ದಾವಣಗೆರೆ ಜಿಲ್ಲೆಯ ಈ ಗ್ರಾಮದಲ್ಲಿ 29 ಜನರಿಗೆ ಕೊರೊನಾ ದೃಢ: 1400 ಜನರ ವರದಿ ಬರಬೇಕಿದೆ
ದಾವಣಗೆರೆ, ಮೇ 8: ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ರಾಮೇಶ್ವರ ಗ್ರಾಮದಲ್ಲಿ 29 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇನ್ನು 1400 ಜನರ ರಿಪೋರ್ಟ್ ಬರಬೇಕಿದ್ದು, ಗ್ರಾಮದ ಜನರ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
248 ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಆದ್ರೆ, ಇಷ್ಟೊಂದು ಮಂದಿಯಲ್ಲಿ ವೈರಸ್ ಇರುವುದು ಖಚಿತವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ರಾಮೇಶ್ವರ ಗ್ರಾಮದ ಜನರು ಶೀತ, ಕೆಮ್ಮಿನಿಂದ ಬಳಲುತ್ತಿದ್ದ ಬಗ್ಗೆ ಗುರುವಾರವೇ ಗೊತ್ತಾಗಿತ್ತು. ಊರಿನ ಅರ್ಧದಷ್ಟು ಮಂದಿ ಈ ಸಮಸ್ಯೆಯಿಂದ ಬಳಲುತ್ತಿದ್ದರು. ಗ್ರಾಮದಲ್ಲಿನ ನೀರಿನ ಟ್ಯಾಂಕ್ ನಲ್ಲಿನ ಕಸ, ಧೂಳು ಸೇರಿದಂತೆ ಸ್ವಚ್ಛತೆ ಇಲ್ಲದಿರುವುದೇ ಈ ಸಮಸ್ಯೆ ಕಾರಣ ಎಂದು ಭಾವಿಸಲಾಗಿತ್ತು. ಆದ್ರೆ, ಶುಕ್ರವಾರ ಬಂದ ಕೊರೊನಾ ಪಾಸಿಟಿವ್ ಸಂಖ್ಯೆ ಜನರು ಅಷ್ಟೇ ಅಲ್ಲ, ನ್ಯಾಮತಿ ತಾಲೂಕಿನ ಜನರ ಭಯಕ್ಕೆ ಕಾರಣವಾಗಿದೆ.
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಗ್ರಾಮಕ್ಕೆ ಭೇಟಿ ನೀಡಿ, ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರು, ನರ್ಸ್ ಗಳು ಕೋವಿಡ್ ಪರೀಕ್ಷೆ ನಡೆಸಿದರು. ಇನ್ನು 1400 ಜನರ ಪರೀಕ್ಷೆ ಬಾಕಿ ಇದ್ದು, ಇನ್ನೆಷ್ಟು ಮಂದಿಗೆ ಸೋಂಕು ತಗುಲಿರಬಹುದು ಎಂಬ ಭಯ ಶುರುವಾಗಿದೆ. ಇನ್ನು ಪಾಸಿಟಿವ್ ಬಂದಿರುವವರನ್ನು ಆಸ್ಪತ್ರೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ.
ಗ್ರಾಮದಾದ್ಯಂತ ಓಡಾಡಿದ ಶಾಸಕ ರೇಣುಕಾಚಾರ್ಯ, ಗ್ರಾಮದ ಪ್ರತಿಯೊಬ್ಬರು ಪರೀಕ್ಷೆ ಮಾಡಿಸಿಕೊಳ್ಳಲೇಬೇಕು. ಇಲ್ಲದಿದ್ದರೆ ಕೇಸ್ ದಾಖಲಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬೇಡಿ. ಕೇಸ್ ದಾಖಲಾದ ಬಳಿಕ ನನ್ನ ಬಳಿ ಯಾರೂ ಬರಬೇಡಿ ಎಂದು ಪೊಲೀಸ್ ವಾಹನದ ಧ್ವನಿವರ್ಧಕದ ಮೂಲಕ ಎಚ್ಚರಿಸುವ ಕೆಲಸ ಮಾಡಿದರು.
ಇನ್ನು ಎರಡು ದಿನಗಳ ಕಾಲ ಅಧಿಕಾರಿಗಳು ಗ್ರಾಮದಲ್ಲಿಯೇ ಮೊಕ್ಕಾಂ ಹೂಡಿ, ಕೊರೊನಾ ಪರೀಕ್ಷೆ ಮಾಡಿಸುವಂತೆ ಸೂಚಿಸಿದರು. ಕೋವಿಡ್ ಬಂದರೆ ಅದು ಅವಮಾನ ಅಲ್ಲ. ಪ್ರತಿಯೊಬ್ಬರೂ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮನವಿ ಮಾಡಿದರು.