ವಿಶೇಷ ವರದಿ: ದಾವಣಗೆರೆಯ 594 ಹಳ್ಳಿಗಳಲ್ಲಿ ಕೋವಿಡ್ ಸೋಂಕು: ಯಾಕೆ ಇಲ್ಲೇ ಹೆಚ್ಚು?
ದಾವಣಗೆರೆ, ಜೂನ್ 3: ನಗರ ಪ್ರದೇಶಗಳಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಈಗ ಕಡಿಮೆಯಾಗುತ್ತಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಇನ್ನಿಲ್ಲದಂತೆ ಬಾಧಿಸುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 777 ಹಳ್ಳಿಗಳಿದ್ದು, ಈ ಪೈಕಿ 594 ಹಳ್ಳಿಗಳಲ್ಲಿ ಸೋಂಕು ವ್ಯಾಪಿಸಿದೆ. 183 ಹಳ್ಳಿಗಳಲ್ಲಿ ಸೋಂಕು ಇಲ್ಲ. ಆದರೆ, ಇಷ್ಟೊಂದು ಗ್ರಾಮೀಣ ಪ್ರದೇಶಗಳಲ್ಲಿ ಹೆಮ್ಮಾರಿ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಹಳ್ಳಿಗಳಲ್ಲೇ ಯಾಕೆ ಹೆಚ್ಚು ಸೋಂಕು?
ಪ್ರಮುಖವಾಗಿ ಆಂಧ್ರಪ್ರದೇಶ, ತಮಿಳುನಾಡು ಒಳಗೊಂಡಂತೆ ಬೇರೆ ಬೇರೆ ರಾಜ್ಯಗಳಿಂದಲೂ ಲಾಕ್ಡೌನ್ ವೇಳೆ ಹಳ್ಳಿಗೆ ಬಂದಿದ್ದಾರೆ. ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದಲೂ ಆಗಮಿಸಿದ್ದು, ಹಳ್ಳಿಗಳಲ್ಲಿ ಸೋಂಕು ಹೆಚ್ಚಳವಾಗಲು ಕಾರಣ. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರೇ ಹೇಳಿದಂತೆ ಗ್ರಾಮೀಣ ಭಾಗದ ಜನರು ಸ್ಥಳೀಯವಾಗಿ ವೈದ್ಯರ ಬಳಿ ತೋರಿಸಿ ಅಲ್ಲೇ ಔಷಧ ಪಡೆಯುತ್ತಿದ್ದಾರೆ. ಕೊರೊನಾ ಟೆಸ್ಟ್ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ. ಗುಣಲಕ್ಷಣಗಳು ಇದ್ದರೂ ಓಡಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಟೆಸ್ಟಿಂಗ್ ಮಾಡಲು ಬರುತ್ತಾರೆ ಎಂದರೆ ಮನೆಯಲ್ಲೇ ಇರುವುದಿಲ್ಲ. ಇದು ಸೋಂಕು ಹರಡಲು ಮತ್ತೊಂದು ಕಾರಣ.
ಜಿಲ್ಲಾಡಳಿತ ಯಶ ಕಂಡಿಲ್ಲ
ಸರ್ಕಾರ ಹಳ್ಳಿಗಳಲ್ಲಿನ ಸೋಂಕು ನಿಯಂತ್ರಣಕ್ಕೆ ಮೊಬೈಲ್ ಕ್ಲಿನಿಕ್, ವೈದ್ಯರ ನಡೆ ಹಳ್ಳಿಯ ಕಡೆ, ಹೋಮ್ ಐಸೋಲೇಷನ್ ಕಡ್ಡಾಯವಲ್ಲ ಇವುಗಳನ್ನೆಲ್ಲಾ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು, ಆದರೆ ದಾವಣಗೆರೆಯಲ್ಲಿ ಯಾವುದೇ ಕ್ರಮಗಳೂ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ. ಕೆಲವು ಕಡೆ ಕೋವಿಡ್ ಕೇರ್ ಸೆಂಟರ್ ತೆಗೆದರೂ ಕೂಡ ಕೋವಿಡ್ ಸೋಂಕಿತರನ್ನು ಕೋವಿಡ್ ಕೇರ್ಗೆ ತರುವಲ್ಲಿ ಜಿಲ್ಲಾಡಳಿತ ಯಶ ಕಂಡಿಲ್ಲ.
ಹೋಮ್ ಐಸೋಲೇಷನ್ ಗೆ ಒಳಗಾಗ್ತೀವಿ ಕೋವಿಡ್ ಕೇರ್ ಸೆಂಟರ್ ಗೆ ಬರುವುದಿಲ್ಲ ಅಂತ ಕೆಲವೆಡೆ ಜನರು ಗಲಾಟೆ ಮಾಡಿದ ಘಟನೆಗಳು ನಡೆದಿವೆ. ಇದೂ ಸಹ ಬೆಣ್ಣೆನಗರಿಯಲ್ಲಿ ಸೋಂಕು ಹೆಚ್ಚಾಗಲು ಪ್ರಮುಖ ಕಾರಣಗಳಲ್ಲೊಂದು.
ಕಟ್ಟುನಿಟ್ಟಿನ ಕ್ರಮಗಳು
ದಾವಣಗೆರೆಯಲ್ಲಿ ಕಟ್ಟುನಿಟ್ಟಾಗಿ ಸಂಪೂರ್ಣ ಲಾಕ್ಡೌನ್ ಜಾರಿ ಮಾಡಲಾಗಿದೆ. ಕೋವಿಡ್ ಸೋಂಕಿತರನ್ನು ಕಡ್ಡಾಯವಾಗಿ ಆಸ್ಪತ್ರೆಗೆ, ಕೋವಿಡ್ ಕೇರ್ ಸೆಂಟರ್ಗೆ ಸೇರಿಸಲು ತಮ್ಮ ಕೆಳ ಹಂತದ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಡಲಾಗಿದೆ. ಜೂನ್ 5 ರಿಂದ ಜೂನ್ 19ರವರೆಗೆ ಯಾವುದೇ ಮದುವೆಗಳಿಗೆ ಅವಕಾಶ ಕಲ್ಪಿಸಿಲ್ಲ. ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಖಾಸಗಿ ವಸತಿ ಶಾಲೆಗಳನ್ನು ಕೋವಿಡ್ ಕೇರ್ ಸೆಂಟರ್ಗಳನ್ನಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಆದರೆ, ಇದುವರೆಗೆ ಯಾವುದೇ ಶಾಲಾ, ಕಾಲೇಜುಗಳನ್ನು ಕೋವಿಡ್ ಕೇರ್ಗೆ ಬಳಕೆ ಮಾಡಿಕೊಂಡಿಲ್ಲ. ಜಿಲ್ಲೆಯಲ್ಲಿ ಒಟ್ಟು ಕೋವಿಡ್ ಕೇರ್ ಸಂಖ್ಯೆ 26. ಎರಡನೇ ಅಲೆಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಕಾಣಿಸಿಕೊಂಡಾಗಿನಿಂದ ಇದುವರೆಗೆ 12,609 ಮಂದಿಯಲ್ಲಿ ಕೊರೊನಾ ಪತ್ತೆಯಾಗಿದೆ. 83 ಜನರು ಬಲಿಯಾಗಿದ್ದಾರೆ.
Recommended Video
1,10,300 ರೂಪಾಯಿ ದಂಡ ಸಂಗ್ರಹ
ಸಂಪೂರ್ಣ ಲಾಕ್ಡೌನ್ ಇದ್ದರೂ ಜನರು ಬೈಕ್ ಹಾಗೂ ಕಾರುಗಳಲ್ಲಿ ಓಡಾಡುವುದಕ್ಕೆ ಬ್ರೇಕ್ ಬಿದ್ದಿಲ್ಲ. ಪೊಲೀಸರು ಬುಧವಾರ ಒಂದೇ ದಿನ 1,10,300 ರೂಪಾಯಿ ದಂಡ ಸಂಗ್ರಹಿಸಿದ್ದಾರೆ. 548 ಮಂದಿ ಮಾಸ್ಕ್ ಹಾಕದ್ದಕ್ಕೆ ದಂಡ ವಿಧಿಸಿದ್ದಾರೆ. 229 ವಾಹನಗಳನ್ನು ಸೀಜ್ ಮಾಡಲಾಗಿದೆ. ಇದುವರೆಗೆ ಒಂದೂವರೆ ಕೋಟಿ ರೂಪಾಯಿಗೂ ಅಧಿಕ ದಂಡ ವಸೂಲಾಗಿದೆ. ಇದು ಜನರ ಓಡಾಟಕ್ಕೆ ಸಾಕ್ಷಿಯಾಗಿದೆ. ಈಗಲಾದರೂ ದಾವಣಗೆರೆ ಜಿಲ್ಲಾಡಳಿತ ಮತ್ತಷ್ಟು ಬಿಗಿ ಕ್ರಮ ತೆಗೆದುಕೊಳ್ಳಬೇಕಿದೆ.