ದಾವಣಗೆರೆ: ಪ್ರತಿಷ್ಠಿತ ಬಡಾವಣೆಗಳಲ್ಲಿ ಸಾಲ ಮಾಡಿ ಕಟ್ಟಿಸಿದ ಮನೆಗಳು ಖಾಲಿ ಖಾಲಿ
ದಾವಣಗೆರೆ, ಅಕ್ಟೋಬರ್ 7: ಒಂದು ಕಾಲದಲ್ಲಿ ಪ್ರತಿಷ್ಠಿತ ಬಡಾವಣೆಗಳಲ್ಲಿ ಜನ ಸಾಮಾನ್ಯರಿಗೆ ಮನೆ ಬಾಡಿಗೆಗೆ ಸಿಗುವುದು ಕನಸಾಗಿತ್ತು. ಆದರೆ ಈಗ ಇಲ್ಲಿ ಪ್ರತಿಷ್ಠಿತರೂ ಇರಲಿ, ಜನಸಾಮಾನ್ಯನಿಗೂ ಬಾಡಿಗೆ ಮನೆ ಸಿಗುತ್ತದೆ. ಅಷ್ಟೇ ಅಲ್ಲ, ಬಾಡಿಗೆ ಸಿಗದ ಮಾಲೀಕರು "ಶಾಖಾಹಾರಿಗಳಿಗೆ ಮಾತ್ರ', ಮತ್ತಿತರ ಎಲ್ಲ ಕಂಡೀಶನ್ ಸಡಿಲಿಸಿದರೂ ಜನರು ಬರುತ್ತಿಲ್ಲ.
ದಾವಣಗೆರೆ ಜಿಲ್ಲೆಯ ಸುತ್ತಮುತ್ತ ಇರುವವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇಲ್ಲಿಯೇ ವಾಸಿಸುತ್ತಿದ್ದರು. ಇನ್ನು ಕೆಲವರು ಬಿಸಿನೆಸ್ ಮಾಡಲು ಇಲ್ಲಿ ಇರುತ್ತಿದ್ದರು. ಶಾಲಾ-ಕಾಲೇಜುಗಳ, ಎಂಬಿಎ, ಇಂಜಿನಿಯರಿಂಗ್, ಮೆಡಿಕಲ್, ಡೆಂಟಲ್, ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಸೇರಿ ಮನೆ ಬಾಡಿಗೆ ತೆಗೆದುಕೊಂಡು ವಾಸಿಸುತ್ತಿದ್ದರು. ಆದರೆ ಈಗ ಅವರೆಲ್ಲ ಮನೆ ಖಾಲಿ ಮಾಡಿದ್ದು, ಮನೆ ಬಾಡಿಗೆ ನೆಚ್ಚಿ ಜೀವನ ಮಾಡುತ್ತಿದ್ದವರು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ.
ಮನೆ ಕಟ್ಟಿ ಬಾಡಿಗೆ ಕೊಡಲು ಮುಂದಾದರು
ಬ್ಯಾಂಕ್ನಲ್ಲಿ ಡಿಪಾಸಿಟ್ ಇಟ್ಟರೆ ಲಕ್ಷಕ್ಕೆ 500 ರೂ.ಗಳಿಂದ, 600 ರೂ. ಬಡ್ಡಿ ಬರುತ್ತದೆ. ಹೆಚ್ಚಿನ ಬಡ್ಡಿಗೆ ಕೈಗಡ ಕೊಟ್ಟರೆ ಹಣದ ಭದ್ರತೆ ಇರುವುದಿಲ್ಲವೆಂದು ಮನೆ ಕಟ್ಟಿ, ಬಾಡಿಗೆ ಕೊಡಲು ಮುಂದಾದರು. 10 ಲಕ್ಷ ಹಣ ವೆಚ್ಚ ಮಾಡಿ 2 ಬಿ.ಎಚ್.ಕೆ ಬಾಡಿಗೆ ನೀಡಿದರೆ 7,000 ರೂ.ಗಳಿಂದ 8,000 ಬಾಡಿಗೆ ಬರುತ್ತಿತ್ತು. ಕೊಟ್ಟ ಅಡ್ವಾನ್ಸ್ ಹಣವನ್ನು ಇತರೆ ಕಾರ್ಯಗಳಿಗೆ ವ್ಯಯಿಸಬೇಕಾಗಿತ್ತು. ಅದೇ ಹಣವನ್ನು ಬ್ಯಾಂಕ್ನಲ್ಲಿ ಡಿಪಾಸಿಟ್ ಇಟ್ಟಿದ್ದರೆ 5 ರಿಂದ 6 ಸಾವಿರ ಹಣ ಮಾತ್ರ ಬರುತ್ತಿತ್ತು, ಆಸ್ತಿಯೂ ಇರುತ್ತಿರಲಿಲ್ಲ.
ದಾವಣಗೆರೆ; ಮೆಕ್ಕೆಜೋಳ, ಅಡಿಕೆ ಖರೀದಿ ಕೇಂದ್ರ ಇನ್ನೂ ತೆರೆದಿಲ್ಲ
ಏಕೆ ಮನೆ ಖಾಲಿಯಾಗಿದೆ?
ಕೊರೊನಾ ಸೋಂಕು ಕಾರಣ ಪ್ರತಿಷ್ಠಿತ ಬಡಾವಣೆಗಳಾದ ಆಂಜನೇಯ ಬಡಾವಣೆ, ಜೆ.ಎಚ್ ಪಟೇಲ್ ಬಡಾವಣೆ, ವಿದ್ಯಾನಗರ, ನಿಜಲಿಂಗಪ್ಪ ಬಡಾವಣೆ, ಶಿವಕುಮಾರಸ್ವಾಮಿ ಬಡಾವಣೆ, ಡಾಲರ್ಸ್ ಕಾಲೋನಿ, ಎಂಸಿಸಿ ಬಿ ಬ್ಲಾಕ್, ಸಿದ್ದವೀರಪ್ಪ ಬಡಾವಣೆ, ಎಸ್.ಎಸ್ ಬಡಾವಣೆ, ಬಾಲಾಜಿ ನಗರ, ಬಸವೇಶ್ವರ ಲೇಔಟ್, ಮಹಾಲಕ್ಷ್ಮಿ ಲೇಔಟ್ ಹೀಗೆ ಹತ್ತಾರು ಬಡಾವಣೆಗಳಲ್ಲಿದ್ದ ಅನೇಕರು ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಲಾಕ್ಡೌನ್ ಹಿನ್ನೆಲೆ ಶಾಲಾ-ಕಾಲೇಜುಗಳೂ ಬಂದ್ ಆಗಿದೆ. ಹಿಂದೆ ಇದ್ದ ಬಿಸಿನೆಸ್ ಈಗ ಇಲ್ಲದ ಕಾರಣ ಆರ್ಥಿಕ ಚಟುವಟಿಕೆಗಳನ್ನು ಸರಿದೂಗಿಸುವುದಕ್ಕಾಗಿ ದೊಡ್ಡ ಮನೆಯಲ್ಲಿ ಇದ್ದವರು ಸಿಂಗಲ್ ಬೆಡ್ ರೂಂಗೆ ಬಂದಿದ್ದಾರೆ.
ವ್ಯಾಪಾರ-ವಹಿವಾಟು ನಡೆಯುತ್ತಿಲ್ಲ
ಖಾಸಗಿ ಕಂಪನಿಯ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ, ಕೆಲಸ ಮಾಡುತ್ತಿದ್ದ ಉಳಿದ ಉದ್ಯೋಗಿಗಳಿಗೆ ಸಂಬಳ ಕಡಿತ ಮಾಡಿದ್ದಾರೆ. ಇನ್ನೂ ಅನೇಕ ಸಂಸ್ಥೆಯ ಉದ್ಯೋಗಿಗಳಿಗೆ ಸಂಬಳವನ್ನು ನೀಡುತ್ತಿಲ್ಲ. ಚಿಲ್ಲರೆ ವ್ಯಾಪಾರಿಯಿಂದ ಹಿಡಿದು ದೊಡ್ಡ ದೊಡ್ಡ ಕೈಗಾರಿಕೆವರೆಗೂ ಯಾವುದೇ ರೀತಿ ವ್ಯಾಪಾರ-ವಹಿವಾಟು ನಡೆಯುತ್ತಿಲ್ಲ.
ಯಾರಾದರೂ ಬಂದರೆ ಸಾಕಪ್ಪ
ಹಾಗೆಯೇ ಈಗಿನ ಪರಿಸ್ಥಿತಿಯಲ್ಲಿ ವ್ಯಾಪಾರ-ವಹಿವಾಟು ಇಲ್ಲದೇ ನಿರ್ವಹಣೆ, ಖರ್ಚು-ವೆಚ್ಚ, ಸಿಬ್ಬಂದಿ ವರ್ಗದವರಿಗೆ ಸಂಬಳ ನೀಡುವುದು ಕಷ್ಟಕರವಾಗಿದೆ. ಸ್ವಯಂ ಉದ್ಯೋಗಸ್ಥರಿಗೆ ಉದ್ಯೋಗ ಇಲ್ಲದೇ ಪರದಾಡುವ ಪರಿಸ್ಥಿತಿ ಇದೆ. ದಿನೇ ದಿನೇ ಎಲ್ಲ ವರ್ಗದ ಕುಟುಂಬದ ಆದಾಯ ಹಾಗೂ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದೆ. ಈ ಎಲ್ಲ ಕಾರಣಗಳಿಂದ ಎಲ್ಲಿ ಮನೆಗಳು ಖಾಲಿ ಇದ್ದು, ಮನೆ ಮಾಲೀಕರು ಮನೆಗೆ ಯಾರಾದರೂ ಬಂದರೆ ಸಾಕಪ್ಪ ಎನ್ನುತ್ತಿದ್ದಾರೆ. ಒಟ್ಟಾರೆ ಈ ವರ್ಷ ಮಾರ್ಚ್ ಅಂತ್ಯದಿಂದ ಈವರೆಗೆ ಏಳು ತಿಂಗಳಿಂದ ವ್ಯಾಪಾರ ಕುಸಿಯುತ್ತಲೇ ಇದೆ. ನಗರ ಪ್ರದೇಶದಿಂದ ಹಲವರು ಹಳ್ಳಿ ಕಡೆ ಮುಖ ಮಾಡಿದ್ದಾರೆ. ಹೆಮ್ಮಾರಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರಲಿಲ್ಲ ಅಂದರೆ ಚೇತರಿಕೆ ಹೇಗೆ ಎಂಬ ಚಿಂತೆ ಸಾರ್ವಜನಿಕರನ್ನು ಕಾಡುತ್ತಿದೆ.
ಕೊರೊನಾ ಮೊದಲು ಎಲ್ಲ ಮನೆಗಳೂ ತುಂಬಿದ್ದವು
ನಗರದಲ್ಲಿ ಅಂದಾಜು 2 ಲಕ್ಷಕ್ಕೂ ಹೆಚ್ಚು ಮನೆಗಳಿದ್ದು, ಶೇ.20 ರಷ್ಟು ಮನೆ ಖಾಲಿ ಇದೆ. ಹೊಟೇಲ್ ಉದ್ಯಮ ಸೇರಿದಂತೆ ಎಲ್ಲ ವ್ಯಾಪಾರ-ವಹಿವಾಟು ಪ್ರಪಾತಕ್ಕೆ ಜಾರಿದೆ. ಹಲವರು ತಮ್ಮ ವ್ಯಾಪಾರ ಬಂದ್ ಮಾಡಿ, ಮತ್ತೊಬ್ಬರಲ್ಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಕೊರೊನಾ ಹೆಮ್ಮಾರಿ ನೂರಾರು ಜೀವ ಹರಣ ಮಾಡುವ ಜತೆ ಸಾವಿರಾರು ಜನ ಜೀವನ ನರಕವನ್ನಾಗಿಸಿದೆ ಎನ್ನುತ್ತಾರೆ, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಬಗಾರೆ. ಖಾಸಗಿ ಬ್ಯಾಂಕ್ನಲ್ಲಿ ಲೋನ್ ತೆಗೆದು ಮನೆ ಕಟ್ಟಿಸಿದ್ವಿ. ಕೊರೊನಾ ಮೊದಲು ಎಲ್ಲ ಮನೆಗಳೂ ತುಂಬಿದ್ದವು. ಅವರೆಲ್ಲ ಈಗ ಖಾಲಿ ಮಾಡಿ ಹೋದರು. ಇದೀಗ ಕಡಿಮೆ ಬಾಡಿಗೆಗೆ ಕೊಡುತ್ತೇವೆ ಎಂದರೂ ಜನ ಬರುತ್ತಿಲ್ಲ. ಬ್ಯಾಂಕ್ ಲೋನ್ ತುಂಬುವುದು, ಮನೆ ನಡೆಸುವುದು ತೀರಾ ಕಷ್ಟವಾಗುತ್ತಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
Recommended Video