಾತಿಗಳ ನಡುವೆ ಮತ್ತು ಧರ್ಮಗಳ ಮಧ್ಯೆ ತೊಡಕನ್ನು ತಂದಿಡುವಂತಹ ಕೆಲಸವನ್ನು ಯಾರೂ ಮಾಡಬಾರದು ಎಂದು ಮನವಿ ಮಾಡಿದರು.
ಭಾರತ ದೇಶ ಜಾತ್ಯತೀತ ದೇಶ. ಇಲ್ಲಿ ಎಲ್ಲರೂ ಅಣ್ಣ ತಮ್ಮಂದಿರಂತೆ ಜೀವನವನ್ನು ಸಾಗಿಸುತ್ತಿದ್ದು, ದೇಶದ ಜೊತೆಗೆ ನಾವು ಸಹ ಅಭಿವೃದ್ದಿ ಹೊಂದುತ್ತೇವೆ. ಮುಸ್ಲಿಂ ಜನಾಂಗದವರು ಒಂದು ಹೇಳಿಕೆ ಕೊಡುವುದು, ಹಿಂದುಗಳು, ಕ್ರೈಸ್ತರು ಒಂದೊಂದು ರೀತಿ ಹೇಳಿಕೆ ಕೊಡುವುದನ್ನು ಬಿಟ್ಟು, ದಾವಣಗೆರೆಯಲ್ಲಿ ಎಲ್ಲರೂ ಒಂದಾಗಿ ಜೀವನವನ್ನು ಸಾಗಿಸೋಣ ಎಂದು ಕರೆ ನೀಡಿದರು.
ಕ್ರೈಸ್ತರು ಗುಡ್ ಫ್ರೈಡೇ ಮನೆಯಲ್ಲಿಯೇ ಆಚರಣೆ ಮಾಡಿದ್ದಾರೆ, ಹಿಂದೂಗಳು ಯುಗಾದಿ ಹಬ್ಬವನ್ನು ಮನೆಯಲ್ಲಿಯೇ ಆಚರಣೆ ಮಾಡಿದ್ದಾರೆ. ಜೈನರು ಮಹಾವೀರ ಜಯಂತಿಯನ್ನು ಮನೆಯಲ್ಲಿಯೇ ಆಚರಣೆ ಮಾಡಿದ್ದಾರೆ.
ಎಲ್ಲರೂ ಸಹ ಕಾನೂನಿಗೆ ಗೌರವವನ್ನು ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಆದೇಶಿಸಿದ ಕಾನೂನನ್ನು ಹಿಂದೂಗಳು, ಮುಸಲ್ಮಾನರು, ಕ್ರೈಸ್ತರು, ಜೈನರು, ಸಿಕ್ಕರು ಎಲ್ಲಾ ಧರ್ಮೀಯರು ಪಾಲಿಸುತ್ತಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಕೆ.ಚಮನ್ ಸಾಬ್, ಮುಖಂಡ ಜೆ.ಅಮಾನುಲ್ಲಾ ಖಾನ್ ಮತ್ತಿತರರಿದ್ದರು.