ಸ್ವಪಕ್ಷೀಯ ಸಚಿವರ ವಿರುದ್ಧವೇ ಹರಿಹಾಯ್ದ ರೇಣುಕಾಚಾರ್ಯ!
ದಾವಣಗೆರೆ, ಮೇ 05; "ಬೆಂಗಳೂರಿನಲ್ಲಿ ಬೆಡ್ ಸಿಗದ ಪರಿಸ್ಥಿತಿ ನೋಡಿದರೆ ಸರ್ಕಾರಕ್ಕೆ ಹಾಗೂ ಪಕ್ಷದ ಸಂಘಟನೆಗೆ ಕೆಟ್ಟ ಹೆಸರು ಬರುತ್ತಿದೆ. ಕೆಲಸ ಮಾಡುವುದಿದ್ದರೆ ಸಚಿವರಾಗಿ ಇರಲಿ. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಹೋಗಲಿ" ಎಂದು ಹೊನ್ನಾಳಿ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ ಪಟ್ಟಣದಲ್ಲಿ ಬುಧವಾರ ಮಾತನಾಡಿದ ರೇಣುಕಾಚಾರ್ಯ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದರು. "ನಾನೇನೂ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಜನರ ಸೇವೆಯೇ ಮುಖ್ಯ" ಎಂದು ಸ್ಪಷ್ಟಪಡಿಸಿದರು.
ಸಚಿವರ ಆದೇಶಕ್ಕಿಲ್ಲ ಬೆಲೆ? ಸಿಟಿ ಸ್ಕ್ಯಾನ್ನಲ್ಲಿ ಪಾಸಿಟಿವ್ ಬಂದ್ರೂ ಬೆಡ್ ಸಿಗಲ್ಲ!
"ಕೆಲ ಸಚಿವರು ಜನರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಮತ್ತೆ ಕೆಲವರು ತಮ್ಮ ಸ್ವಂತ ಕೆಲಸಗಳಿಗೆ ಮಾತ್ರ ಗಮನ ನೀಡುತ್ತಿದ್ದಾರೆ. ಜನರ ಬಗ್ಗೆ ಕಾಳಜಿ ವಹಿಸದವರು ರಾಜೀನಾಮೆ ಕೊಟ್ಟು ಹೋಗಲಿ. ಇಲ್ಲದಿದ್ದರೆ ಜನರ ಸಮಸ್ಯೆ ಬಗೆಹರಿಸಲಿ" ಎಂದು ತಮ್ಮ ಪಕ್ಷದ ಸಚಿವರಿಗೆ ಟಾಂಗ್ ನೀಡಿದರು.
ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಮುಸ್ಲಿಂ ಸಂಘಟನೆ ಕೈವಾಡ; ಈಶ್ವರಪ್ಪ
"ಸಿಎಂ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಕೊರೊನಾ ನಿಯಂತ್ರಣ ಸಂಬಂಧ ಹಗಲಿರುಳು ಕೆಲಸ ಮಾಡುತ್ತಿದ್ದಾರೆ, ಶ್ರಮಿಸುತ್ತಿದ್ದಾರೆ. ಚಾಮರಾಜನಗರ ದುರಂತದ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ. ಆದರೆ ಆರೋಗ್ಯ ಸಚಿವ ಡಾ. ಸುಧಾಕರ್ ಎರಡೆರೆಡು ಖಾತೆ ಬೇಕು ಎನ್ನುತ್ತಾರೆ. ಈಗ ಕೆಲಸ ಮಾಡಲಿ" ಎಂದು ಹೇಳಿದರು.
ಬೆಡ್ ಬ್ಲಾಕಿಂಗ್; ತೇಜಸ್ವಿಸೂರ್ಯಗೆ ಸಿದ್ದರಾಮಯ್ಯ ಪ್ರಶ್ನೆಗಳು!
"ನಾನೇನೂ ಟೀಕೆ ಮಾಡಲು ಹೋಗಲ್ಲ. ಬೆಂಗಳೂರಿನ ಅಧಿಕಾರಿಗೆ ಕರೆ ಮಾಡಿದರೆ ಸ್ವೀಕರಿಸಲ್ಲ. ಬಿಬಿಎಂಪಿಯ ಕಾರ್ಯವೈಖರಿಗೆ ಇದೇ ಸಾಕ್ಷಿಯಾಗಿದೆ. ಜನರ ಬಗ್ಗೆ ಕಾಳಜಿ ವಹಿಸಬೇಕು. ಯಾವುದೇ ಕಾರಣಕ್ಕೂ ಕೊರೊನಾ ನಿರ್ಲಕ್ಷ್ಯ ಮಾಡಬೇಡಿ" ಎಂದು ರೇಣುಕಾಚಾರ್ಯ ಮನವಿ ಮಾಡಿದರು.