ಪ್ರೇಮಿಗಳ ದಿನದಂದು ಸಪ್ತಪದಿ ತುಳಿಯಲಿದ್ದಾರೆ ದಾವಣಗೆರೆ ಡಿಸಿ, ಜಿಲ್ಲಾ ಪಂಚಾಯಿತಿ ಸಿಇಓ
ದಾವಣಗರೆ, ಫೆಬ್ರವರಿ 03 : ಇವರಿಬ್ಬರು ಐಎಎಸ್ ಅಧಿಕಾರಿಗಳು. ಒಂದೇ ಜಿಲ್ಲೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಜನಪರ ಅಧಿಕಾರಿಗಳು ಎಂದು ಹೆಸರು ಪಡೆದಿದ್ದಾರೆ. ಈ ಇಬ್ಬರೂ ಈಗ ಹಸೆಮಣೆ ಏರುತ್ತಿದ್ದಾರೆ.
ಹೌದು ದಾವಣಗೆರೆ ಜಿಲ್ಲಾಧಿಕಾರಿ ಗೌತಮ್ ಬಗಾದಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅಶ್ವತಿ ಅವರು ವಿವಾಹವಾಗಲಿದ್ದಾರೆ. ಫೆಬ್ರವರಿ 14ರಂದು ಈ ಜೋಡಿ ಕೇರಳದ ಕೊಜಿಕೋಡಿನ ಟ್ಯಾಗೋರ್ ಹಾಲ್ನಲ್ಲಿ ಮದುವೆ ಆಗಲಿದ್ದು, ಫೆ.17ರಂದು ವಿಶಾಖಪಟ್ಟಣದಲ್ಲಿ ಆರತಕ್ಷತೆ ನಡೆಯಲಿದೆ.
6 ತಿಂಗಳಲ್ಲಿ 13 ಲಕ್ಷ ಟನ್ ಕಸ ಸ್ವಚ್ಛಗೊಳಿಸಿದ ಐಎಎಸ್ ಅಧಿಕಾರಿ
ಗೌತಮ್ ಬಗಾದಿ ಅವರು ಆಂಧ್ರಪ್ರದೇಶದವರು. ಎಸ್.ಅಶ್ವತಿ ಅವರು ಕೇರಳದವರು. ಇಬ್ಬರು ಬೇರೆ-ಬೇರೆ ರಾಜ್ಯದವರು. ಆದರೆ, ಇವರಿಬ್ಬರ ನಡುವೆ ನಂಟು ಬೆಸೆದಿದ್ದು ಮಾತ್ರ ಕರ್ನಾಟಕದ ದಾವಣಗೆರೆ ಜಿಲ್ಲೆ. ರಾಜ್ಯಗಳ ಗಡಿ ದಾಟಿದ ಪ್ರೀತಿಗೆ ಈಗ ಮದುವೆಯ ಮುದ್ರೆ ಬೀಳುತ್ತಿದೆ.
ಸರ್ಕಾರಿ ಶಾಲೆಯೇ ಸಾಕು: ಮಾದರಿಯಾದರು ಈ ಮಹಿಳಾ ಜಿಲ್ಲಾಧಿಕಾರಿ
ದಾವಣಗೆರೆ ಜಿಲ್ಲೆಗೆ ಮೊದಲು ಆಗಮಿಸಿದ್ದು ಅಶ್ವತಿ ಅವರು. ಬಳಿಕ ಗೌತಮ್ ಬಗಾದಿ ಅವರು ಜಿಲ್ಲೆಗೆ ಆಗಮಿಸಿದರು. ಪ್ರತಿ ಸೋಮವಾರ ಜನಸ್ಪಂದನ ಕಾರ್ಯಕ್ರಮ ನಡೆಸಿ ಜನರ ಸಮಸ್ಯೆಳನ್ನು ಅಧಿಕಾರಿಗಳು ಬಗೆಹರಿಸುತ್ತಿದ್ದಾರೆ.
ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಬಿಜೆಪಿಗೆ, ಖರ್ಗೆ ವಿರುದ್ಧ ಸ್ಪರ್ಧೆ?
ಡಿಸಿ, ಜಿಲ್ಲಾ ಪಂಚಾಯಿತಿ ಸಿಇಓ
2018ರ, ಸೆಪ್ಟೆಂಬರ್ 7ರಿಂದ ದಾವಣಗೆರೆ ಜಿಲ್ಲಾಧಿಕಾರಿಯಾಗಿ ಗೌತಮ್ ಬಗಾದಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇರಳ ಮೂಲದ ಅಶ್ವತಿ ಅವರು 2016ರ ನವೆಂಬರ್ 24ರಿಂದ ದಾವಣಗೆರೆ ಜಿಲ್ಲಾ ಪಂಚಾಯಿತಿ ಸಿಇಓ ಆಗಿ ಕೆಲಸ ಮಾಡುತ್ತಿದ್ದಾರೆ.
2009 ಬ್ಯಾಚ್ ಅಧಿಕಾರಿ
ಆಂಧ್ರಪ್ರದೇಶ ಮೂಲದ ಗೌತಮ್ ಬಗಾದಿ ಅವರು 2009 ಬ್ಯಾಚ್ ಐಎಎಸ್ ಅಧಿಕಾರಿ. ರಂಗರಾಯ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡಿದ್ದಾರೆ. ಕಾರವಾರದಲ್ಲಿ ಉಪ ವಿಭಾಗಾಧಿಕಾರಿಯಾಗಿ, ಬೆಂಗಳೂರಿನ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಉಪ ಕಾರ್ಯದರ್ಶಿಯಾಗಿ, ಬೆಳಗಾವಿ ಜಿಲ್ಲಾ ಪಂಚಾಯಿತಿ ಸಿಇಓ ಆಗಿ, ರಾಜಕೀಯ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
2013ರ ಬ್ಯಾಚ್ ಐಎಎಸ್ ಅಧಿಕಾರಿ
ಕೇರಳ ಮೂಲದ ಎಸ್.ಅಶ್ವತಿ ಅವರು 2013ನೇ ಬ್ಯಾಚ್ ಐಎಎಸ್ ಅಧಿಕಾರಿ. ಕುಂದಾಪುರದ ಎಸಿಯಾಗಿ ಕೆಲಸ ಮಾಡಿದ್ದಾರೆ. ಸ್ವಚ್ಛ ಭಾರತ್ ಅಭಿಯಾನದಡಿ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ನಿರ್ಮಾಣ, ಶೌಚಾಲಯ ನಿರ್ಮಿಸಿಕೊಂಡ ಗರ್ಭಿಣಿಯರಿಗೆ ಸೀಮಂತ ಕಾರ್ಯ, ಬಾಣಂತಿಯರಿಗೆ ಉಡಿ ತುಂಬುವ ಶಾಸ್ತ್ರ ಮುಂತಾದ ಕಾರ್ಯಗಳ ಮೂಲಕ ಜನರ ಮೆಚ್ಚುಗೆಗಳಿಸಿದ್ದಾರೆ.
ಮೊದಲು ಬಂದವರು ಅಶ್ವತಿ
ದಾವಣಗೆರೆ ಜಿಲ್ಲೆಗೆ ಮೊದಲು ಬಂದವರು ಎಸ್.ಅಶ್ವತಿ. ಇಬ್ಬರ ನಡುವೆ ಪರಸ್ಪರ ಪ್ರೀತಿ ಇತ್ತು. ಇಬ್ಬರು ಒಂದೇ ಜಿಲ್ಲೆಯಲ್ಲೀಗ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಫೆ.14ರಂದು ವಿವಾಹ ಕೇರಳದಲ್ಲಿ ನಡೆಯಲಿದೆ.