ದಾವಣಗೆರೆಯಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ: ಚುನಾವಣೆಗೆ ಮುನ್ನುಡಿ ಬರೆದ ಮಹೋತ್ಸವ...!
ದಾವಣಗೆರೆ, ಆಗಸ್ಟ್ 3: ಮಧ್ಯಕರ್ನಾಟಕದ ಹೆಬ್ಬಾಗಿಲು ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಯಿತು. ನಾಡಿನ ಮೂಲೆ ಮೂಲೆಯಿಂದ ಹರಿದು ಬಂದ ಲಕ್ಷಾಂತರ ಜನರು ಸಿದ್ದರಾಮಯ್ಯ ಅವರಿಗೆ ಜೈಕಾರ ಹಾಕಿದರು. ಘೋಷಣೆ ಹಾಕಿದರು. ಈ ಮೂಲಕ ಸಿದ್ದರಾಮಯ್ಯರ ಜನಬಲ ಅನಾವರಣಗೊಂಡಿತು.
ದಾವಣಗೆರೆ- ಹರಿಹರ ರಾಷ್ಟ್ರೀಯ ಹೆದ್ದಾರಿ ಮಧ್ಯೆಯ ಶಾಮನೂರು ಶಿವಶಂಕರಪ್ಪ ಒಡೆತನದ ಅರಮನೆ ಮೈದಾನದಲ್ಲಿ ಸಿದ್ದರಾಮಯ್ಯ ಅವರ ದೊಡ್ಡ ಶಕ್ತಿ ಜನಬೆಂಬಲಕ್ಕೆ ಸಾಕ್ಷಿ ಆಯಿತು. ದೊಡ್ಡ ದೊಡ್ಡ ಸಂಖ್ಯೆಯಲ್ಲಿ ಜನರು ಬಂದಿದ್ದು ನೋಡಿ ಸಂಘಟಕರು ಖುಷಿಯಾಗಿದ್ದರು. ನಿರೀಕ್ಷೆಗೂ ಮೀರಿ ರಾಜ್ಯದ ವಿವಿಧೆಡೆಯಿಂದ ಯುವಕರು, ವೃದ್ಧರು, ಮಹಿಳೆಯರು ಸೇರಿದಂತೆ ಅಪಾರ ಜನವೃಂದವೇ ಆಗಮಿಸಿತ್ತು.
ದೈಹಿಕ, ಮಾನಸಿಕ ಸದೃಡ ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ: ಸಿದ್ದರಾಮಯ್ಯ
ಸಿದ್ದರಾಮಯ್ಯ ಅಮೃತ ಮಹೋತ್ಸವ ವೇದಿಕೆಗೆ ಸಿದ್ದರಾಮಯ್ಯ ಬರುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಹಾಕಿದ ಜೈಕಾರ ಮುಗಿಲು ಮುಟ್ಟಿತು. ಸುಮಾರು ನಾಲ್ಕು ಲಕ್ಷ ಖುರ್ಚಿಗಳನ್ನು ಹಾಕಲಾಗಿತ್ತು. ಆದರೂ ಸಾಕಾಗಲಿಲ್ಲ. ಎಷ್ಟೋ ಜನರು ಮೈದಾನದ ಹೊರಗಡೆ ಸಾವಿರಾರು ಜನರು ನಿಲ್ಲುವಂತಾಯಿತು. ಬೆಳಿಗ್ಗೆಯಿಂದಲೇ ಬಸ್ ಗಳು, ರೈಲು, ಕಾರು, ಟಾಟಾಸುಮೋ, ಬೈಕ್ ಸೇರಿದಂತೆ ವಾಹನಗಳಲ್ಲಿ ಆಗಮಿಸಿದರು. ಬೆಳ್ಳಂಬೆಳಿಗ್ಗೆ ಮಳೆ ಶುರುವಾದರೂ ಜನರು ಆಗಮಿಸುವುದು ಕಡಿಮೆ ಆಗಲಿಲ್ಲ.
ರಾಷ್ಟ್ರೀಯ ಹೆದ್ದಾರಿಯಂತೂ ಕಾಂಗ್ರೆಸ್ ಮಯವಾಗಿತ್ತು. ಎಲ್ಲಿ ನೋಡಿದರೂ ಸಿದ್ದರಾಮಯ್ಯ, ಕಾಂಗ್ರೆಸ್ ಬಾವುಟಗಳು ರಾರಾಜಿಸಿದವು. ಜನರು ಸೇರಿದ್ದು ಗಮನಿಸಿದರೆ ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಕಾಂಗ್ರೆಸ್ ತಯಾರಿ ಆರಂಭಿಸಿದೆ ಎಂಬ ಮಾತು ಕೇಳಿ ಬಂತು.ವೇದಿಕೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರಾದ ಬಿ. ಎಲ್. ಶಂಕರ್, ಕೆ. ಎನ್. ರಾಜಣ್ಣ, ಶಾಸಕ ಯು. ಟಿ. ಖಾದರ್ ಸೇರಿದಂತೆ ಬಹುತೇಕ ಮುಖಂಡರು ಸಿದ್ದರಾಮಯ್ಯರನ್ನು ಹಾಡಿ ಹೊಗಳಿದರು. ಅವರು ಬೆಳೆದು ಬಂದ ಹಾದಿ, ಮುಖ್ಯಮಂತ್ರಿ ಆಗಿದ್ದಾಗ ಕೆಲಸ ಮಾಡಿದ್ದನ್ನು ಕೊಂಡಾಡಿದರು.
ಬಿ. ಎಲ್. ಶಂಕರ್ ಮಾತನಾಡಿ ಈ ಮಹೋತ್ಸವಲ್ಲಿ ಒಟ್ಟು 8ರಿಂದ 10 ಲಕ್ಷ ಜನರು ಪಾಲ್ಗೊಂಡಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಜನರು ಸೇರಿರುವುದರಿಂದ ಸಮಸ್ಯೆಯಾಗಿದೆ. ಪಕ್ಷದ ಮುಖಂಡರು ವೇದಿಕೆಗೆ ಬರಲು ಸಾಧ್ಯವಾಗಲಿಲ್ಲ. ರಾಷ್ಟ್ರೀಯ ಹೆದ್ದಾರಿ ತುಂಬೆಲ್ಲಾ ಜನರು ಸೇರಿದ್ದು, ಜನರು ಸಿದ್ದರಾಮಯ್ಯರ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಸಾಕ್ಷಿ ಎಂದರು.
ಪ್ರಜಾಪ್ರಭುತ್ವದ ಸೌಂದರ್ಯ
ಬಡಕುಟುಂಬದಲ್ಲಿ ಜನಿಸಿದ ಸಿದ್ದರಾಮಯ್ಯ ಹೋರಾಟದ ಮೂಲಕ ಬೆಳೆದವರು. 75 ವರ್ಷಗಳ ತಮ್ಮ ಜೀವಿತಾವಧಿಯಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿ ಬೆಳೆದು ಬಂದ ಪರಿ ಪ್ರಜಾಪ್ರಭುತ್ವದ ಸೌಂದರ್ಯ. 2018 ರಲ್ಲಿ ಸಿದ್ದರಾಮಯ್ಯ ನಾಯಕತ್ವದಲ್ಲಿ ಚುನಾವಣೆ ಎದುರಿಸಿದರೂ ಬಹುಮತ ಬರಲಿಲ್ಲ. ಆದರೆ ಈ ಕೊರಗು ಅವರಲ್ಲಿದೆ. ಇದನ್ನು ನೀವೆಲ್ಲರೂ ಸೇರಿ ಈಡೇರಿಸಬೇಕು. ಮತ್ತೆ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ನಿಮ್ಮ ಆಶೀರ್ವಾದ ಬೇಕು ಎಂದು ಮನವಿ ಮಾಡಿದರು.
ಕೆ. ಎನ್. ರಾಜಣ್ಣ ಮಾತನಾಡಿ ರಾಜ್ಯದ ಜನರ ಅಪೇಕ್ಷೆಯಂತೆ ಹೈಕಮಾಂಡ್ ನಡೆದುಕೊಳ್ಳುತ್ತದೆ ಎಂಬ ವಿಶ್ವಾಸ ಇದೆ. ಸಿದ್ದರಾಮಯ್ಯ ಈಗ ಜನರಾಮಯ್ಯ, ಅಭಿವೃದ್ಧಿರಾಮಯ್ಯ ಆಗಿದ್ದಾರೆ ಎಂದು ಬಣ್ಣಿಸಿದರು.
ಸಿದ್ದು ನಾಯಕತ್ವದಲ್ಲಿ ಮತ್ತೊಮ್ಮೆ ಅಧಿಕಾರ
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ ದಾವಣಗೆರೆಗೆ ಎಲ್ಲೆಡೆಯಿಂದ ಜನಸಮುದಾಯ ಹರಿದು ಬಂದಿದೆ. 10 ಕಿಲೋಮೀಟರ್ ವರೆಗೆ ಟ್ರಾಫಿಕ್ ಜಾಮ್ ಆಗಿದೆ. ಜನರು ಬರುವುದನ್ನುನೋಡಿ ನಮಗೆ ಆಶ್ಚರ್ಯ ಮತ್ತು ಸಂತೋಷ ಆಯ್ತು. ನೇರ, ದಿಟ್ಟ, ಆರೋಪ ಇಲ್ಲದ ನಿಷ್ಕಳಂಕ ರಾಜಕಾರಣಿ. ಬ್ರಾಹ್ಮಣ, ಲಿಂಗಾಯತ ವಿರೋಧಿ ಸಿದ್ದರಾಮಯ್ಯ ಎಂಬ ಪಟ್ಟ ಕಟ್ಟಿದ್ದಾರೆ. ಇದು ಸುಳ್ಳು. ಎಲ್ಲಾ ವರ್ಗದವರಿಗೂ ಅನುಕೂಲ ಮಾಡಿಕೊಟ್ಟ ಧೀಮಂತ ರಾಜಕಾರಣಿ. ಮುಂದಿನ ರಾಜಕಾರಣ ಬದಲಾಯಿಸುವ, ದಿಕ್ಕು ಬದಲಿಸುವ ಕಾರ್ಯಕ್ರಮ ಇದು. ಈ ಜನಸಾಗರ ಆಶೀರ್ವದಿಸಬೇಕು. ಸಿದ್ದರಾಮಯ್ಯ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟೋಣ, ಅಧಿಕಾರಕ್ಕೆ ತರೋಣ ಎಂದು ಕರೆ ನೀಡಿದರು.
ಹಸ್ತಕ್ಷೇಪ ಇಲ್ಲದೇ ಅಧಿಕಾರ
ಮಾಜಿ ಸಚಿವ ಹೆಚ್. ಕೆ. ಪಾಟೀಲ್ ಮಾತನಾಡಿ, ದೇಶದ ಇತರೆ ಕಾರ್ಯಕ್ರಮಗಳಿಗಿಂತ ಈ ಮಹೋತ್ಸವದಲ್ಲಿ ಹೆಚ್ಚು ಜನರು ಸೇರಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮ. ಸಿದ್ದರಾಮಯ್ಯ ಅವರದ್ದು ಸಂಘರ್ಷದ, ನೋವಿನ, ಕೆಳಹಂತದಿಂದ ಮೇಲೆ ಬಂದ ಸಿದ್ದರಾಮಯ್ಯ ಅನುಭವದ ಖಣಿ. 13 ಬಜೆಟ್ ಮಂಡನೆ ಮಾಡಿ ಇತಿಹಾಸ ಸೃಷ್ಟಿಸಿ ಜನಮನ ಗೆದ್ದಂಥ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಮುಖ್ಯಮಂತ್ರಿಯಾಗಿ ಹಸ್ತಕ್ಷೇಪ ಇಲ್ಲದೇ ಅಧಿಕಾರ ನಡೆಸಿದವರು. ಮಾತಿನಲ್ಲಿ ಒರಟಾದರೂ ಬಡವರಿಗೆ ಸ್ಪಂದಿಸುವ ಮೃದು ಹೃದಯದ ಹೃದಯವಂತರು ಎಂದು ಕೊಂಡಾಡಿದರು.
ಬದಲಾವಣೆಗಾಗಿ ಸಿದ್ದರಾಮಯ್ಯ
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿ, ಸಿದ್ದರಾಮಯ್ಯರಿಗೆ ರಾಜಕೀಯದಲ್ಲಿ ಬದಲಾವಣೆಗೆ ತರಲು ಶಕ್ತಿ ನೀಡಬೇಕು. ಸಮಾನತೆ ತರಬೇಕು ಎಂಬ ಕಾರಣಕ್ಕೆ ಈ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ನಾವೆಲ್ಲರೂ ಸೇರಿ ರಾಜಕೀಯ, ಸಾಮಾಜಿಕ ಶಕ್ತಿ ನೀಡೋಣ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲರ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದರು.