ದಾವಣಗೆರೆ: ಕೊರೊನಾ ನಿರ್ಲಕ್ಷ್ಯ, ಆಯುಧ ಪೂಜೆಗೆ ಮಾರುಕಟ್ಟೆಯಲ್ಲಿ ಜನಸಂದಣಿ
ದಾವಣಗೆರೆ, ಅಕ್ಟೊಬರ್ 25: ದಾವಣಗೆರೆಯಲ್ಲಿ 20 ಸಾವಿರಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಕೇಸ್ ಗಳು ದಾಖಲಾಗಿದ್ದರೂ, ಜನರು ಮಾತ್ರ ಜಾಗೃತರಾಗುತ್ತಿಲ್ಲ. ಜೀವಕ್ಕಿಂತ ಹಬ್ಬನೇ ಮುಖ್ಯ ಎನ್ನುವಂತೆ ಕೋವಿಡ್ ಸಂಕಷ್ಟದ ನಡುವೆಯೂ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬಕ್ಕೆ ದಾವಣಗೆರೆ ನಗರದ ಮಾರುಕಟ್ಟೆಯಲ್ಲಿ ಖರೀದಿಗೆ ಜನಜಂಗುಳಿ ಸೇರಿರುವುದು ಕಂಡುಬಂದಿದೆ.
ಭಾನುವಾರದ ಆಯುಧ ಪೂಜೆಗೆ ಹೂವು, ಹಣ್ಣು, ತರಕಾರಿ, ದಿನಸಿಗಳನ್ನು ಖರೀದಿಸಿದರು. ಪ್ರಮುಖ ರಸ್ತೆಗಳಲ್ಲಿ ಅಲಂಕಾರಿಕ ವಸ್ತುಗಳು, ಪೂಜೆ ಸಾಮಗ್ರಿಗಳಿಗೆ ಪ್ರತ್ಯೇಕ ಅಂಗಡಿಗಳನ್ನು ತೆರೆಯಲಾಗಿತ್ತು. ಕೊರೊನಾ ಕಾರಣದಿಂದಾಗಿ ಆರ್ಥಿಕ ಸಂಕಷ್ಟ, ಅತಿವೃಷ್ಟಿಯಿಂದಾಗಿ ಬೆಳೆ ನಾಶದಿಂದ ಅಗತ್ಯ ವಸ್ತುಗಳ ಬೆಲೆ ಏರಿದರೂ ಇದ್ದುದರಲ್ಲಿಯೇ ಹಬ್ಬ ಆಚರಿಸಿ ಸಂಭ್ರಮಿಸುವ ಜನರ ಉತ್ಸಾಹಕ್ಕೆ ಕೊರತೆ ಕಾಣಲಿಲ್ಲ.
ಖಾಸಗಿ ಸುಪರ್ದಿಯಲ್ಲಿ ಸರ್ಕಾರಿ ಆಸ್ಪತ್ರೆ; ಚಿಕಿತ್ಸೆಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ
ವ್ಯಾಪಾರಸ್ಥರಲ್ಲಿ ಹಲವರು ಮಾಸ್ಕ್ ಹಾಕಿಕೊಂಡಿರಲಿಲ್ಲ
ದಾವಣಗೆರೆ ನಗರದ ಹೈಸ್ಕೂಲ್ ಮೈದಾನ, ಎಪಿಎಂಸಿ ಮಾರುಕಟ್ಟೆ, ಪ್ರವಾಸಿ ಮಂದಿರ ರಸ್ತೆ, ನಿಜಲಿಂಗಪ್ಪ ವೃತ್ತ, ಪಿ.ಬಿ.ರಸ್ತೆ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಕೆ.ಆರ್ ಮಾರುಕಟ್ಟೆ ಸೇರಿ ಹಲವೆಡೆ ಬಾಳೆ ಕಂದು, ಬೂದು ಕುಂಬಳಕಾಯಿ, ಹೂವು, ಹಣ್ಣುಗಳ ಭರ್ಜರಿ ವ್ಯಾಪಾರ ನಡೆಯಿತು. ಖರೀದಿ ಭರಾಟೆಯಲ್ಲಿ ಕೆಲವರು ಸಾಮಾಜಿಕ ಅಂತರ ಮರೆತಿದ್ದರು. ವ್ಯಾಪಾರಸ್ಥರಲ್ಲಿ ಹಲವರು ಮಾಸ್ಕ್ ಹಾಕಿಕೊಂಡಿರಲಿಲ್ಲ. ಇನ್ನು ಕೆಲವರು ಕುತ್ತಿಗೆ, ಗಲ್ಲಕ್ಕೆ ಮಾಸ್ಕ್ ಹಾಕಿಕೊಂಡು ವ್ಯಾಪಾರದಲ್ಲಿ ತೊಡಗಿದ್ದರು.
ಅಲಂಕಾರಿಕ ವಸ್ತುಗಳನ್ನು ಖರೀದಿಸಿದರು
ಆಯುಧ ಪೂಜೆಯಲ್ಲಿ ವಾಹನ, ಅಂಗಡಿ ಪೂಜೆ ಮಾಡುವವರು ಹೆಚ್ಚು. ಪೂಜಾ ಸಾಮಗ್ರಿ, ಅಲಂಕಾರಿಕ ವಸ್ತುಗಳನ್ನು ಖರೀದಿಸಿದರು. ಹೊಸ ವಾಹನ ಖರೀದಿಸಿದವರು ಉತ್ಸುಕರಾಗಿ ಅಲಂಕಾರಿಕ ವಸ್ತುಗಳ ಅಂಗಡಿಯಲ್ಲಿ ಸೇರಿದ್ದರು. ಅಲ್ಲದೇ ವಾಟರ್ ಸರ್ವೀಸ್ ಕೇಂದ್ರಗಳಲ್ಲಿ ಬೈಕ್, ಕಾರುಗಳು ಕ್ಯೂ ನಿಂತಿದ್ದವು.
ಬೆಲೆ ಏರಿಕೆ ಬಿಸಿ
ಆಯುಧ ಪೂಜೆಗೆ ಹೂವು, ಹಣ್ಣು, ಬೂದುಗುಂಬಳದ ಬೆಲೆ ಏರಿಕೆಯಾಗಿತ್ತು. ಮಾಮೂಲಿ ದಿನಗಳಲ್ಲಿ ಒಂದು ಸಣ್ಣ ಹೂವಿನ ಹಾರ ₹120 ಇದ್ದಿದ್ದು, ಶನಿವಾರ ₹300ಕ್ಕೆ ಮಾರಾಟವಾಯಿತು. ಸಣ್ಣ ಗುಲಾಬಿ 250 ಗ್ರಾಂಗೆ 50 ರಿಂದ ₹100 ರುಪಾಯಿಗೆ ಏರಿಕೆಯಾಗಿತ್ತು.
ಒಂದು ಮಾರು ಚೆಂಡು ಹೂವಿಗೆ 100 ರುಪಾಯಿ, ಸೇವಂತಿಗೆ 100 ರುಪಾಯಿ, ಹಾಗೂ ಮಲ್ಲಿಗೆ ಹೂವಿಗೆ 80 ರುಪಾಯಿ, ಕಣಗಿಲೆ ಹೂವಿಗೆ 50 ರುಪಾಯಿ ಇತ್ತು.
ಜನರು ಎಚ್ಚರಿಕೆ ವಹಿಸಬೇಕು
ಬೂದುಕುಂಬಳ ಸಣ್ಣ ಗಾತ್ರದ್ದು 80 ರಿಂದ 100 ರುಪಾಯಿ, ಮಧ್ಯಮ ಗಾತ್ರದ್ದು 150 ರಿಂದ ಹಾಗೂ ದೊಡ್ಡ ಗಾತ್ರದ್ದು 200 ರುಪಾಯಿವರೆಗೂ ಮಾರಾಟವಾದವು. ಬಾಳೆ ಕಂದುಗಳ ಬೆಲೆ ಒಂದು ಜೋಡಿಗೆ 40 ರಿಂದ 60 ರುಪಾಯಿಗಳವರೆಗೆ ಇತ್ತು. ನಿಂಬೆ ಹಣ್ಣು ಒಂದಕ್ಕೆ 5 ರೂ. ಇತ್ತು. ಹೂವು, ಹಣ್ಣುಗಳ ಬೆಲೆಗಳಲ್ಲಿ ಏರಿಕೆ ಡಬಲ್ ಆಗಿದೆ. ಆದರೂ ಹಬ್ಬವನ್ನಂತೂ ಮಾಡಲೇಬೇಕು. ಕೋವಿಡ್ ಇರುವುದರಿಂದ ಜನರು ಎಚ್ಚರಿಕೆ ವಹಿಸಬೇಕು.
Recommended Video