ಎಚ್ ಡಿಕೆ-ಸಿದ್ದು ನಡುವಿನ ವಾಗ್ವಾದಕ್ಕೆ ಸಿ.ಟಿ. ರವಿ ಹೇಳಿದ್ದೇನು?
ದಾವಣಗೆರೆ, ಸೆಪ್ಟೆಂಬರ್ 24: "ಇಲ್ಲಿ ಯಾರು ಹದ್ದು, ಯಾರು ಗಿಳಿ, ಅವರು ಪರಸ್ಪರ ಕುಕ್ಕಿಸಿಕೊಳ್ಳಲಿ. ನಾವು ನಮ್ಮ ಕೆಲಸ ಮಾಡುತ್ತೇವೆ. ಅದರ ಬಗ್ಗೆ ನಾನು ಬಹಳ ಮಾತನಾಡುವುದಿಲ್ಲ" ಎಂದು ಕುಮಾರಸ್ವಾಮಿ-ಸಿದ್ದರಾಮಯ್ಯ ನಡುವಿನ ವಾಗ್ವಾದದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸೃತಿ ಇಲಾಖೆ ಸಚಿವ ಸಿ.ಟಿ.ರವಿ.
ದಾವಣಗೆರೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ನಂತರ ಹಲವು ವಿಷಯಗಳ ಕುರಿತು ಮಾತನಾಡಿದರು. ಎಂ.ಬಿ. ಪಾಟೀಲ್ ಅವರನ್ನು ಉದ್ದೇಶಿಸಿ, "2018-19ರಲ್ಲಿ ಕಾಂಗ್ರೆಸ್ ಸೋತಿದ್ದು ಯಾವ ಶಾಪದಲ್ಲಿ ಎನ್ನುವುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸಿಗರು ಸಮಾಜ ಹೊಡೆಯುವ ಕೆಲಸ ಮಾಡಿದ್ದು. ಅವರು ಮಾಡಿದ ಶಾಪದ ವಿಮೋಚನೆ ಏಳು ಜನ್ಮಕ್ಕೂ ತೀರಲ್ಲ. ಕೇಂದ್ರ ಸರ್ಕಾರ ನೆರೆ ಪರಿಹಾರದ ಒಂದು ರೂಪಾಯಿಯನ್ನೂ ಉಳಿಸಿಕೊಳ್ಳಲ್ಲ. ನೆರೆ ವಿಚಾರದಲ್ಲಿ ರಾಜಕೀಯ ಬೆಳೆ ಬೇಯಿಸಿಕೊಳ್ಳೋದು ಬೇಡ. ಎಂಪಿ ಚುನಾವಣೆಯಲ್ಲಿ ತಿಣುಕಾಡಿ ಒಂದು ಸ್ಥಾನ ಗೆದ್ದಿದ್ದಾರೆ. ಈಗ ನಾವು ಅಧಿಕಾರದಲ್ಲಿ ಇದ್ದೇವೆ. ಗೆದ್ದೇ ಗೆಲ್ತೀವಿ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಷ್ಟು ದಿನ ಅಧಿಕಾರದಲ್ಲಿ ಇರ್ತೀವಿ ಅನ್ನೋದಲ್ಲ, ಏನು ಮಾಡ್ತೀವಿ ಅದು ಮುಖ್ಯ; ಸಿ.ಟಿ.ರವಿ
ಬೆಳಗಾವಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪ್ರತಿಭಟನೆ ಕುರಿತು ಮಾತನಾಡಿ, "ಸಿದ್ದರಾಮಯ್ಯ ಅವರಿಗೆ ದೇವರು ಎಲ್ಲಾ ಸಾಮರ್ಥ್ಯ ಕೊಟ್ಟಿದ್ದಾರೆ. ಆದ್ದರಿಂದ ಪ್ರತಿಭಟನೆ ಮಾಡುತ್ತಾರೆ. ರಾಜಕೀಯ ಎಂಬುದು ಸೋಡ ಗ್ಯಾಸ್ ಇದ್ದಂಗೆ. ಅದು ಟುಸ್ ಎಂದು ಸುಮ್ಮನಾಗುತ್ತೆ" ಎಂದರು.
ಜಿ.ಟಿ. ದೇವೇಗೌಡ ಅವರು ಬಿಜೆಪಿ ಸೇರುವ ವಿಚಾರಕ್ಕೆ ಪ್ರತಿಕ್ರಿಯಿಸಿ, "ಯಾರ ಬಗ್ಗೆಯೂ ನಮ್ಮಲ್ಲಿ ಅಸ್ಪೃಶತೆ ಇಲ್ಲ. ಜಿಟಿಡಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಯಾರು ಬೇಕಾದರೂ ಬರಬಹುದು. ಅವರಿಗೆ ಸ್ವಾಗತ. ನಮ್ಮ ಸರ್ಕಾರ ಬರಲು ರಾಜೀನಾಮೆ ಕೊಟ್ಟ ಶಾಸಕರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣರಾಗಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು" ಎಂದರು.