ನಾಯಿ, ನರಿ, ಬೊಗಳಿದರೆ ಉತ್ತರ ಕೊಡಬೇಕಾ? ಸಿದ್ದೇಶ್ವರ್ಗೆ ಟಾಂಗ್ ಕೊಟ್ಟ ಮಲ್ಲಿಕಾರ್ಜುನ್
ದಾವಣಗೆರೆ, ಮೇ 14: ರಾಜಕಾರಣ ನಿಂತ ನೀರಲ್ಲ, ಅಧಿಕಾರ ಶಾಶ್ವವಲ್ಲ, ನಾನು ಎರಡು ಬಾರಿ ಮಂತ್ರಿ ಆಗಿದ್ದೇನೆ ಈಗ ಆರಾಮಾಗಿ ಸಂತೋಷವಾಗಿಲ್ವಾ..? ನನಗೆ ಅಧಿಕಾರ ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ. ಕಮೀಷನ್ ಪಡೆದು ಜೇಬು ತುಂಬಿಸಿಕೊಳ್ಳುವ ಬದಲು ಜನರಿಗಾಗಿ ಒಳ್ಳೆಯ ಕೆಲಸ ಮಾಡಲಿ. ಬಿಜೆಪಿ ಅಭಿವೃದ್ಧಿ ಕೆಲಸಗಳನ್ನು ಹೇಗೆ ಮಾಡ್ತಾರೆ ಅಂತಾ ನೋಡೋಣ ಅಂತ ನಾನು ಸುಮ್ಮನಿದ್ದೇನೆ. ಬಿಜೆಪಿಯವರ ಕಮೀಷನ್ ದಾಹದ ಬಗ್ಗೆ ಜನರಿಗೂ ಗೊತ್ತಾಗಬೇಕು ಎಂದು ಬಿಜೆಪಿ ವಿರುದ್ಧ ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಸರ್ಕಾರದಲ್ಲಿ ನಡೆಯುತ್ತಿರುವ ಪರ್ಸೆಂಟೇಜ್ ಕಮಿಷನ್ ಕುರಿತು ದಾವಣಗೆರೆ ಮಾತನಾಡದ ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ ಅವರು, ವೈಯಕ್ತಿಕವಾಗಿ ನನಗೆ ಯಾರ ಮೇಲೂ ದ್ವೇಷ ಇಲ್ಲ. ರಾಜ್ಯದಲ್ಲಿ ಬುಜೆಪಿ ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ಹೇಗೆ ಮಾಡ್ತಾರೆ ಅಂತಾ ನೋಡೋಣ ಅಂತಾ ನಾನು ಸುಮ್ಮನಿದ್ದೇನೆ," ಎಂದು ಹೇಳಿದರು.
"ಬಿಜೆಪಿಯವರ ಕಮಿಷನ್ ದಾಹದ ಬಗ್ಗೆ ಜನರಿಗೂ ಗೊತ್ತಾಗಬೇಕು. ಬಿಜೆಪಿಯವರು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ನಾಯಿ, ನರಿ, ಕಾಗೆ ಕೂಗಿದರೆ, ಬೊಗಳಿದರೆ ನಾನು ಉತ್ತರ ಕೊಡಬೇಕಾ" ಎಂದು ಸಂಸದ ಜಿಎಂ ಸಿದ್ದೇಶ್ವರ್ ಅವರಿಗೆ ತಿರುಗೇಟು ಕೊಟ್ಟರು.
ಎಲ್ಲದಕ್ಕೂ ಸಮಯ ಕೂಡಿ ಬರುತ್ತೆ. ಅಡಿಕೆಗೆ ನಾನಾ ರೀತಿಯ ಮಿಶ್ರಣ ಮಾಡುವಲ್ಲಿ ಬಹಳ ಪರಿಣಿತರು. ಕಲಬೆರಕೆ ಮಾಡುವುದರಲ್ಲಿ ನಿಪುಣರಿದ್ದಾರೆ ಎಂದು ಸಂಸದ ಜಿ. ಎಂ. ಸಿದ್ದೇಶ್ವರ್ ಹೇಸರೇಳದೇ ಆರೋಪಿಸಿದರು. ಡಿಸಿ ಆಫೀಸ್ ನಲ್ಲಿ ರೆಕಾರ್ಡ್ ತೆಗೆದು ನೋಡಲಿ. ರಿಂಗ್ ರಸ್ತೆ ಅಗಲೀಕರಣ ಮಾಡುವ ವೇಳೆ ಬಿಜೆಪಿಯವರ ಲಾರಿ ಬಂದಿದೆಯಾ..? ಟ್ರ್ಯಾಕ್ಟರ್ ಬಂದ್ವಾ..? ರಿಂಗ್ ರಸ್ತೆ ಅಗಲೀಕರಣ ಮಾಡುವಾಗ ಎಷ್ಟೋ ಮಂದಿ ಮನೆ ಕಳೆದುಕೊಂಡರು. ರಾತ್ರೋರಾತ್ರಿ ಅವರಿಗೆ ಆಶ್ರಯ ಮನೆಗಳಿಗೆ ಸ್ಥಳಾಂತರ ಮಾಡಿ ಹಕ್ಕು ಪತ್ರ ಕೊಟ್ಟು, ದೂಡಾದಿಂದಲೂ ಅನುಮತಿ ನೀಡಿಸಿದ್ದೆ. ಜಾಗ ಹೋದ ಬಗ್ಗೆ ಸರ್ವೇ ಮಾಡಿಸಿ ಕೂಡಲೇ ನೆರವಾಗಿದ್ದೆ.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದ್ದ ಒಲಂಪಿಕ್ ನಲ್ಲಿ ಪಾಲ್ಗೊಂಡಿದ್ದರೂ, ನಾನು ಬರುವುದರೊಳಗೆ ಅವರಿಗೆ ಆಶ್ರಯ ಕಲ್ಪಿಸಿಕೊಟ್ಟಿದ್ದೆ. ಇದೆಲ್ಲಾ ಗೊತ್ತಿದೆಯಾ ಅವರಿಗೆ..? ಕೇಂದ್ರ ಸರ್ಕಾರದ ಅನುದಾನ ತರಲು ಸಾಕಷ್ಟು ಯೋಜನೆಗಳಿವೆ. ಇಲ್ಲಿನ ಎಂಎಲ್ಎಗಳಿಗೆ ಬಾಯಿ ಮತ್ತೆ ಧೈರ್ಯವಿಲ್ಲ. ಕೇಂದ್ರದ ಬಳಿ ಹೋಗಿ ನಿಲ್ಲಲು ಇಲ್ಲಿನ ಶಾಸಕರಿಗೆ ಧೈರ್ಯ ಇಲ್ಲ. ಶೇಕಡಾ 40 ರಷ್ಟು ಕಮೀಷನ್ ಪಡೆಯಲು ಹವಣಿಸುತ್ತಿದ್ದಾರೆ. ಜನರು ಆರಿಸಿ ಕಳುಹಿಸಿದ್ದು ಜನರಿಗೆ ಒಳ್ಳೆಯ ಕೆಲಸ ಮಾಡಲಿ ಎಂದು ಹೇಳಿದರು.
ಸ್ವಂತ ಶಕ್ತಿಯಿಂದ ಯಾರಾದರೂ ಗೆದ್ದಿದ್ದಾರಾ..?
ಸ್ವಂತ ಶಕ್ತಿಯಿಂದ ಯಾರಾದರೂ ಗೆದ್ದಿದ್ದಾರಾ..? ಮೋದಿ ಮೋದಿ ಅಂತಾ ಹೆಸರು ಹೇಳಿಕೊಂಡು ಗೆದ್ದು ಬಂದಿದ್ದಾರೆ. ಇಂದಿರಾ ಗಾಂಧಿ ಕಾಲದಲ್ಲಿ ಏನನ್ನಾದರೂ ನಿಲ್ಲಿಸಿದರೆ ಗೆಲ್ಲುತ್ತಾರೆ ಎಂಬಂತೆ ಈಗ ಆಗಿದೆ. ನಮಗೂ ಟೈಂ ಬರುತ್ತೆ. ಉತ್ತರ ಕೊಡುತ್ತೇನೆ. ರಾಜಕೀಯ ನಿಂತ ನೀರಲ್ಲ ಶಾಶ್ವತವೂ ಅಲ್ಲ. ಶೇ.40 ರಷ್ಟು ಕಮೀಷನ್ ಅಲ್ಲ, ನನ್ನದು ವ್ಯವಹಾರ ಇದೆ. ಬೆವರು ಸುರಿಸಿ ದುಡಿದಿದ್ದೇನೆ. ಅದ್ರಲ್ಲೇ ರೊಟ್ಟಿ ಊಟ ಮಾಡುತ್ತಿದ್ದೇನೆ ಎಂದು ಹೇಳಿದರು.
ನಾವು ಮಂಜೂರು ಮಾಡಿಸಿದ ಕಾಮಗಾರಿಗಳಲ್ಲಿನ ದುಡ್ಡಿನಲ್ಲಿ ಮಜಾ ಮಾಡುತ್ತಿದ್ದಾರೆ..!
ನಾವು ಮಂಜೂರು ಮಾಡಿಸಿದ ಕಾಮಗಾರಿಗಳಲ್ಲಿನ ದುಡ್ಡಿನಲ್ಲಿ ಮಜಾ ಮಾಡುತ್ತಿದ್ದಾರೆ. ಬೇರೆ ಕೆಲಸ ಮಾಡಿದ್ದಾರಾ ತೋರಿಸಲಿ. ನಾವು ಮಾಡಿದ್ದ ಹಳೇ ಬಸ್ ನಿಲ್ದಾಣ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿಗಳನ್ನು ಹಳ್ಳ ಹಿಡಿಸಿದ್ದಾರೆ. ಎಲ್ಲವೂ ಮ್ಯಾಪ್ ನಲ್ಲಿ ಹೋಗಿವೆ. ಹೊಸ ಬಸ್ ನಿಲ್ದಾಣದಲ್ಲಿ ನೀರು ನಿಲ್ಲುತಿತ್ತು. ಇದಾಗಬಾರದು ಎಂದು ಯೋಜನೆ ಮಾಡಿದ್ದೆವು. ಅದ ನ್ನುಮುಂದುವರಿಸಿಕೊಂಡು ಹೋಗಲಿ. ಶಾಶ್ವತ ಪರಿಹಾರ ಕಂಡುಕೊಳ್ಳಲು ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ಲಾಸ್ ಹೌಸ್ ಗೆ ಬಿಜೆಪಿಯವರು ಯಾರಾದರಾದ್ದರೂ ಹೆಸರಿಟ್ಟುಕೊಳ್ಳಲಿ ಅಭ್ಯಂತರ ಏನಿಲ್ಲ. ಆದರೆ ಅದು ಅವರು ಮಾಡಿರುವ ಯೋಜನೆ ಆಗಿರಬೇಕು. ಯಾರಿಗೋ ಹುಟ್ಟಿದ್ದು ಯಾರಿಗೋ ಹೆಸರು ಎಂಬಂತೆ ಮಾಡಿದರೆ ಹೇಗೆ? ನ್ಯಾಯಯುತವಾಗಿ ಕೆಲಸ ಮಾಡಲಿ. ಫ್ಲೈ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಕ್ಯಾಬಿನೆಟ್ ನಲ್ಲಿ ಅನುಮೋದನೆ ಮಾಡಿಸಿದ್ದೆ. ಒಟ್ಟು 27 ಕೋಟಿ ರೂಪಾಯಿ ಬಿಡುಗಡೆ ಆಗಿತ್ತು. ಸೈಟ್ ಗಳ ಬಗ್ಗೆ ಪೇಪರ್ ನಲ್ಲಿ ಫೋಟೋ ಹಾಕಿಸಿಕೊಳ್ಳುತ್ತಾರೆ. ಎಲ್ಲಾ ಸಮುದಾಯಕ್ಕೂ ನೀಡಲಿ, ಯಾರೂ ಬೇಡ ಅಂತಾರೆ.
ಏಕವಚನದಲ್ಲಿ ಮಾತನಾಡಿದ್ದೇನೆ ಎಂದು ಸಿದ್ದೇಶ್ವರ್ ಗೆ ಹೇಳಿ..!
ಕುಂದುವಾಡ ಕೆರೆ ಕಟ್ಟುವಾಗ ಏನಾಗಿತ್ತು..? ಹೆಂಗ್ ನಿಂತಿದ್ವಿ, ಹೆಂಗ್ ಕಟ್ಟಿಸಿದ್ದೀವಿ. ಇವರಿಗೇನು ಗೊತ್ತು..? ಪೈಪ್ ಲೈನ್ ಹೊಡೆದಿದ್ಯಾರು, ನೀರು ತಂದಿದ್ಯಾರು, ಮಾತನಾಡಬಾರದ್ದೆಲ್ಲಾ ಮಾತನಾಡಿ ವಿರೋಧ ಮಾಡಿದವರ್ಯಾರು.. ? ರೈತರನ್ನು ಎತ್ತಿ ಕಟ್ಟಿದವರ್ಯಾರು..? ತುಂಗಾಭದ್ರಾ ನದಿಯಿಂದ ನೀರು ತಂದು ಎರಡು ಕೆರೆ ತುಂಬಿಸಲು ಪ್ಲ್ಯಾನ್ ಮಾಡಿಸಿದ್ಯಾರು..? ಡ್ಯಾಂ ಕಟ್ಟಿ ಬ್ಯಾರೇಜ್ ನಿರ್ಮಾಣ ಮಾಡುತ್ತಿರುವುದ್ಯಾರು ಏನಾದರೂ ಇಂಥ ಒಳ್ಳೆಯ ಯೋಜನೆಯನ್ನು ತೋರಿಸಲಿ.
ಕಾಂಕ್ರಿಟ್ ಮಿಕ್ಸಿಂಗ್ ಬರುತ್ತದೆಯಲ್ವಾ ಎಂ. 20, ಎಂ.30, ಎಂ. 40, ಎಂ. 45 ಗ್ರೇಡ್ ಎಂದರೆ ಏನು ಎಂಬುದನ್ನು ತಿಳಿದುಕೊಳ್ಳಲಿ. ಏಕವಚನದಲ್ಲಿ ಮಾತನಾಡಿದ್ದೇನೆ ಎಂದು ಸಿದ್ದೇಶ್ವರ್ ಗೆ ಹೇಳಿ. ಕಾಂಕ್ರಿಟ್ ಮಿಕ್ಸಿಂಗ್ ಬಗ್ಗೆ ರಾಜ್ಯದಲ್ಲಿ ಪರಿಚಯಿಸಿದವರ್ಯಾರು ಎಂಬುದು ಗೊತ್ತಾ ಎಂದು ಬಿಜೆಪಿಯವರ ವಿರುದ್ಧ ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ ಕಿಡಿಕಾಡಿದರು.