ದಾವಣಗೆರೆ: ಮದುವೆಗೆ ಹೋದವರ ಎದೆಯಲ್ಲಿ ಈಗ ಢವ ಢವ!
ದಾವಣಗೆರೆ, ಜೂನ್ 23: ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ವೈರಸ್ ಆರ್ಭಟ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಇಷ್ಟು ದಿನ ನರ್ಸ್ ಹಾಗೂ ವೃದ್ಧನ ಕಂಟಕವಿತ್ತು, ಆದರೆ ಈಗ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ಮದುವೆಯು ತಲೆನೋವಾಗಿ ಪರಿಣಮಿಸಿದೆ.
Recommended Video
ಇನ್ನೇನು ಕೊರೊನಾ ವೈರಸ್ ಪ್ರಕರಣಗಳು ದಾವಣಗೆರೆಯಲ್ಲಿ ಕಡಿಮೆಯಾಗುತ್ತಿವೆ ಎಂದು ನಿಟ್ಟುಸಿರು ಬಿಟ್ಟರೆ, ಈಗ ಗರ್ಭಿಣಿಯರಿಗೆ ಕೊರೊನಾ ಸೋಂಕು ಶುರುವಾಗಿದೆ. ಇದುವರೆಗೂ ಆರು ಜನ ಗರ್ಭಿಣಿಯರಿಗೆ ಸೋಂಕು ಕಾಣಿಸಿಕೊಂಡಿದ್ದು, ಅದರಲ್ಲಿ ಮೂರು ಜನ ಗರ್ಭಿಣಿಯರಿಗೆ ಹೆರಿಗೆ ಕೂಡ ಆಗಿದೆ.
ಕಂಟೇನ್ಮೆಂಟ್ ಜೋನ್ನ SSLC ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ
ಆದರೆ ಹರಿಹರದ ರಾಜನಹಳ್ಳಿಯ 18 ವರ್ಷದ ರೋಗಿ ನಂಬರ್-8065 ಸೋಂಕಿತ ಗರ್ಭಿಣಿ ಈಗ ಜಿಲ್ಲಾಡಳಿತಕ್ಕೆ ಹಾಗೂ ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಸರ್ಕಾರದಿಂದ ಗರ್ಭಿಣಿಯರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎನ್ನುವ ಅದೇಶದ ಹಿನ್ನೆಲೆ ಜಿಲ್ಲೆಯಲ್ಲಿ ಇರುವ ಗರ್ಭಿಣಿಯರನ್ನು ತಪಾಸಣೆಗೆ ಒಳಪಡಿಸಿದ್ದು, ಆಗ ಆರು ಗರ್ಭಿಣಿಯರಿಗೆ ಸೋಂಕು ಕಾಣಿಸಿಕೊಂಡಿರುವುದು ವರದಿಯಾಗಿದೆ, ಇದರಲ್ಲಿ ರಾಜನಹಳ್ಳಿ ಗ್ರಾಮದ 18 ವರ್ಷದ ಗರ್ಭಿಣಿ ಕೂಡ ಒಬ್ಬಳಾಗಿದ್ದಾಳೆ.
ಹರಿಹರದ ಗಂಡನ ಮನೆಯಿಂದ ತನ್ನ ತವರೂರಾದ ರಾಜನಹಳ್ಳಿಗೆ ಹೋಗಿದ್ದಳು. ಗ್ರಾಮದಲ್ಲಿ ನಡೆದ ಸಂಬಂಧಿಕರ ಮದುವೆಗೆ ಈ ಗರ್ಭಿಣಿ ಪಾಲ್ಗೊಂಡಿದ್ದಳು. 15 ರಂದು ಮದುವೆಗೆ ಹೋಗಿ ಬಂದಿದ್ದು, 18 ರಂದು ಈಕೆಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಈಗ ಈಕೆಯ ಸಂಪರ್ಕದಲ್ಲಿ ನಾಲ್ಕು ಜನ ಬಾಲಕಿಯರನ್ನು ಸೇರಿ ಒಟ್ಟು 9 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಅಲ್ಲದೆ ಈಕೆಯ ಸಂಪರ್ಕದಲ್ಲಿ ಇದ್ದ 25 ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಆದರೆ ಈಕೆ ಮದುವೆಗೆ ಹೋಗಿ ಬಂದ ಹಿನ್ನೆಲೆ ಮದುವೆಗೆ ಯಾರು ಯಾರು ಹೋಗಿದ್ದಾರೋ ಅವರಿಗೆ ನಡುಕ ಶುರುವಾಗಿದೆ. ಯಾಕೆಂದರೆ ನೂರಾರು ಜನರು ಸೇರಿದ್ದ ಮದುವೆಯಲ್ಲಿ ಈಕೆಯ ಸಂಪರ್ಕದಲ್ಲಿ ಎಷ್ಟು ಜನ ಇದ್ದರು ಎನ್ನುವುದೇ ಆರೋಗ್ಯ ಇಲಾಖೆಗೆ ತಲೆ ನೋವಾಗಿದೆ.
ದಾವಣಗೆರೆಯಲ್ಲಿ ಐವರು ಗರ್ಭಿಣಿಯರಿಗೆ ಕೊರೊನಾ ಸೋಂಕು
ಅಲ್ಲದೇ ತಹಶೀಲ್ದಾರರಿಗೆ ಆರೋಗ್ಯ ಇಲಾಖೆಯು ಮನವಿ ಮಾಡಿಕೊಂಡಿದ್ದು, ಮದುವೆಗೆ ಹೋದವರು ಸ್ವಯಂ ಪ್ರೇರಣೆಯಿಂದ ಬಂದು ತಪಾಸಣೆ ಮಾಡಿಸಿಕೊಳ್ಳಿ ಎಂದು ಅದೇಶವನ್ನು ಹೊರಡಿಸಲಾಗುತ್ತಿದೆ.
ಒಟ್ಟಾರೆಯಾಗಿ 18 ವರ್ಷದ ಗರ್ಭಿಣಿಗೆ ಸೋಂಕು ತಗುಲಿದ್ದು, ಗ್ರಾಮದ ಹಾಗೂ ಮದುವೆಗೆ ಹೋಗಿ ಬಂದವರ ನೆಮ್ಮದಿ ಹಾಳು ಮಾಡಿರುವುದಂತು ಸತ್ಯ. ಈಗಲೇ ಆಕೆಯ ಸಂಪರ್ಕದಲ್ಲಿದ್ದ ಗಂಡನ ಮನೆ ಹಾಗೂ ತವರು ಮನೆಯ 9 ಜನರಿಗೆ ಸೋಂಕು ತಗುಲಿದ್ದು, ಮುಂದೆ ಇನ್ನೇಷ್ಟು ಜನ ಕೊರೊನಾ ವೈರಸ್ ಸೋಂಕಿತರು ಹೆಚ್ಚಾಗುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.