ದಾವಣಗೆರೆ ಮೇಯರ್ ಮರು ಚುನಾವಣೆಗೆ ಕಾಂಗ್ರೆಸ್ ಒತ್ತಾಯ
ದಾವಣಗೆರೆ ಮೇಯರ್ ಚುನಾವಣೆಯ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಿಗೆ ಮತದಾನ ಹಕ್ಕು ಕೊಟ್ಟಿದ್ದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ದಾವಣಗೆರೆ, ಮಾರ್ಚ್ 02: ದಾವಣಗೆರೆ ಮೇಯರ್ ಚುನಾವಣೆಯ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಿಗೆ ಮತದಾನ ಹಕ್ಕು ಕೊಟ್ಟಿದ್ದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮೇಲಾಗಿ ಈಗ ಹೈಕೋರ್ಟ್ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ಬರುವ ಮಾರ್ಚ್ 17 ರಂದು ವಿಚಾರಣೆಗೆ ದಿನ ನಿಗದಿ ಮಾಡಿದೆ. ಅಲ್ಲಿಯವರೆಗೆ ಮೇಯರ್ ಉಪ ಮೇಯರ್ ಕುರ್ಚಿಗೆ ಆತಂಕವಿಲ್ಲ. ಆದರೆ ಹೈಕೋರ್ಟ್ ತೀರ್ಪು ಬರುವ ಮೊದಲೇ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅಂದರೆ ಚುನಾವಣೆಯಲ್ಲಿ ತಪ್ಪುಗಳು ನಡೆದಿದ್ದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಕಾನೂನು ಸಮರಕ್ಕೆ ಸಜ್ಜಾಗಿದೆ.
ದಾವಣಗೆರೆ ಪಾಲಿಕೆ ಚುನಾವಣೆಯಲ್ಲಿ ಬೋಗಸ್ ದಾಖಲೆ; ಅಧಿಕಾರಿಗಳ ಅಮಾನತು
ಸ್ಮಾರ್ಟ್ ಸಿಟಿ ದಾವಣಗೆರೆ ಮೇಯರ್ ಉಪ ಮೇಯರ್ ಚುನಾವಣೆ ಇಡೀ ರಾಜ್ಯದ ಗಮನ ಸೆಳೆದಿತ್ತು. 45 ಸದಸ್ಯ ಬಲದ ದಾವಣಗೆರೆ ಮಹಾನಗರ ಪಾಲಿಕೆಯನ್ನು ಕೇವಲ 17 ಸ್ಥಾನ ಗೆದ್ದ ಬಿಜೆಪಿ ಅಧಿಕಾರ ಹಿಡಿದಿದೆ. ಇದು ಕಾಂಗ್ರೆಸ್ ನೆಮ್ಮದಿ ಹಾಳು ಮಾಡಿದೆ.
ಹೀಗಾಗಿ ನಿರಂತರ ಕಾನೂನು ಹೋರಾಟಕ್ಕೆ ಕಾಂಗ್ರೆಸ್ ಸಜ್ಜಾಗಿದ್ದರೆ, ಇನ್ನೊಂದು ಕಡೆ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಅನುಭವಿಸುತ್ತಿದೆ. ಹೈಕೋರ್ಟ್ ಅಂತಿಮ ತೀರ್ಪಿನ ಮೇಲೆ ಫೆ.19 ಕ್ಕೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿರುವ ಮೇಯರ್ ಮತ್ತು ಉಪ ಮೇಯರ್ ಅವರೇ ಅಧಿಕಾರದಲ್ಲಿ ಮುಂದುವರೆಯಬೇಕಾ, ಬೇಡವಾ ಎಂದು ನಿರ್ಧಾರ ಆಗಲಿದೆ.
ಇದೇ ವಿಚಾರವನ್ನ ಕಾಂಗ್ರೆಸ್ ಅಸ್ತ್ರ ಮಾಡಿಕೊಂಡು ಹೈಕೋರ್ಟ್ ನಲ್ಲಿ ಹೋರಾಟಕ್ಕೆ ಸಜ್ಜಾಗಿದ್ದು, ಮಾರ್ಚ್ 17 ಕ್ಕೆ ಪಾಲಿಕೆಯ ಮೇಯರ್ ಚುನಾವಣೆ ಬಗ್ಗೆ ವಿಚಾರಣೆ ಹೈಕೋರ್ಟ್ ದಿನ ನಿಗದಿ ಮಾಡಿದೆ. ಇದಕ್ಕೆ ಕಾರಣ ಬಿಜೆಪಿ ಕಾನೂನು ಬಾಹಿರವಾಗಿ ಎಂಟು ಜನ ವಿಧಾನ ಪರಿಷತ್ ಸದಸ್ಯರನ್ನು ಮತದಾರ ಪಟ್ಟಿಗೆ ಸೇರ್ಪಡೆ ಮಾಡಿತ್ತು.
ಅದು ಈಗ ಅಧಿಕಾರಿಗಳ ತಲೆಗೆ ಬಂದಿದೆ. ಇದೇ ಕಾರಣಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಪಾಲಿಕೆ ಉಪ ಆಯುಕ್ತ ನಾಗರಾಜ್ ಹಾಗೂ ಪಾಲಿಕೆ ಪರಿಷತ್ ಕಾರ್ಯದರ್ಶಿ ಜಯಪ್ಪ ಅವರನ್ನು ಅಮಾನತುಗೊಳಿಸಿದ್ದಾರೆ. ಅದು ಕೋರ್ಟ್ ತೀರ್ಪು ಬರುವ ಮೊದಲೇ ಆಗಿದ್ದರಿಂದ ಇಲ್ಲೊಂದಿಷ್ಟು ತಪ್ಪುಗಳು ಜಿಲ್ಲಾಡಳಿತದಿಂದ ನಡೆದಿವೆ ಎಂಬುದು ಸ್ಪಷ್ಟವಾಗಿದೆ.
ಬಿಜೆಪಿ ತೆಕ್ಕೆಗೆ ದಾವಣಗೆರೆ ಪಾಲಿಕೆ, ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ಸಿಗರು
ಇನ್ನು ಕಾಂಗ್ರೆಸ್ ಮತ್ತು ಬಿಜೆಪಿಯ ಸೇರಿ ಒಟ್ಟು 15 ಜನ ವಿಧಾನ ಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿತ್ತು. ಈ ಪ್ರಕರಣ ಚುನಾವಣಾ ಆಯೋಗ ನೇಮಕ ಮಾಡಿದ್ದ ಚುನಾವಣಾ ವೀಕ್ಷಕರಾದ ಹರ್ಷಗುಪ್ತಾ ಅವರು ವಿಧಾನ ಪರಿಷತ್ ಸದಸ್ಯರಿಗೆ ಮತದಾನದ ಹಕ್ಕು ನೀಡಲು ಅನುಸರಿಸಿದ ಮಾನದಂಡ ಹಾಗೂ ವಿಧಾನ ಪರಿಷತ್ ಸದಸ್ಯರು ನೀಡಿದ ಸ್ಥಳೀಯ ವಿಳಾಸದ ಸ್ಥಳ ಪರಿಶೀಲನೆ ನಡೆಸಿದ್ದರು.
ಬಹುತೇಕರು ತಪ್ಪು ವಿಳಾಸ ನೀಡಿದ್ದಾರೆ. ಅಲ್ಲಿ ವಾಸವಿಲ್ಲ ಎಂಬ ನಿರ್ಧಾರಕ್ಕೆ ಹರ್ಷಗುಪ್ತ ಬಂದಿದ್ದರು. ಆದರೆ ಅವರು ತಮ್ಮ ವರದಿಯನ್ನು ಹೈಕೋರ್ಟ್ ಗೆ ಕೊಟ್ಟಿಲ್ಲ. ಇದೇ ಕಾರಣಕ್ಕೆ ವಿಚಾರಣೆ ಮಾರ್ಚ್ 17 ಕ್ಕೆ ನಿಗದಿ ಆಗಿದೆ.