ಬಾಷಾನಗರ To ಕೆಟಿಜೆ ನಗರ: ದಾವಣಗೆರೆಯಲ್ಲಿ ಹೇಗಿದೆ ಕೊರೊನಾ ಕಂಡೀಷನ್?
ದಾವಣಗೆರೆ, ಮೇ.06: ನೊವೆಲ್ ಕೊರೊನಾ ವೈರಸ್ ಸೋಂಕಿತರಿಲ್ಲದೇ ಹಚ್ಚ ಹಸಿರಾಗಿದ್ದ ಬೆಣ್ಣೆನಗರಿಯಲ್ಲಿ ಚಿತ್ರಣ ಬದಲಾಗಿದೆ. ಮೂರ್ನಾಲ್ಕು ದಿನಗಳಲ್ಲೇ 44 ಮಂದಿಗೆ ಕೊವಿಡ್-19 ಸೋಂಕು ಪತ್ತೆಯಾಗಿದ್ದು, ಜಿಲ್ಲೆಯಾದ್ಯಂತ ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆ ಜಿಲ್ಲಾಡಳಿತ ನಗರದೆಲ್ಲೆಡೆ ಕಟ್ಟುನಿಟ್ಟಿನ ಕ್ರಮ ತಗೆದುಕೊಂಡಿದೆ.
ದಾವಣಗೆರೆಯಲ್ಲಿ ಕಂಟೇನ್ಮೆಂಟ್ ಪ್ರದೇಶಕ್ಕೆ ಸ್ವತಃ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದ್ರೋಣ್ ಕ್ಯಾಮರಾ ಮೂಲಕ ಪರಿಸ್ಥಿತಿ ಅವಲೋಕನ ನಡೆಸಿದರು.
ಕೊರೊನಾದಿಂದ ಕಕ್ಕಾಬಿಕ್ಕಿಯಾದ ಕರುನಾಡಿನ ಕಂಪ್ಲೀಟ್ ಕಹಾನಿ!
ಕೊರೊನಾ ವೈರಸ್ ಲಕ್ಷಣಗಳು ಕಾಣಿಸಿಕೊಂಡವರು ಮಾಹಿತಿ ನೀಡಲು ಹಿಂದೇಟು ಹಾಕುತ್ತಿರುವುದು ತಿಳಿದು ಬಂದಿದ್ದು, ಈ ಹಿನ್ನೆಲ ಜಾಲಿನಗರ, ಇಸ್ಲಾಂ ನಗರದಲ್ಲಿ ವಾಸವಿದ್ದ ಜನರ ಆರೋಗ್ಯ ಪರೀಕ್ಷೆಗೆ ಇಂದಿನಿಂದ ಚಾಲನೆ ನೀಡಲಾಗಿದೆ. ಒಬ್ಬರು ವೈದ್ಯರನ್ನೊಳಗೊಂಡ 20 ತಂಡಗಳನ್ನು ರಚಿಸಲಾಗಿದ್ದು, ಈ ತಂಡವು ಸ್ಥಳೀಯರ ಆರೋಗ್ಯ ತಪಾಸಣೆ ನಡೆಸಲಿದೆ.
ದಾವಣಗೆರೆಯಲ್ಲಿ ವ್ಯಾಪ್ತಿ ಹೆಚ್ಚಿಸಿಕೊಂಡ ಕೊರೊನಾ
ಹಳೇ ದಾವಣಗೆರೆ ವ್ಯಾಪ್ತಿಯ ಜಾಲಿನಗರ, ಭಾಷಾನಗರ, ಬೇತೂರ್ ರಸ್ತೆಗೆ ಸೀಮಿತವಾಗಿದ್ದ ಕೊರೊನಾ ಸೋಂಕಿತ ಪ್ರಕರಣಗಳು ಹೊಸ ದಾವಣಗೆರೆಯ ಪ್ರದೇಶವಾಗಿರುವ ಕೆಟಿಜೆ ನಗರಕ್ಕೂ ವ್ಯಾಪಿಸಿಸಿದೆ. ಹೀಗಾಗಿ ನಗರದಲ್ಲಿ ಇನ್ನೊಂದು ಕಂಟೇನ್ಮೆಂಟ್ ಪ್ರದೇಶವನ್ನು ಜಿಲ್ಲಾಡಳಿತ ಘೋಷಣೆ ಮಾಡಿದೆ.
ದಾವಣಗೆರೆಯಲ್ಲಿ ಮತ್ತೊಂದು ಕಂಟೇನ್ಮೆಂಟ್ ಝೋನ್
ಕೆಟಿಜೆ ನಗರದ 500 ಮೀಟರ್ ವ್ಯಾಪ್ತಿಯಲ್ಲಿ ಹೊಸ ಕಂಟೇನ್ಮೆಂಟ್ ಝೋನ್ ಆಗಿದ್ದು, ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ ಹೊಸ ಕಂಟೇನ್ಮೆಂಟ್ ಝೋನ್ ನ ಕಮಾಂಡಿಂಗ್ ಆಫೀಸರ್ ಆಗಿ ನೇಮಕಗೊಂಡಿದ್ದಾರೆ. ಕಳೆದ ಒಂದು ವಾರದಿಂದ ಮನೆ, ಲಾಡ್ಜ್, ಜಿಲ್ಲಾ ಆಸ್ಪತ್ರೆ, ಎರಡು ಖಾಸಗಿ ಆಸ್ಪತ್ರೆ ಸೇರಿ ವಿವಿಧ ಕಡೆ 816 ಜನಕ್ಕೆ ಕ್ವಾರಂಟೈನ್ ಮಾಡಲಾಗಿದೆ.
ಬೆಣ್ಣೆನಗರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 44
ದಾವಣಗೆರೆ ಜಿಲ್ಲೆಯಲ್ಲಿ ಇದುವರೆಗೂ 44 ಮಂದಿಗೆ ನೊವೆಲ್ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಈ ಪೈಕಿ ಎರಡು ಪ್ರಕರಣದಲ್ಲಿ ಸೋಂಕಿತರು ಗುಣಮುಖರಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಬಾಕಿ ಉಳಿದ 38 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.
ಮಂಗಳವಾರ 94 ಜನರ ರಕ್ತ, ಗಂಟಲು ದ್ರವ್ಯ ರವಾನೆ
ಇನ್ನು, ಮಂಗಳವಾರ 94 ಜನ ಕೊರೊನಾ ವೈರಸ್ ಸೋಂಕಿತರ ರಕ್ತ ಹಾಗೂ ಗಂಟಲು ದ್ರವ್ಯವನ್ನು ತಪಾಸಣೆಗೆ ಕಳುಹಿಸಲಾಗಿದೆ. ಒಟ್ಟು 263 ಜನರ ವೈದ್ಯಕೀಯ ತಪಾಸಣಾ ವರದಿ ಇನ್ನಷ್ಟೇ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ದಾರೆ.64 ಸಾವಿರ ಜನರ ಪ್ರಾಥಮಿಕ ಸರ್ವೆ ನಡೆಸಲಾಗಿದೆ. ಸೋಂಕಿನ ಮೂಲ ಗೊತ್ತಾಗದ ಹಿನ್ನೆಲೆ ಹೆಚ್ಚು ಜನರ ಮಾದರಿ ಸಂಗ್ರಹ ಮಾಡಲಾಗುತ್ತಿದೆ.