ದಾವಣಗೆರೆ; ಜನರ ಸಮಸ್ಯೆಗೆ ಸ್ಪಂದಿಸಲು ವಾಟ್ಸಪ್ ನಂಬರ್
ದಾವಣಗೆರೆ, ಮಾರ್ಚ್ 05: ದಾವಣಗೆರೆ ಮಹಾನಗರ ಪಾಲಿಕೆ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ನೀಡಲು ವಾಟ್ಸಪ್ ಮೊರೆ ಹೋಗಿದೆ. ಜನರು ಸಮಸ್ಯೆಗಳನ್ನು ತಿಳಿಸಲು ವಾಟ್ಸಪ್ ನಂಬರ್ ಬಿಡುಗಡೆ ಮಾಡಲಾಗಿದೆ.
ಶುಕ್ರವಾರ ಮಹಾನಗರ ಪಾಲಿಕೆ ಮೇಯರ್ ಎಸ್. ಟಿ. ವೀರೇಶ್ ವಾಟ್ಸಪ್ ನಂಬರ್ಗೆ ಚಾಲನೆ ನೀಡಿದರು. ಜನರು ತಮ್ಮ ದೂರುಗಳನ್ನು 8277234444 ನಂಬರ್ಗೆ ಕಳಿಸಬಹುದಾಗಿದೆ.
ದಾವಣಗೆರೆ ಪಾಲಿಕೆ ಬಿಜೆಪಿಗೆ; ಎಸ್. ಟಿ. ವಿರೇಶ್ ಮೇಯರ್
"ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾಗಿದ್ದು, ಸಾಮಾನ್ಯ ಜನರು ಸಹ ಮೊಬೈಲ್ ಬಳಸುತ್ತಿದ್ದಾರೆ. ಸಂವಹನ ಮಾಧ್ಯಮವಾಗಿ ವಾಟ್ಸಪ್ ವ್ಯಾಪಕವಾಗಿ ಬಳಕೆಯಲ್ಲಿದ್ದು, ಗ್ರಾಹಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಹಾಗೂ ಅಹವಾಲು ನೇರವಾಗಿ ಸ್ವೀಕರಿಸಲು ಈ ನಂಬರ್ ಬಿಡುಗಡೆ ಮಾಡಲಾಗಿದೆ" ಎಂದು ಮೇಯರ್ ಹೇಳಿದರು.
ಸಾರ್ವಜನಿಕರು ತಮ್ಮ ದೂರುಗಳನ್ನು 8277234444 ನಂಬರ್ಗೆ ವಾಟ್ಸಪ್ ಮಾಡಿ ನಗರದಲ್ಲಿರುವ ಸಮಸ್ಯೆಗಳನ್ನು ತಿಳಿಸಬಹುದು. ನಗರದಾದ್ಯಂತ ಯಾವುದೇ ಸೌಲಭ್ಯಗಳ ಪೂರೈಕೆ ಸ್ಥಗಿತಗೊಂಡಿದ್ದಲ್ಲಿ ದೂರು ನೀಡಬಹುದು, ಫೋಟೋಗಳನ್ನು ಕಳಿಸಬಹುದು. ದೂರುಗಳ ನಿರ್ವಹಣೆಗಾಗಿ ಪಾಲಿಕೆ ಕಚೇರಿಯಲ್ಲಿ ಕಂಟ್ರೋಲ್ ರೂಂ ಇದೆ, ತಕ್ಷಣ ಅಧಿಕಾರಿಗಳು ಸ್ಪಂದಿಸಲಿದ್ದಾರೆ.
ಮಹಾನಗರ ಪಾಲಿಕೆ ಕೆಲವು ವಾರ್ಡ್ಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿತ್ತು. ಅದು ಯಶಸ್ವಿಯಾದ ಹಿನ್ನಲೆಯಲ್ಲಿ ಯೋಜನೆಯನ್ನು ನಗರದಾದ್ಯಂತ ವಿಸ್ತರಣೆ ಮಾಡಲಾಗಿದೆ.
ಸ್ಮಾರ್ಟ್ ಸಿಟಿ ದಾವಣಗೆರೆಗೆ ಸ್ಮಾರ್ಟ್ ಹೆಲ್ತ್ 'ಬೈಸಿಕಲ್ ಶೇರಿಂಗ್ ಸಿಸ್ಟಂ'
ಹೆಮ್ಮೆಯ ವಿಚಾರ; ಮಾಧ್ಯಮಗಳ ಜೊತೆ ಮಾತನಾಡಿದ ಮೇಯರ್, "ದಾವಣಗೆರೆ ಜಿಲ್ಲೆಯು ವಾಸಯೋಗ್ಯ ನಗರವೆಂದು ದೇಶದಲ್ಲಿ 9ನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ. ಆದರೆ ಉಳಿದ ವಿಚಾರಗಳಲ್ಲಿ ಹಿಂದೆ ಉಳಿದಿದೆ. ದಾವಣಗೆರೆ ನಗರವನ್ನು ಸ್ವಚ್ಛವಾಗಿಡಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ" ಎಂದರು.
ಬತ್ತಿದ ಕುಂದುವಾಡ ಕೆರೆ; ದಾವಣಗೆರೆ ನಗರಕ್ಕೆ ಜಲಕ್ಷಾಮ?
Recommended Video
ಬಜೆಟ್ ಮಂಡನೆ: "ಮಾರ್ಚ್ ತಿಂಗಳ ಅಂತ್ಯದಲ್ಲಿ ಮಹಾನಗರ ಪಾಲಿಕೆ ಬಜೆಟ್ ಮಂಡನೆ ಮಾಡಲಿದ್ದು, ಅಧಿಕಾರಿಗಳು ಸೇರಿದಂತೆ ನಗರದ ಸಮಸ್ತ ಜನರು ನಗರಾಭಿವೃದ್ಧಿಗೆ ಸೂಕ್ತ ಸಲಹೆ, ಸೂಚನೆಗಳನ್ನು ವಾಟ್ಸಪ್ ನಂಬರ್ಗೆ ತಲುಪಿಸಬಹುದು" ಎಂದು ಮೇಯರ್ ಹೇಳಿದರು.