ದಾವಣಗೆರೆಯಲ್ಲಿ ಜೆಸಿಬಿ ಬಳಸಿ ಕೊರೊನಾ ಸೋಂಕಿತೆಯ ಅಂತ್ಯಸಂಸ್ಕಾರ
ದಾವಣಗೆರೆ, ಜುಲೈ 1: ನಿನ್ನೆಯಷ್ಟೇ ಬಳ್ಳಾರಿಯಲ್ಲಿ, ಕೊರೊನಾ ವೈರಸ್ ನಿಂದ ಮೃತಪಟ್ಟವರ ಶವಸಂಸ್ಕಾರ ನಡೆಸಿದ ರೀತಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಮೃತದೇಹಗಳನ್ನು ಒಂದಾದ ಮೇಲೊಂದರಂತೆ ಗುಂಡಿಗೆ ಎಸೆಯುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದೀಗ ಅಂಥದ್ದೇ ಒಂದು ಸಂಗತಿ ದಾವಣಗೆರೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಜೆಸಿಬಿ ಬಳಸಿ ಕೊರೊನಾ ಸೋಂಕಿತೆಯ ಅಂತ್ಯಸಂಸ್ಕಾರ ನಡೆಸಿರುವುದು ತಿಳಿದುಬಂದಿದೆ. ಕೊರೊನಾ ಸೋಂಕಿತರ ಅಂತ್ಯಸಂಸ್ಕಾರಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಅನುಸರಿಸಿರುವ ಕ್ರಮವನ್ನು ನೋಡಿದರೆ ಜನರ ಆತಂಕ ಇನ್ನಷ್ಟು ಹೆಚ್ಚಾಗುತ್ತದೆ.
ಕೊರೊನಾ ರೋಗಿಗಳ ಶವಸಂಸ್ಕಾರ ವಿಡಿಯೋ; ತನಿಖೆಗೆ ಬಳ್ಳಾರಿ ಡಿಸಿ ಆದೇಶ
ಜೂನ್ 17ಕ್ಕೆ ಮೃತಪಟ್ಟಿದ್ದ ವೃದ್ಧೆ
ದಾವಣಗೆರೆಯ ಚನ್ನಗಿರಿ ತಾಲ್ಲೂಕಿನ 56 ವರ್ಷದ ವೃದ್ಧೆಯೊಬ್ಬರು ಜೂನ್ 17ರಂದು ಉಸಿರಾಟದ ತೊಂದರೆಯಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಅವರಿಗೆ ಸೋಂಕು ಇರುವುದು ಕೂಡ ಅಂದೇ ದೃಢಪಟ್ಟಿತ್ತು. ಹೀಗಾಗಿ ಚನ್ನಗಿರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ಅವರ ಅಂತ್ಯ ಸಂಸ್ಕಾರವನ್ನು ಮಾಡಲಾಗಿತ್ತು. ಆದರೆ ಅಂತ್ಯ ಸಂಸ್ಕಾರ ನಡೆಸಿದ ರೀತಿ ಈಗ ಬೆಳಕಿಗೆ ಬಂದಿದೆ.
ಜೆಸಿಬಿ ಬಳಸಿ ಅಂತ್ಯಸಂಸ್ಕಾರ
ಜೆಸಿಬಿ ಮೂಲಕ ಮೃತ ದೇಹವನ್ನು ಎತ್ತಿಕೊಂಡು ಹೋಗಿ ಗುಂಡಿಯಲ್ಲಿ ಹಾಕಿ ಮಣ್ಣು ಮುಚ್ಚಲಾಗಿದೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ವೃದ್ಧೆಯ ಮೃತದೇಹವನ್ನು ದಫನ್ ಮಾಡುವಾಗ ಸಿಪಿಐ ಆರ್ ಆರ್ ಪಾಟೀಲ್ ಹಾಗೂ ತಹಶಿಲ್ದಾರ್ ಪುಟ್ಟರಾಜು ಗೌಡ ಸೇರಿದಂತೆ ಹಲವು ತಾಲ್ಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು ಇದ್ದರು.
ಜಿಲ್ಲಾಧಿಕಾರಿ ಸ್ಪಷ್ಟನೆ
ಈ ಘಟನೆ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಇದುವರೆಗೂ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆಯನ್ನು ಸರ್ಕಾರದ ಆದೇಶದಂತೆ, ಕೋವಿಡ್ ನಿಯಮಾವಳಿಗಳ ಪ್ರಕಾರ ಮಾಡಲಾಗಿದೆ. ಇನ್ನು ಏನಾದರೂ ದೋಷ ಕಂಡುಬಂದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಈ ವೃದ್ಧೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ತಹಶೀಲ್ದಾರ್, ತಾಲ್ಲೂಕು ಆರೋಗ್ಯಧಿಕಾರಿ ಸೇರಿದಂತೆ ನಾಲ್ಕು ಜನರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಶವಗಳನ್ನು ಗುಂಡಿಗೆ ಎಸೆದಿದ್ದರು
ನಿನ್ನೆಯಷ್ಟೇ ಬಳ್ಳಾರಿಯಲ್ಲಿ ಕೊರೊನಾ ಸೋಂಕಿತರ ಮೃತದೇಹಗಳನ್ನು ಅಮಾನವೀಯವಾಗಿ ಸಂಸ್ಕಾರ ನಡೆಸಿದ್ದು ಭಾರೀ ಸದ್ದು ಮಾಡಿತ್ತು. ಕೊರೊನಾ ವೈರಸ್ ನಿಂದ ಸಾವಿಗೀಡಾದವರ ಶವಗಳನ್ನು ಒಂದೇ ಗುಂಡಿಗೆ ತಂದು ಎಸೆದಿದ್ದು, ಮೃತದೇಹಕ್ಕೆ ಕನಿಷ್ಠ ಗೌರವವೂ ಸಿಗದಂತೆ ಅಂತ್ಯಸಂಸ್ಕಾರ ನಡೆಸಿದ್ದಕ್ಕೆ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಗೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾಧಿಕಾರಿಗಳು ಕ್ಷಮೆ ಯಾಚಿಸಿದ್ದರು.