ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ಮಂಗಳಮುಖಿಯರ ದಾಂಧಲೆ
ದಾವಣಗೆರೆ, ಡಿಸೆಂಬರ್ 27: ದಾವಣಗೆರೆ ನಗರದಲ್ಲಿ ಮಧ್ಯರಾತ್ರಿ ಪಾನಮತ್ತರಾಗಿ ತಿರುಗಾಡುತ್ತಿದ್ದ ಮೂವರು ಮಂಗಳಮುಖಿಯರನ್ನು ಪೊಲೀಸರು ಬಂಧಿಸಿ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕರೆದೊಯ್ದರೆ ಮಂಗಳಮುಖಿಯರು ಅರೆ ನಗ್ನ ಸ್ಥಿತಿಯಲ್ಲಿ ಡಾಕ್ಟರ್ ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ದಾವಣಗೆರೆ ನಗರ ಠಾಣಾ ವ್ಯಾಪ್ತಿಯಲ್ಲಿ ನಗರದ ಬೀದಿಯಲ್ಲಿ ಪಾನಮತ್ತರಾಗಿ ಅರೆ ನಗ್ನ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಕೋಮಲ ಸೇರಿದಂತೆ ಮೂವರು ಮಂಗಳಮುಖಿಯರನ್ನು ಪೊಲೀಸರು ಬಂಧಿಸಿದ್ದಾರೆ. ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲು ಮುಂದಾಗಿದ್ದಾರೆ. ಆದರೆ ಆ ಮಂಗಳಮುಖಿಯರಲ್ಲಿ ಒಬ್ಬರು ಅರೆ ನಗ್ನ ಸ್ಥಿತಿಯಲ್ಲಿ ಜಿಲ್ಲಾಸ್ಪತ್ರೆಯ ಓಡಾಟ ನಡೆಸಿ ದಾಂಧಲೆ ಮಾಡಿದರೆ, ಮತ್ತೊಬ್ಬ ಮಂಗಳಮುಖಿ ರಾತ್ರಿ ಪಾಳಿಯ ವೈದ್ಯ ಶಶಿಧರ್ ಮತ್ತು ಸ್ಥಳದಲ್ಲಿದ್ದ ಪೊಲೀಸ್ ಪೇದೆ ನಾಗರಾಜ್ ಮೇಲೆ ಹಲ್ಲೆ ನಡೆಸಿ ಆಸ್ಪತ್ರೆಯಲ್ಲಿದ್ದವರಿಗೆ ಕಿರಿಕಿರಿಯನ್ನುಂಟು ಮಾಡಿದ್ದಾರೆ.[ಮಂಗಳಮುಖಿಯನ್ನು ಪ್ರೀತಿಸಿ ರೈಲಿಗೆ ತಲೆಕೊಟ್ಟ ಯುವಕ]
ಮಧ್ಯರಾತ್ರಿಯಲ್ಲಿ ಅರೆ ನಗ್ನ ಸ್ಥಿತಿಯಲ್ಲಿ ಮಂಗಳಮುಖಿ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ ಪರಿಣಾಮ ಪೀಠೋಪಕರಣಗಳು ಧ್ವಂಸಗೊಂಡಿವೆ. ಮತ್ತೊಬ್ಬ ಮಂಗಳಮುಖಿ ಪೇದೆಯ ಲಾಠಿಯನ್ನು ಕಿತ್ತುಕೊಂಡು ವೈದ್ಯರು ಮತ್ತು ಪೇದೆ, ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದ, ವೈದ್ಯರ ತಲೆಗೆ ಪೆಟ್ಟಾಗಿದೆ. ಪೇದೆಗೆ ಗಾಯಗಳಾಗಿದೆ.
ಇನ್ನು ಆ ಮಂಗಳ ಮುಖಿಯರು ಆಸ್ಪತ್ರೆ ಮತ್ತು ವಾಹನ ನಿಲುಗಡೆಯ ಸ್ಥಳದಲ್ಲಿ ಓಡಾಟ ನಡೆಸಿ ಸ್ಥಳದಲ್ಲಿದ್ದ ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.