ವಾಣಿಜ್ಯ ಚಟುವಟಿಕೆಗೆ ದಾವಣಗೆರೆಯಲ್ಲಿ ಷರತ್ತು ಬದ್ಧ ಅವಕಾಶ
ದಾವಣಗೆರೆ, ಮೇ 18: ಕಂಟೈನ್ಮೆಂಟ್ ವಲಯ ಹೊರತುಪಡಿಸಿ ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯ ಉಳಿದ ಕಡೆ ಕೈಗಾರಿಕೆ ಹಾಗೂ ವಾಣಿಜ್ಯ ಚಟುವಟಿಕೆಗೆ ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಷರತ್ತುಬದ್ಧ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
""ಜನರು ಪರಸ್ಪರ ಆರು ಅಡಿಗಳ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಹಾಗೂ ನಿರಂತರ ಸ್ಯಾನಿಟೈಸರ್ ಬಳಸಬೇಕು ಹಾಗೂ ಹವಾನಿಯಂತ್ರಿತ ಸಲಕರಣೆಗಳನ್ನು ಬಳಸುವಂತಿಲ್ಲ. ಈ ಆದೇಶ ಮೇ 19 ರ ಮಧ್ಯರಾತ್ರಿಯವೆರೆಗೆ ಜಾರಿಯಲ್ಲಿರುತ್ತದೆ'' ಎಂದು ಅವರು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಶಾಂತಿ ಕದಡುವ ಕೆಲಸ ಯಾರೂ ಮಾಡಬೇಡಿ: ದಾವಣಗೆರೆ ಮೇಯರ್
ವಿಶೇಷ ಆರ್ಥಿಕ ವಲಯ, ರಫ್ತು ಆಧಾರಿತ ಘಟಕಗಳು, ಕೈಗಾರಿಕಾ ಎಸ್ಟೇಟ್ಗಳು ಮತ್ತು ಕೈಗಾರಿಕಾ ನಗರಗಳು, ಅವಶ್ಯಕ ವಸ್ತುಗಳ ತಯಾರಿಕಾ ಘಟಕಗಳು, ಔಷಧ, ವೈದ್ಯಕೀಯ ಸಲಕರಣೆ, ಫಾರ್ಮಾಸಿಟಿಕಲ್ ಹಾಗೂ ಅದಕ್ಕೆ ಸಂಬಂಧಿಸಿದ ಕಚ್ಚಾ ಸಾಮಗ್ರಿ ಘಟಕಗಳು, ತಯಾರಿಕಾ ಘಟಕಗಳು ಮತ್ತು ಅವುಗಳ ಸರಪಳಿಗಳು, ಐಟಿ ಹಾರ್ಡ್ವೇರ್ ತಯಾರಿಕಾ ಘಟಕಗಳು ಮತ್ತು ಪ್ಯಾಕೇಂಜಿಂಗ್ ಸಾಮಗ್ರಿಗಳ ತಯಾರಿಕಾ ಘಟಕಗಳು ಕಾರ್ಯ ನಿರ್ವಹಿಸಬಹುದಾಗಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಿಗೆ ಸ್ವಯಂಘೋಷಣಾ ಪತ್ರವನ್ನು ಸಲ್ಲಿಸಿ ಚಟುವಟಿಕೆ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಸೂಚಿಸಿದ್ದಾರೆ.
ನಗರ ಪ್ರದೇಶಗಳಲ್ಲಿ ಕಟ್ಟಡ ಕಾಮಗಾರಿ ಚಟುವಟಿಕೆ ಸ್ಥಳೀಯವಾಗಿ ಕಾರ್ಮಿಕರು ಲಭ್ಯವಿದ್ದಲ್ಲಿ ಮಾತ್ರ ನಡೆಸಬೇಕು. ಹೊರಗಿನಿಂದ ಕಾರ್ಮಿಕರನ್ನು ಕರೆ ತರಬಾರದು ಎಂದು ಡಿಸಿ ಹೇಳಿದ್ದಾರೆ.
""ಖಾಸಗಿ ಕಚೇರಿಗಳು ಶೇ. 33ರ ಷ್ಟು ಸಿಬ್ಬಂದಿಯನ್ನು ಉಪಯೋಗಿಸಿ ತೆರೆಯಬಹುದು. ಉಳಿದ ಸಿಬ್ಬಂದಿ ಮನೆಯಿಂದ ಕೆಲಸ ನಿರ್ವಹಿಸಬಹುದು. ಅವಶ್ಯಕ ವಸ್ತುಗಳಿಗೆ ಸಂಬಂಧಿಸಿದಂತೆ ಮಾತ್ರ ಇ-ಕಾಮರ್ಸ್ ಚಟುವಟಿಕೆ ನಡೆಸಬಹುದು. ರಾಜ್ಯ ಸರ್ಕಾರದ ಕಚೇರಿಗಳು ಕರ್ತವ್ಯ ನಿರ್ವಹಿಸತಕ್ಕದ್ದು'' ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.