ಖಾಲಿ ಕೊಡದ ಸ್ವಾಗತಕ್ಕೆ ಜಲಧಾರೆಯ ಭರವಸೆ ಇತ್ತ ಸಚಿವರು
ದಾವಣಗರೆ, ಜೂನ್ 23: ದಾವಣಗೆರೆ ಜಿಲ್ಲೆ ಪ್ರವಾಸದಲ್ಲಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ಬರ ಅಧ್ಯಯನ ಹಾಗೂ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ ಕಾಮಗಾರಿ ಪ್ರಗತಿ ಪರಿಶೀಲಿಸಿದರು.
ಪ್ರವಾಸ ತೆರಳಿದ ಗ್ರಾಮಗಳೆಲ್ಲ ಖಾಲಿ ಕೊಡ ಪ್ರದರ್ಶನದ ಸ್ವಾಗತ ಸಿಕ್ಕಿದೆ. ಸಮಪರ್ಕ ನೀರು ಸರಬರಾಜು ಇಲ್ಲದೆ, ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ.
ತುಂಗಾ ಭದ್ರಾ ನೀರಿಗೆ ಕೈ ಹಾಕಿದ್ರೆ ರಕ್ತಪಾತವಾದೀತು ಎಚ್ಚರ!
ಜಲಧಾರೆ ಯೋಜನೆಯಡಿಯಲ್ಲ ಇಡೀ ಜಿಲ್ಲೆಗೆ ಪೈಪ್ ಲೈನ್ ಮೂಲಕ ಕುಡಿಯುವನೀರು ಸರಬರಾಜು ಮಾಡುವ ಯೋಜನೆಯನ್ನು ಮುಂದಿನ ವರ್ಷ ಕೈಗೆತ್ತಿಕೊಳ್ಳಲಾಗುವುದು ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಸಚಿವ ಕೃಷ್ಣಭೈರೇಗೌಡ ಅವರು ಭರವಸೆ ನೀಡಿದರು.
ಬಹುಗ್ರಾಮ ನೀರಿನ ಯೋಜನೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲಾಗುವುದು, ಈ ಯೋಜನೆಯ ವ್ಯಾಪ್ತಿ ಸದ್ಯ ಜಿಲ್ಲೆಯ ಶೇ 35ರಷ್ಟು ಭಾಗವನ್ನು ಆವರಿಸಲಿದೆ. ಇದನ್ನು ಶೇ 65ಕ್ಕೆ ಹೆಚ್ಚಿಸಲಾಗುವುದು. ಮುಂದಿನ ವರ್ಷದೊಳಗೆ ರಾಜ್ಯ ಸರ್ಕಾರದ ಜಲಧಾರೆ ಯೋಜನೆ ಅನುಷ್ಠಾನಗೊಳ್ಳಲಿದೆ.
ರಾಜ್ಯದ 4 ಜಿಲ್ಲೆಗಳಲ್ಲಿ ಯೋಜನೆ ಜಾರಿಯಲ್ಲಿದೆ. ಮುಂದಿನ ವರ್ಷ ದಾವಣಗೆರೆ ಸೇರಿದಂತೆ 8 ಜಿಲ್ಲೆಗಳಲ್ಲಿ ಯೋಜನೆ ಕಾರ್ಯರೂಪ ಪಡೆಯಲಿದೆ ಎಂದರು.
ನಗರ ಪ್ರದೇಶಗಳಲ್ಲಿ ಅಗತ್ಯವಿರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಿ, ಓವರ್ ಹೆಡ್ ಟ್ಯಾಂಕ್ ಗಳನ್ನು ಪರಿಶೀಲಿಸಿ, ಬಿಲ್ ಪೆಂಡಿಂಗ್ ಇದೆ ಎಂದು ವಿಳಂಬ ಮಾಡಬೇಡಿ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.