ದಾವಣಗೆರೆ; ಮೇಯರ್ ಚುನಾವಣೆ ವಿವಾದ, ಸ್ಪಷ್ಟನೆ
ದಾವಣಗೆರೆ, ಫೆಬ್ರವರಿ 5; "ಮತದಾರರ ಪಟ್ಟಿಗೆ ಎಂಎಲ್ಸಿಗಳ ಹೆಸರು ಸೇರ್ಪಡೆ ಹಿಂದೆ ಸಂಸದ ಜಿ. ಎಂ. ಸಿದ್ದೇಶ್ವರ ಅವರ ಕೈವಾಡವಿದೆ ಎಂದು ಬಿಂಬಿಸಲಾಗುತ್ತಿದೆ. ಸುಮ್ಮನೇ ತೇಜೋವಧೆ ಮಾಡಬಾರದು" ಎಂದು ದಾವಣಗೆರೆ ಮೇಯರ್ ಬಿ. ಜಿ. ಅಜಯ್ಕುಮಾರ್ ಸ್ಪಷ್ಟಪಡಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಮೇಯರ್, "ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವುದು ಚುನಾವಣಾ ಆಯೋಗವೇ ಹೊರತು ಮತ್ತೊಬ್ಬರಲ್ಲ. ನಗರ ಪಾಲಿಕೆ ಆಯುಕ್ತರ ಪಾತ್ರವೂ ಇದರಲ್ಲಿ ಇಲ್ಲ" ಎಂದು ಕಾಂಗ್ರೆಸ್ ಆರೋಪಗಳಿಗೆ ಉತ್ತರ ಕೊಟ್ಟರು.
ದಾವಣಗೆರೆ ಮೇಯರ್ ಚುನಾವಣೆ; ಯಾರಿಗೆ ಗದ್ದುಗೆ?
"ಚುನಾವಣಾ ಆಯೋಗ ಕಾನೂನು ರೀತಿ ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ ಹಾಗೂ ಆರ್. ಶಂಕರ್ ಅವರ ಹೆಸರನ್ನು ಸೇರ್ಪಡೆಗೊಳಿಸಿದೆ. ಇದರಲ್ಲಿ ಬಿಜೆಪಿಯ ಪಾಲಿಕೆ ಸದಸ್ಯರ ಅಥವಾ ಮುಖಂಡರ ಪಾತ್ರವಿಲ್ಲ. ಮೇಯರ್ ಚುನಾವಣೆ ಸಂಬಂಧ ಈ ಇಬ್ಬರ ಹೆಸರನ್ನು ಅನಧಿಕೃತವಾಗಿ ಸೇರಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ನವರು ಪ್ರತಿಭಟನೆ ನಡೆಸುತ್ತಿದ್ದಾರೆ" ಎಂದರು.
ಬತ್ತಿದ ಕುಂದುವಾಡ ಕೆರೆ; ದಾವಣಗೆರೆ ನಗರಕ್ಕೆ ಜಲಕ್ಷಾಮ?
"ಇದು ಮಹಾನಗರ ಪಾಲಿಕೆ, ಸ್ಥಾಯಿ ಸಮಿತಿ, ಸದಸ್ಯರಿಗೆ ಸಂಬಂಧಪಟ್ಟ ವಿಷಯವಲ್ಲ. ಕಾನೂನಿನ ಚೌಕಟ್ಟಿನಲ್ಲಿ ಯಾರೂ ಎಲ್ಲಿ ಬೇಕಾದರೂ ವಾಸ ಮಾಡಲು ಅವರಿಗೆ ಹಕ್ಕಿದೆ ಎಂಬುದನ್ನು ಅವರು ಪ್ರತಿಭಟಿಸುವ ಮುನ್ನ ಯೋಚಿಸಬೇಕಿತ್ತು. ಒಳ್ಳೆಯದಕ್ಕೂ, ಕೆಟ್ಟದಕ್ಕೂ ವಿರೋಧ ಮಾಡುವುದು ಹಿಂದಿನಿಂದಲೂ ಕಾಂಗ್ರೆಸ್ ಸಂಸ್ಕೃತಿ" ಎಂದು ಟೀಕಿಸಿದರು.
ದಾವಣಗೆರೆ; ಸಚಿವರ ಸಿಟಿ ರೌಂಡ್ಸ್, ಅಧಿಕಾರಿಗಳ ವಿರುದ್ಧ ಗರಂ
"ಕಾಂಗ್ರೆಸ್ನ ಎಂಎಲ್ಸಿಗಳಾದ ರಘು ಆಚಾರ್, ಎಚ್. ಎಂ. ರೇವಣ್ಣ, ಕೆ. ಸಿ. ಕೊಂಡಯ್ಯ ಹಾಗೂ ಕೊಂಡಜ್ಜಿ ಮೋಹನ್ ಅವರ ಹೆಸರನ್ನು ಸೇರಿಸಿದ್ದು, ಅವರೆಲ್ಲ ಇಲ್ಲಿ ವಾಸವಾಗಿದ್ದಾರಾ?. ಯಾವುದೇ ಮನೆ ವಿಳಾಸ ಕೊಟ್ಟು ಸೇರಿಸಿದ್ದಾರೆ. ಅವರೇ ತಪ್ಪು ಮಾಡಿ ನಮ್ಮ ಮೇಲೆ ಹೊರಿಸುತ್ತಿದ್ದಾರೆ. ದಾವಣಗೆರೆಯಲ್ಲಿಯೇ ಮನೆ ಮಾಡಿ ಜನರ ಋಣ ತೀರಿಸುತ್ತೇನೆ ಎಂದು ಚಿದಾನಂದಗೌಡರು ಚುನಾವಣೆಗೂ ಮುಂಚೆ ಹಾಗೂ ಗೆದ್ದ ನಂತರವೂ ಹೇಳಿಕೆ ಕೊಟ್ಟಿದ್ದರು. ಆರ್. ಶಂಕರ್ ಪುತ್ರ ಕೂಡ ಇಲ್ಲೇ ವ್ಯಾಸಂಗ ಮಾಡುತ್ತಿದ್ದ ಕಾರಣ ಅವರು ಇಲ್ಲಿಯೇ ಮನೆ ಮಾಡಿದ್ದಾರೆ" ಎಂದು ಮೇಯರ್ ಹೇಳಿದರು.
"ಚುನಾವಣಾ ಆಯೋಗದಲ್ಲಿ ಪ್ರತಿದಿನ ಹೊಸ ಅಪ್ಲಿಕೇಷನ್ ಅಪ್ಡೇಟ್ ಆಗುತ್ತವೆ. ಇವತ್ತಿನ ದಿನಾಂಕಕ್ಕೆ ಅಧಿಕೃತ ದಾಖಲೆ ಇರಬೇಕು. ಆದರೆ, ಕಾಂಗ್ರೆಸ್ನವರು ಜನವರಿ 18ರಂದು ಇದ್ದ ಕರಡು ಪ್ರತಿಯನ್ನು ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಚುನಾವಣೆಯ ಮತದಾರರ ಪಟ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯರ ಹೆಸರುಗಳನ್ನು ಸೇರ್ಪಡೆಗೊಳಿಸುವ ಅವಕಾಶ ಕಾನೂನಿನಲ್ಲಿದೆ ಎಂಬುದನ್ನು 2015ರ ಬಿಬಿಎಂಪಿ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತೋರಿಸಿದ್ದಾರೆ" ಎಂದರು.
Recommended Video
ದಾವಣಗೆರೆ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಸಲು ದಿನಾಂಕ ನಿಗದಿಯಾಗಿದೆ. ಫೆಬ್ರವರಿ 24 ಚುನಾವಣೆ ನಡೆಯಲಿದ್ದು, ಬಿಜೆಪಿ ಚುನಾವಣೆ ಗೆಲ್ಲವು ವಾಮ ಮಾರ್ಗದಲ್ಲಿ ಎಂಎಲ್ಸಿಗಳ ಹೆಸರನ್ನು ಮತದಾರರಪಟ್ಟಿಗೆ ಸೇರಿಸಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.