ದಾವಣಗೆರೆ: ಮತ್ತೆ ಮೂವರಲ್ಲಿ ಸೋಂಕು, ಓರ್ವ ಮಹಿಳೆ ಸಾವು
ದಾವಣಗೆರೆ. ಮೇ.7: ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ವೈರಸ್ ರುದ್ರತಾಂಡವ ನಿಲ್ಲುವ ಹಾಗೆ ಕಾಣುತ್ತಿಲ್ಲ. ಇಂದು ಸಹ ಜಿಲ್ಲೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಮತ್ತೆ ಮೂವರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ.
Recommended Video
ದಾವಣಗೆರೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಮನೆಮಾಡಿದೆ. ಇಂದು ದೊರೆತಿರುವ ವರದಿಯಲ್ಲಿ ಮೂರು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 42 ಸಕ್ರೀಯ ಪ್ರಕರಣಗಳು ಕಂಡುಬಂದಿದೆ. ಇಲ್ಲಿಯವರೆಗೆ 4 ಮಂದಿ ಮೃತಪಟ್ಟಿರುವ ವರದಿ ಬಂದಿದೆ.
ದಾವಣಗೆರೆ ಜಿಲ್ಲೆಯಲ್ಲಿ 28 ದಿನಗಳ ಅವಲೋಕನ ಅವಧಿಯನ್ನು 277 ಜನರು ಪೂರ್ಣಗೊಳಿಸಿದ್ದಾರೆ. 195 ಜನರು 14 ದಿನಗಳ ಅವಲೋಕನ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಒಟ್ಟು 140 ಜನರನ್ನು ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಲ್ಪಟ್ಟಿದ್ದು, 188 ಜನರನ್ನು ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಲ್ಲಿ ಇರಿಸಲಾಗಿದೆ. ಆಸ್ಪತ್ರೆಯಲ್ಲಿ 254 ಜನರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಇದುವರೆಗೂ 154 ಜನರು ಸೂಕ್ತ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ನಗರದ ಐದು ಕಂಟೈನ್ಮೆಂಟ್ ವಲಯ ವ್ಯಾಪ್ತಿಯ ಜನರಲ್ಲಿ ಆತಂಕ ಮನೆ ಮಾಡಿದೆ. ಇಂದು ಸಂಜೆ ವೇಳೆಗೆ ಬಹುತೇಕ ಕಂಟೈನ್ಮೆಂಟ್ ವಲಯಗಳ ವರದಿ ಬರುವ ನಿರೀಕ್ಷೆಯಿದೆ. ಕೊರೊನಾ ಭೀತಿ ಹೆಚ್ಚಾದ ಹಿನ್ನೆಲೆ ಕಂಟೈನ್ಮೆಂಟ್ ವ್ಯಾಪ್ತಿಯಲ್ಲಿ ಬರುವ 10,317 ಮನೆಗಳ 50,915 ಜನರ ಆರೋಗ್ಯ ತಪಾಸಣೆಗೆ ಜಿಲ್ಲಾಡಳಿತ ನಿರ್ಧಾರ ಮಾಡಿದೆ.
ಆರೋಗ್ಯ ತಪಾಸಣೆ ವೇಳೆ ಕೆಲ ಜನರಿಗೆ ಜ್ವರ ಇರುವುದು ಪತ್ತೆಯಾಗಿದ್ದು, ಅವರ ರಕ್ತ ಮಾದರಿ ಸಂಗ್ರಹ ಮಾಡಲಾಗಿದೆ. ಇದೀಗ ಭಾಷಾನಗರ, ಜಾಲಿನಗರ, ಇಮಾಮ್ ನಗರ, ಬೇತೂರು ರಸ್ತೆ ಹಾಗೂ ಕೆಟಿಜೆ ನಗರದ ಐದು ಕಂಟೈನ್ಮೆಂಟ್ ವಲಯ ಹಾಗೂ ಕ್ವಾರಂಟೈನ್ ಕೇಂದ್ರಗಳಾದ ಲಾಡ್ಜ್ ಗಳಿಗೆ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ.
ಕಂಟೈನ್ಮೆಂಟ್ ವಲಯಗಳಲ್ಲಿ ವೈದ್ಯರು ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂದು ಬೆಳಿಗ್ಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ ನೇತೃತ್ವದ ತಂಡ ಕಂಟೈನ್ಮೆಂಟ್ ವಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.