ದಾವಣಗೆರೆಯಲ್ಲಿ ಮುನ್ನೆಚ್ಚರಿಕೆಯಾಗಿ ಲಾಡ್ಜ್ ಮಾಲೀಕರೊಂದಿಗೆ ಜಿಲ್ಲಾಧಿಕಾರಿ ಸಭೆ
ದಾವಣಗೆರೆ, ಮಾರ್ಚ್ 31: ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೇನ್ ನಲ್ಲಿರುವವರಿಗಾಗಿ ಅವಶ್ಯಕತೆಯಿದ್ದರೆ ಬಳಸಿಕೊಳ್ಳಲು ಬೆಂಗಳೂರಲ್ಲಿ 20 ಸಾವಿರ ಲಾಡ್ಜ್ ರೂಮ್ ತಯಾರು ಮಾಡಿಕೊಳ್ಳಲಾಗಿದೆ. ಅದರಂತೆ ನಮ್ಮ ಜಿಲ್ಲೆಯಲ್ಲಿ ಅಂತಹ ಸಂದರ್ಭ ಎದುರಾದರೆ ಜಿಲ್ಲೆಯ ಲಾಡ್ಜ್ ಗಳಲ್ಲಿನ ರೂಮ್ ಬಳಸಿಕೊಳ್ಳಲು ತಯಾರಿ ಮಾಡಿಕೊಳ್ಳಬೇಕೆಂಬ ಆದೇಶವಿದೆ" ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ಇಂದು ಜಿಲ್ಲಾಡಳಿತ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ನಗರದ ಲಾಡ್ಜ್ ಮಾಲೀಕರಿಗೆ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ ಶ್ರೀರಾಮುಲು
ಜಿಲ್ಲೆಯಲ್ಲಿ 3 ಕೊರೊನಾ ಪಾಸಿಟಿವ್ ಬಂದಿದೆ. ಮುಂದಿನ ದಿನಗಳಲ್ಲಿ ವೈರಸ್ ಪ್ರಕರಣಗಳು ಹೆಚ್ಚಾದರೆ ನಗರದಲ್ಲಿನ ಲಾಡ್ಜ್ ಗಳನ್ನು ಬಳಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಬಹುದು. ಈ ಹಿನ್ನೆಲೆಯಲ್ಲಿ ಮಾನಸಿಕವಾಗಿ ಸನ್ನದ್ಧರಾಗಬೇಕು ಎಂದು ಲಾಡ್ಜ್ ಮಾಲೀಕರಿಗೆ ಸೂಚಿಸಿದರು. ಈ ಬಗ್ಗೆ ಮಾಲೀಕರಿಗೆ ಯಾವುದೇ ಭಯ ಬೇಡ. ಹೋಂ ಕ್ವಾರಂಟೈನ್ ಲ್ಲಿರುವವರು ರೋಗಿಗಳಲ್ಲ. ನಿಗಾವಣೆಯಲ್ಲಿರುವರಷ್ಟೇ. ಇವರಲ್ಲಿ ಯಾರಿಗಾದರೂ ನೆಗಡಿ, ಕೆಮ್ಮು, ಶೀತ ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ಸೇರಿಸಲಾಗುವುದು ಎಂದು ತಿಳಿಸಿದರು.
ಲಾಡ್ಜ್ಗಳಲ್ಲಿ ಮೂಲ ವ್ಯವಸ್ಥೆ ಕಲ್ಪಿಸಿಕೊಡಲು ಮಾಲೀಕರು ಸಿದ್ಧರಿರಬೇಕು. ಸರ್ಕಾರದಿಂದ ಹಣ ಒದಗಿಸಲಾಗುವುದು. ಈಗಾಗಲೇ ಜಿಲ್ಲೆಯಲ್ಲಿ 11 ಕಲ್ಯಾಣ ಮಂಟಪಗಳನ್ನು ಜಿಲ್ಲಾಡಳಿತದ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ವಿವಿಧ ತಾಲ್ಲೂಕು ವಲಯದಲ್ಲಿಯೂ ಕಲ್ಯಾಣ ಮಂಟಪವನ್ನು ಸುಪರ್ದಿಗೆ ತೆಗೆದುಕೊಳ್ಳಲು ತಹಶೀಲ್ದಾರ್ ಗೆ ತಿಳಿಸಲಾಗಿದೆ ಎಂದರು.