ಕೊರೊನಾ ಹೆಮ್ಮಾರಿ ಹಿಮ್ಮೆಟ್ಟಿಸಿದ ಸೊಕ್ಕೆ: ಗ್ರಾ.ಪಂ ಅಧ್ಯಕ್ಷೆಗೆ ಸಿಎಂ ಯಡಿಯೂರಪ್ಪ ಮೆಚ್ಚುಗೆ!
ದಾವಣಗೆರೆ, ಜೂನ್ 24: ಕೊರೊನಾ ಎರಡನೇ ಅಲೆ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗಿ ವ್ಯಾಪಿಸಿದೆ. ಜನರಂತೂ ಕಂಗೆಟ್ಟು ಹೋಗಿದ್ದಾರೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ಹೆಮ್ಮಾರಿ ಆರ್ಭಟದ ಸೊಕ್ಕಡಗಿಸಿದ ಸೊಕ್ಕೆ ಗ್ರಾಮ ಪಂಚಾಯಿತಿ ಈಗ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದೆ.
Recommended Video
ಕೊರೊನಾ ಸೋಂಕು ತಡೆಯುವಲ್ಲಿ ಶ್ರಮಿಸಿದ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮ ಪಂಚಾಯಿತಿಯ ಕಾರ್ಯವೈಖರಿಗೆ ಸಿಎಂ ಯಡಿಯೂರಪ್ಪ ಅವರೇ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪ್ರಶಂಸನಾ ಪತ್ರವನ್ನು ಸಹ ಕಳುಹಿಸಿಕೊಟ್ಟಿದ್ದಾರೆ. ಸೊಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಿಸುವಲ್ಲಿ ಹಗಲಿರುಳು ಶ್ರಮಿಸಿದ ಪಂಚಾಯಿತಿ ಅಧ್ಯಕ್ಷೆ ಸ್ವಾತಿ ತಿಪ್ಪೇಸ್ವಾಮಿ ಅವರು ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳು, ಹತೋಟಿಗೆ ತಂದ ಪರಿ ಸಿಎಂ ಯಡಿಯೂರಪ್ಪರ ಮೆಚ್ಚುಗೆಗೆ ಪಾತ್ರವಾಗಿದೆ.
ವಿಶೇಷ ವರದಿ: ದಾವಣಗೆರೆಯ 594 ಹಳ್ಳಿಗಳಲ್ಲಿ ಕೋವಿಡ್ ಸೋಂಕು: ಯಾಕೆ ಇಲ್ಲೇ ಹೆಚ್ಚು?
ಸೊಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯರಲಕಟ್ಟೆ, ಸೊಕ್ಕೆ, ಗುಡ್ಲಾಪುರ, ಚಿಕ್ಕಬಂಟನಹಳ್ಳಿ ಗ್ರಾಮಗಳಲ್ಲಿ ಆರು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಆದರೆ, ಇದುವರೆಗೆ ಸೋಂಕು ಕಂಡು ಬಂದಿರುವುದು ಕೇವಲ 34 ಮಂದಿಯಲ್ಲಿ. ನಾಲ್ವರು ಮಾತ್ರ ಸದ್ಯಕ್ಕೆ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರೆ, ಉಳಿದವರೆಲ್ಲರೂ ಗುಣಮುಖರಾಗಿದ್ದಾರೆ. ಯಾರೂ ಕೋವಿಡ್ಗೆ ಬಲಿಯಾಗಿಲ್ಲ ಎಂಬುದು ಮತ್ತೊಂದು ವಿಶೇಷ.
ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಟಾಸ್ಕ್ಫೋರ್ಸ್ ರಚನೆ
ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಟಾಸ್ಕ್ಫೋರ್ಸ್ ರಚಿಸಲಾಗಿದ್ದು, ಇದನ್ನು ಸಮರ್ಥವಾಗಿ ಬಳಸಿಕೊಂಡ ಗ್ರಾ.ಪಂ ಅಧ್ಯಕ್ಷೆ ಸ್ವಾತಿ ತಿಪ್ಪೇಸ್ವಾಮಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ಪೊಲೀಸರು, ದಾದಿಯರು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ಅವರ ಜೊತೆಗೂಡಿ ಹಳ್ಳಿಹಳ್ಳಿಗೆ ಹೋಗಿ ಜನರಲ್ಲಿ ಅರಿವು ಮೂಡಿಸುವ ಮೂಲಕ ಸೋಂಕು ಹರಡುವಿಕೆ ತಡೆಗಟ್ಟಿದ್ದಾರೆ.
ಸೋಂಕು ಹರಡುವಿಕೆ ತಡೆದಿದ್ದು ಹೇಗೆ?
ಮೊದಲೇ ಸಾಫ್ಟ್ವೇರ್ ಇಂಜಿನಿಯರ್ ಆಗಿ ಬಳಿಕ ರಾಜಕಾರಣಕ್ಕೆ ಬಂದಿದ್ದ ಸ್ವಾತಿ ತಿಪ್ಪೇಸ್ವಾಮಿ, ಪಂಚಾಯಿತಿ ವ್ಯಾಪ್ತಿಯ ನಾಲ್ಕು ಹಳ್ಳಿಗಳಲ್ಲಿ ಕೋವಿಡ್ ಟೆಸ್ಟ್ ಹೆಚ್ಚಿಸಿದ್ದಾರೆ. ಸೋಂಕು ಹರಡುವಿಕೆ ತಡೆ ಸಂಬಂಧ ಜಾರಿಗೊಳಿಸಲಾಗಿದ್ದ ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದಾರೆ. ಹೋಂ ಐಸೋಲೇಷನ್, ಸೋಂಕು ದೃಢಪಟ್ಟ ತಕ್ಷಣ ಸೂಕ್ತ ಚಿಕಿತ್ಸೆ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂಥದ್ದು, ಗ್ರಾಮಗಳಿಂದ ಗ್ರಾಮಕ್ಕೆ ಹೋಗುತ್ತಿದ್ದವರ ನಿಯಂತ್ರಣ, ಜಾಗೃತಿ, ಅರಿವು ಮೂಡಿಸುವ ಕಾರ್ಯ ಮಾಡಿದ ಪರಿಣಾಮ ಸೋಂಕು ಕಡಿಮೆಯಾಗಿದೆ.
ಸಿಎಂ ಬರೆದ ಪ್ರಶಂಸನಾ ಪತ್ರದಲ್ಲೇನಿದೆ?
"ಸೊಕ್ಕೆ ಗ್ರಾಮ ಪಂಚಾಯಿತಿ ಕೋವಿಡ್ ನಿಯಂತ್ರಣದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವುದು ಸಂತೋಷದ ಸಂಗತಿ. ಶುಚಿತ್ವ ಕಾಪಾಡುವುದು, ಜನರಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಬಳಕೆ, ಲಸಿಕೆಯ ಮಹತ್ವದ ಬಗ್ಗೆ ಅರಿವು ಮೂಡಿಸುವುದರಿಂದ ಕೊರೊನಾ ಸೋಂಕನ್ನು ಹತೋಟಿಗೆ ತರುವಲ್ಲಿ ಸೊಕ್ಕೆ ಗ್ರಾಮ ಪಂಚಾಯಿತಿ ಉತ್ತಮವಾಗಿ ಕಾರ್ಯನಿರ್ವಹಿಸಿರುವುದು ಶ್ಲಾಘನೀಯ.''
ಇತರೆ ಗ್ರಾಮ ಪಂಚಾಯಿತಿಗಳಿಗೂ ಮಾದರಿ ಆಗಲಿ
"ಗ್ರಾಮಗಳಲ್ಲಿ ಕೋವಿಡ್ ಸೋಂಕನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಹಕರಿಸುತ್ತಿರುವ ಸೊಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಸೇವಾಪರತೆ ಇತರೆ ಗ್ರಾಮ ಪಂಚಾಯಿತಿಗಳಿಗೂ ಮಾದರಿ ಆಗಲಿ'' ಎಂದು ಸಿಎಂ ಯಡಿಯೂರಪ್ಪ ಅವರು ಕಳುಹಿಸಿರುವ ಪತ್ರದಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯಿತಿ ಪಿಡಿಒ ಪರಸಪ್ಪ, ಜಗಳೂರು ಪಿಎಸ್ಐ ಸಂತೋಷ್ ಬಾಬು ಸೇರಿದಂತೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ದಾದಿಯರು, ಸಿಬ್ಬಂದಿ ಸೇರಿದಂತೆ ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ,'' ಎಂದು ಸ್ವಾತಿ ತಿಪ್ಪೇಸ್ವಾಮಿ ಹೇಳುತ್ತಾರೆ.
ಸಿಎಂ ಪತ್ರ ಬಂದಿರುವುದಕ್ಕೆ ಸಂತೋಷವಾಗಿದೆ
"ಸಿಎಂ ಅವರಿಂದಲೇ ಪತ್ರ ಬಂದಿರುವುದಕ್ಕೆ ಸಂತೋಷ ವ್ಯಕ್ತಪಡಿಸಿರುವ ಸ್ವಾತಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರು, ಸಿಬ್ಬಂದಿ, ಪಂಚಾಯಿತಿ ಸದಸ್ಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಸಹಕಾರದಿಂದ ಇದೆಲ್ಲಾ ಸಾಧ್ಯವಾಗಿದೆ. ನಾಲ್ಕು ಹಳ್ಳಿಗಳಲ್ಲಿ ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿದ್ದೇವೆ. ಜನರಿಗೆ ಹೋಂ ಐಸೋಲೇಷನ್, ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಿಕೆ, ಇನ್ನೊಬ್ಬರಿಗೆ ಸೋಂಕು ತಗುಲದಂತೆ ತಡೆಯಲಾಗಿದೆ. ಕೊರೊನಾ ವಾರಿಯರ್ಸ್ಗಳಿಗೆ ಸುರಕ್ಷತಾ ಕಿಟ್ ವಿತರಿಸಿದ್ದೇವೆ. ನಮ್ಮೆಲ್ಲಾ ಕಾರ್ಯ ಮೆಚ್ಚಿ ಸಿಎಂ ಯಡಿಯೂರಪ್ಪ ಪತ್ರ ಬರೆದಿರುವುದು ಖುಷಿ ತಂದಿದೆ. ಸಿಎಂಗೆ ಆಬಾರಿಯಾಗಿದ್ದೇನೆ,'' ಎಂದು ಗ್ರಾ.ಪಂ ಅಧ್ಯಕ್ಷೆ ಸ್ವಾತಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ.