ದಾವಣಗೆರೆಯಲ್ಲಿ ದಾಖಲೆ ಇಲ್ಲದ ಕೋಟ್ಯಾಂತರ ರುಪಾಯಿ ಹಣ ವಶ
ದಾವಣಗೆರೆ, ಫೆಬ್ರವರಿ 6: ದಾಖಲೆ ಇಲ್ಲದ ಸಾಗಿಸುತ್ತಿದ್ದ ಕಂತೆ ಕಂತೆ ನೋಟುಗಳ ಕೋಟ್ಯಾಂತರ ರುಪಾಯಿ ಬೇನಾಮಿ ಹಣ ಪತ್ತೆಯಾಗಿದ್ದು, ದಾವಣಗೆರೆಯ ಅಜಾದ್ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದ ಕೆ.ಆರ್ ರಸ್ತೆಯ ಗ್ಯಾಲಾಕ್ಸಿ ಶಾದಿ ಮಹಲ್ ಬಳಿಯ ಹಣ ಪತ್ತೆಯಾಗಿದ್ದು, KA 39P 8055 ಸ್ವಿಫ್ಟ್ ಕಾರಿನಲ್ಲಿ ಸಾಗಿಸುತ್ತಿದ್ದ 1 ಕೋಟಿ 47 ಲಕ್ಷ ರೂ. ಮೌಲ್ಯದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉಚಿತವಾಗಿ ಸಿಗಲಿದೆ ಜಾಗ; ಬೇಲಿ ಹಾಕಲು ಓಡೋಡಿ ಬಂದ ಜನರು!
ಗೆಲಾಕ್ಸಿ ಶಾದಿ ಮಹಲ್ ಬಳಿ ಎಎಸ್ಐ ಜಗನ್ನಾಥ್, ಕಾನ್ ಸ್ಟೇಬಲ್ ಆಂಜನೇಯ, ರವಿ, ರುದ್ರೇಶ್ ಗುಡಿಕೇರಿ ಎನ್ನುವರು ತಪಾಸಣೆ ನಡೆಸುತ್ತಿದ್ದು, ಕಲಬುರಗಿ ಕಡೆಯಿಂದ ಬರುತ್ತಿದ್ದ ಕಾರು ತಪಸಾಣೆ ವೇಳೆ ಅನುಮಾನಾಸ್ಪದವಾಗಿ ವರ್ತಿಸಿದ ಆರೋಪಿಗಳನ್ನು ಕೆಳಗೆ ಇಳಿಸಿ ತಪಾಸಣೆ ನಡೆಸಿದ ಹಣ ಬೆಳಕಿಗೆ ಬಂದಿದ್ದು, ಕಾರಿನಲ್ಲಿದ್ದ ಮೂರು ಜನರನ್ನು ಅಜಾದ್ ನಗರ ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಶಕ್ಕೆ ಪಡೆವರನ್ನು ಮಹೇಶ್ (25), ಬೀರಲಿಂಗ (23), ಶ್ರೀಕಾಂತ್ (26) ಆರೋಪಿಗಳು ಎಂದು ತಿಳಿದುಬಂದಿದ್ದು, ಕಲಬುರಗಿಯಿಂದ ದಾವಣಗೆರೆಗೆ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಬರುತ್ತಿರುವಾಗ ತಪಾಸಣೆ ನಡೆಸಲು ಪೊಲೀಸರು ಕಾರು ನಿಲ್ಲಿಸಿದಾಗ ಹಣ ಇರುವುದು ಬೆಳಕಿಗೆ ಬಂದಿದೆ.
ಹಣದ ಬಗ್ಗೆ ದಾಖಲೆ ಕೇಳಿದಾಗ ಸರಿಯಾದ ಮಾಹಿತಿ ನೀಡದೇ ಇರುವುದರಿಂದ ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಬಳಿಕ ಆರೋಪಿಗಳನ್ನು ಆಜಾದ್ ನಗರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಯಿತು. ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸ್ಥಳಕ್ಕೆ ದಾವಣಗೆರೆ ನಗರ ಡಿವೈಎಸ್ಪಿ ನಾಗೇಶ್ ಐತಾಳ್ ಭೇಟಿ ನೀಡಿ ಪರಿಶೀಲಿಸಿದರು.
ಕಲಬುರಗಿಯಿಂದ ದಾವಣಗೆರೆಗೆ ಬರುತ್ತಿದ್ದ ಕಾರನ್ನು ಉತ್ತರ ಸಂಚಾರ ಠಾಣೆಯ ಎಎಸ್ಐ ಜಗನ್ನಾಥ್, ಕಾನ್ಸ್ಟೆಬಲ್ಗಳಾದ ಆಂಜನೇಯ, ರವಿ, ರುದ್ರೇಶ್ ಗುಡಿಕೇರಿ ಅವರು ತಡೆದು ತಪಾಸಣೆ ಮಾಡಿದಾಗ ಮೂರು ಬ್ಯಾಗ್ಗಳಲ್ಲಿ ಹಣ ಪತ್ತೆಯಾಗಿದೆ. ಇನ್ನು ಸಿಕ್ಕಿರುವ ಹಣ ಕಲಬುರಗಿ ಮೂಲದ ಶ್ರೀಪಾಲ್ ಜೈನ್ ಎಂಬುವರಿಗೆ ಸೇರಿದ ಹಣ ಎಂದು ತಿಳಿದು ಬಂದಿದ್ದು, ಹಣವನ್ನು ದಾವಣಗೆರೆಯಲ್ಲಿ ಯಾರಿಗೆ ನೀಡಲು ಸಾಗಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿಲ್ಲ.
'ಸರಿಯಾದ ದಾಖಲೆಗಳು ಇಲ್ಲದ ಕಾರಣ ತನಿಖೆ ನಡೆಸಲು ತೆರಿಗೆ ಇಲಾಖೆಗೆ ಹಣವನ್ನು ನೀಡಲಾಗುವುದು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯಪ್ಪ ತಿಳಿಸಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ಗಳಾದ ತಿಮ್ಮಣ್ಣ, ಗಜೇಂದ್ರಪ್ಪ, ಆಜಾದ್ ನಗರ ಠಾಣೆಯ ಪಿಎಸ್ಐ ಶೈಲಜಾ ಇದ್ದರು. ಆಜಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.